ಶುಕ್ರವಾರ, ಏಪ್ರಿಲ್ 26, 2013

ವಿದ್ಯಾ ಕುಂದರಗಿ : ಕವಿತೆಗಳು


                   ವಿದ್ಯಾ ಕುಂದರಗಿ ಅವರ ಕವಿತೆಗಳು

  
ಬೆಳೆಯುವ ಭೂಮಿಯಾದವರು
ಈ ಭುವಿಯಲ್ಲಿ
ಹಸಿರೊಂದೇ ಬೆಳೆಯುವುದಿಲ್ಲ.....
ಹಸಿವೂ ಬೆಳೆಯುತ್ತದೆ.
ಮಾವೋಂದೆ ಚಿಗುರುವುದಿಲ್ಲ.....
ಬೇವೂ ಚಿಗುರುತ್ತದೆ.
ಕೋಗಿಲೆಯೊಂದೇ ಕೂಗುವುದಿಲ್ಲ......
ಕಾಗೆ ಗೂಬೆಗಳು ಆಲಾಪಿಸುತ್ತವೆ.
ಬೆಳದಿಂಗಳಷ್ಟೇ ಬೀರುವುದಿಲ್ಲ......
ಬಿಸಿಲೂ ರಣಗುಡುತ್ತದೆ.

ಜಡಿ ಮಳೆ ಇಂಗಿ ಹೋಗಿ
ತಂಪು ಮಾತ್ರ ಉಳಿಯುವುದಿಲ್ಲ......
ಊರಿದ ಹೆಜ್ಜೆ ಕಿತ್ತೆಳಿಸಲು
ಕಸರತ್ತು ಬಯಸುವ
ಕೆಸರೂ ಉಳಿಯುತ್ತದೆ.

ಸಹಿಸಿ ಬದುಕುವ ಜನರಿದ್ದಾರೆ
ಬಿಸಿಲ ಚರ್ಮದಲೂ
ಶುಭ್ರ ಹೃದಯವಿದ್ದವರು .......
ಮಣ್ಣ ಹುಡಿಯಲ್ಲಿ ಹುಡಿಯಾಗಿ
ದುಡಿದು, ಧಣಿಕರಿಗೆ ಸರಕಾಗಿ,
ಅವರ ಗೋಣಿಗಳ ತುಂಬಿ,
ಹೊಟ್ಟೆ ಬಿರಿಯೆ ಸುರಿದು
ತಾವ್ಹಸಿದು,ನೋವಿನಲೂ ನಕ್ಕವರು.

ಮಳೆ ಇಲ್ಲದೆ ಬೆಳೆದು
ಕೈಕೆಸರಾಗದೆ ಮೊಸರುಂಡವರ
ಅಕ್ಷರದ ಅಟ್ಟಹಾಸಕೆ ಹೆದರಿ
ಹಿಂಜರಿದವರು.
ಬೇವಿನಂತೆ ಚಿಗುರುತ್ತಾರೆ.
ಕಾಗೆಗೂಬೆಗಳೊಡನೆ ಹಾಡುತ್ತಾರೆ.
ಕೆಸರಿನೊಂದಿಗೆ ತಂಪಾಗುತ್ತಾರೆ.
ಬಿಸಿಲಿನೊಂದಿಗೆ ಒಣಗುತ್ತಾರೆ.
ವ್ಯತಿರಿಕ್ತವಾದ ಎಲ್ಲವನ್ನೂ ಸಹಿಸಿ
ಬದುಕ ಸಾಗಿಸುತ್ತಾರೆ.

ಸಿಮೆಂಟ್ ಕಾಡಿನವರ ಗುರಿಗಳು
ಇವರಿಗೆ ಗೋರಿಗಳಾದರೂ,
ದುಡಿಯುವ ಕೈಗಳಲ್ಲದೆ
ಬಿತ್ತುವ ಬೀಜವೂ ಆದವರು.
ಕಾಳು ತುಂಬುವ ಕಣಜವಲ್ಲದೆ
ಬೆಳೆಯುವ ಭೂಮಿ ಆದವರು
ಇವರು
ಬೆಳೆಯುವ ಭೂಮಿಯೂ ಆದವರು.
         *
                                                                                         









ಆದ್ಯಂತಗಳ ನಡುವಿನ ಅರ್ಧಸತ್ಯ

ನಿನ್ನ ಹಾಗೇಯೇ.......
ಮತೇರಿಸುವ ಕಂಗಳಲ್ಲಿ
ಬೆಸೆಯಬೇಕಿತ್ತೇ ಭಾವಗಳ?
ಹೊಗೆಸುತ್ತಿದ ತುಟಿಗಳ
ಚುಂಬಿಸಬೇಕಿತ್ತೇ?
ಪಾಪದ ಪಿಂಡಗಳ ಹೆರಲು
ತಿಟೆ ತೀರಿಸಲೇ ಬೇಕೆ?

ನಿನ್ನ ಹಾಗೆಯೇ......
ಘಮ್ಮೇನ್ನುವ ಗಬ್ಬು ನಾತಕ್ಕೆ
ಮೂಗು ಕಟ್ಟಿದರೂ
ಇಕ್ಕಟ್ಟಿನಲ್ಲೂ ಉಸಿರಬೇಕಿತ್ತೇನೆ?
ಗೆಳತಿ............................
ವಿಕೃತವಾದರೂ ಬದುಕ
ತಬ್ಬಿಕೊಳ್ಳಬೇಕಿತ್ತೇ?
ಅಂಧಕ್ಕಾರದಲ್ಲೂ ಹೃದಯ
ಬಿಚ್ಚಬೇಕಿತ್ತೇನೇ?
ಸಂಪ್ರದಾಯಕೆ
ಬಲಿಯಾಗಲೇಬೇಕೆ ಜೀವ?

ಒಂಟಿಯಾಗಿ ಸುರಿಸಿದ್ದು
ಬೆವರಲ್ಲವೇ?
ಏಕಾಂಗಿಯಾಗಿ ನೆರಳಿದ್ದು
ನೋವಲ್ಲವೆ?
ಒಂಟಿ ಹಕ್ಕಿಯ ಹಾಡಿಗೆ
ಎಲ್ಲವೂ ಕಿವುಡೆ?

ಅತಂತ್ರ ದಂಡೆಯ ಮೇಲೆ
ಪರತಂತ್ರ ಬದುಕಿನ
ತನನ ತಾಣಗಳಿಗೆ
ಹೆಜ್ಜೆ ಹೊಂದಿಸಿದ್ದರೆ......
ದುಡಿದ ದುಡಿತಗಳು
ನೊಂದ ನೋವುಗಳು
ಬೇಡುವ ಬಯಕೆಗಳು
ನಿನ್ನ, ನಿನ್ನಂಥವರ
ಅರ್ಥಹೀನ ದೃಷ್ಟಿಯಲ್ಲಿ
ನಿಜವಾಗುತ್ತಿದ್ದುವೇನೋ?
ಅವಕ್ಕೆ ಮೌಲ್ಯವಿರುತ್ತಿತ್ತು.
ಹೌದೇನೇ?

ಹಾಗಿದ್ದರೆ ಹೇಳೇ...........
ಹಾಗಿದ್ದರೆ ಹೇಳೇ
ಕಣ್ಣಿದ್ದು ಕುರುಡಾಗಿ
ಕಿವಿಯಿದ್ದು ಕಿವುಡಾಗಿ
ವಿಚಾರ ಶೂನ್ಯಳಾಗಿ
ಅಖಂಡ ಸತ್ಯದ ಆದ್ಯಂತಗಳ ನಡುವಿನ
ಪಂಚೇಂದ್ರೀಯ ರಹಿತ ಮುತ್ತೈದೆ.........
ಬದುಕು ಬಳಲಿತೇಕೇ
ಹೀಗೇ ಏಕಾಂಗಿಯಾಗಿ...............?
ಬಲಿಯಾಯಿತೇಕೇ
ಒಬ್ಬಂಟಿಯಾಗಿ................?
ಹೇಳೇ.................
ಅದು ತುಂಬು ಬದುಕೇ ?
ಹೇಳೇ.................
ಅದು ತುಂಬು ಬದುಕೇ                            
           *




*
ವಿದ್ಯಾ ಕುಂದರಗಿ,
ಉಪನ್ಯಾಸಕರು,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,
ಧಾರವಾಡ - 9900221367


                                           ಅಂಬರದೊಳಗನ ಅಕ್ಕಮಹಾದೇವಿಯರು    
                                                                       ವಿದ್ಯಾ ಕುಂದರಗಿ

ಬಹಿರಂಗದಲಿ,
ಬದುಕ  ಸಾಮ್ರಾಜ್ಯದೊಳಗೆ
ಅರಮನೆಯ ಮೃಗಗಳಿಗಂಜಿ,
ಉಡುತಡಿಯ ಅಡಿಅಡಿಯಲ್ಲೂ
ಉದರ ಪಾತಕಗಳ ಬೆನ್ನಿಗೆ ಕಟ್ಟಿಕೊಂಡೇ
ಅಟ್ಟಾಡಿಸಿ ದುಡಿದರೂ
ಹಸಿವೆಗೆ ಅಟ್ಟುಂಡು
ತೃಷೆಗೆ ಸೇದಿ ಕುಡಿದರೂ
‘ನಾನೇ ಆಳರಸ...’ಎನುವ
ಕೌಶಿಕ ಭಾವಗಳ ತೃಷೆಗೆ
ತಂಪೆರೆದ ಜೀವನದಿ,
ಮತ್ತೆ ಹಳಿಯುತ್ತೇವೆ ದುರ್ವಿಧಿ.

ಹೊರಗೊರಗೆ,
ಮುಕ್ತಳಾಗಿದ್ದಾಳೆ,
ಮೆರವಣಿಗೆ ಹೊರಟಿದ್ದಾಳೆ,
ಬಂಧನ ಕಳಚಿದ್ದಾಳೆ....
ಎಂದು ಭೋರಿಡುತ್ತಲೇ
ಪೊರೆ ಕಳಚಿದ ಭಾವ ......

ಹೃದಯ ಹಂದರದೊಳಗೆಲ್ಲೊ
ಸೀತೆ, ಸಾವಿತ್ರಿ, ರೇಣುಕೆ, ಮಂಡೋದರಿಯರ
ಮಹಾ ಸತಿತ್ವ ಮೊರೆತ.....
ಅಹಲ್ಯೆ, ಊರ್ಮಿಳೆ, ಶಬರಿಯರ
ಪವಿತ್ರಾತ್ಮದ ಕೊರೆತ......
ಅಂಬೆ,ಕುಂತಿ,ದ್ರೌಪದಿಯರ
ಪ್ರಯೋಗ ಪಥ.....
ಎಲ್ಲರ ತಲ್ಲಣ,ತನನ,ರಣರಣ.

ಥೇಟ್ ಪಡಿಯಚ್ಚುಗಳು
ನಾವು
ಎನೇಂದರೇನು?
ರಣಭಯಂಕರ ಅಭಯಾರಣ್ಯದೊಳಗೆ
ಹಂಬಲದ ಗೂಡು ಕಟ್ಟಿ,
ಬಂಧಗಳ ಅಡಕಲೊಟ್ಟಿ,
ಭಾವಗಳ ಬೀಡುಬಿಟ್ಟಿರುವ ....
ಸಾಂತ್ವನದ ಬೆನ್ನು ತಟ್ಟಿರುವ
ನಾವು-ನೀವುಗಳು






ಅಂತರಂಗದೊಳಗೆ
ಆಸೆಯಳಿದು ಭಾವ ಬೆತ್ತಲಾದರೂ
ಮೈಸುತ್ತಿಕೊಂಡಿರುವ ಅಗಣಿತಸೂತ್ರಗಳ
ಭವಪಾಶ ಬಿಡಿಸಿಕೊಳ್ಳಲಾಗದ......,
ಬಂಧಮುಕ್ತ ಕದಳಿ ಕೂಡ
ಅಗಮ್ಯ,ಅಗೋಚರ,ಅಪ್ರತಿಮ
ಅರಸಿ ಹೊರಟ
ಅಂಬರದೊಳಗನ ಅಕ್ಕಮಹಾದೇವಿಯರು.

     *  ವಿದ್ಯಾ.ಕುಂದರಗಿ.