ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ತೆರೆ
ಪುಟ್ಟರಾಜರಿಗೆ ಭಾರತರತ್ನ ನೀಡಿ
ಗದಗ: ಸಾವಿರಾರು ಅಂಧ ಮಕ್ಕಳ ಬಾಳಿಗೆ ಬೆಳಕು ನೀಡಿದ ಪುಟ್ಟರಾಜ ಗವಾಯಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿ ಗೌರವಿಸಬೇಕು ಎಂದು ವಿಶ್ರಾಂತ ಕುಲಪತಿ ಡಾ. ಎಸ್.ಪಿ.ಹಿರೇಮಠ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಮಂಗಳವಾರ ರಾತ್ರಿ ನಡೆದ ಜಾತ್ರಾ ಮಹೋತ್ಸವದ ಮಂಗಲೋತ್ಸವದಲ್ಲಿ ಐದು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪುಟ್ಟರಾಜರು ಸ್ವತಃ ಅಂಧರಾಗಿದ್ದರೂ 76 ಪುಸ್ತಕ ರಚಿಸಿರುವುದು ವಿಸ್ಮಯವಾಗಿದೆ. ತಮ್ಮ ಬದುಕನ್ನು ಸಂಗೀತ, ಸಾಹಿತ್ಯ ಹಾಗೂ ಅಂಧರ ಸೇವೆಗೆ ಮೀಸಲಿರಿಸಿದರು. ಸಂಗೀತ ಶಿಕ್ಷಣ ಪಡೆದ ಅನೇಕ ಶಿಷ್ಯರು ದೇಶ, ವಿದೇಶಗಳಲ್ಲಿ ಪ್ರಖ್ಯಾತ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಗೀತ ಸಾಧಕ ಪುಟ್ಟರಾಜರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡುವ ಮೂಲಕ ಗೌರವಿಸಬೇಕು ಎಂದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಿ.ಬಿ ಖಾಡೆ ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ. ಹಿಂದಿನ ದಿನಗಳಲ್ಲಿ ಸಾಹಿತ್ಯ ಸಂಗ್ರಹಿಸಲು ಹಳ್ಳಿಗಳಿಗೆ ಅಲೆದಾಡಬೇಕಿತ್ತು. ಆದರೆ, ಇಂದು ಸಾಹಿತ್ಯ ಸಂಗ್ರಹ ಸರಳವಾಗಿದೆ ಎಂದರು.
ಜಿ.ಬಿ.ಖಾಡೆ ಹಾಗೂ ಡಾ.ಸತ್ಯಾನಂದ ಪಾತ್ರೋಟ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಜಿ.ಬಿ.ಖಾಡೆ ಹಾಗೂ ಡಾ.ಸತ್ಯಾನಂದ ಪಾತ್ರೋಟ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ರಬಕವಿ ಬ್ರಹ್ಮಾನಂದಾಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹಾಗೂ ರಟಕಲ್ ರೇವಣಸಿದ್ಧ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಡಾ.ಸಿದ್ದಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ ಮತ್ತಿತರರು ಪಾಲ್ಗೊಂಡಿದ್ದರು.
ರಮೇಶ ಕಲ್ಲನಗೌಡರ ರಚಿಸಿದ ಡಾ. ಪುಟ್ಟರಾಜಕವಿ ಗವಾಯಿಗಳು, ಡಾ. ಎಸ್.ಪಿ. ಹಿರೇಮಠ ರಚಿಸಿದ ರಾವ್ ಬಹಾದ್ದೂರ ಷಣ್ಮುಖಪ್ಪ ಅಂಗಡಿ, ಕೆ.ಎಂ. ರೇವಣ್ಣ ರಚಿಸಿದ ಜನಪದ ತಜ್ಞ ಕೆ.ಆರ್. ಲಿಂಗಪ್ಪ, ಡಾ.ಎಂ.ಎಂ. ಕಲಬುರ್ಗಿ ಅವರ ಕೃತಿ ಕಿತ್ತೂರು ಸಂಸ್ಥಾನ ಸಾಹಿತ್ಯ ಭಾಗ-3, ಸಂಗಮ್ಮ ಕರವೀರ ಶೆಟ್ಟರ ಅವರ ಕೃತಿ ಸಂಗಮ್ಮ ಕರವೀರಶೆಟ್ರ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಪ್ರೊ. ರಮೇಶ ಕಲ್ಲನಗೌಡರ ಗ್ರಂಥ ಪರಿಚಯಿಸಿದರು. ಬಸವರಾಜ ಅಡವಳ್ಳಿ, ಗೋಡನಾಯಕದಿನ್ನಿಯ ರೇವಣಸಿದ್ದಯ್ಯ ಹಿರೇಮಠ ಹಾಗೂ ಸಂಗಡಿಗರು ವಚನ ಸಂಗೀತ ನೀಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು. ಬಾಹುಬಲಿ ಜೈನರ, ಗೀತಾಂಜಲಿ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು.