ಮಂಗಳವಾರ, ಜೂನ್ 25, 2013

ಜಾನಪದ



ಆಧುನಿಕ ಸಾಹಿತ್ಯದ ಜನಮುಖಿಯ ತಳಪಾಯ “ಜಾನಪದ”

                                                       - ಡಾ. ಪ್ರಕಾಶ ಗ. ಖಾಡೆ

ಜನಪದ ಸಾಹಿತ್ಯ ಜನ ಬದುಕಿದ, ಬದುಕುತ್ತಿರುವ ಎಲ್ಲ ಪ್ರದೇಶಗಳಲ್ಲೂ ಎಲ್ಲ ಕಾಲಕ್ಕೂ
ಉಳಿದುಕೊಂಡು ಬಂದಿದೆ. ಯಾವುದೇ ದೇಶದ ಮೊದಲ ಸಾಹಿತ್ಯ ಆ ದೇಶದ ಜನಪದ ಸಾಹಿತ್ಯವೇ ಆಗಿದೆ. ಈ ಕಾರಣವಾಗಿ ಅದರ ಒಡಲೊಳಗೇ ಉದಿಸಿ ಬಂದ ಶಿಷ್ಟ ಸಾಹಿತ್ಯದ ಬೇರುಗಳು ಜಾನಪದವೇ ಆಗಿರುವುದು ಸರ್ವವಿಧಿತ. ಕಾಲ ಕಾಲಕ್ಕೆ ಕಾವ್ಯದ ರೂಪ ಕಟ್ಟುವಿಕೆಯ ಶೈಲಿ ಬದಲಾಗುತ್ತ ಬಂದರೂ ಜಾನಪದರಿಂದಲೇ ಹೊಸತನ ಪಡೆದುಕೊಂಡು ನೆಲೆನಿಂತಿರುವುದು ಕಾಣುತ್ತೇವೆ. ಇವತ್ತು ತನ್ನ ಸತ್ವ ಸೊಗಡು ಕಳೆದುಕೊಂಡಿರುವ ಶಿಷ್ಟ ಸಾಹಿತ್ಯ ಜೀವಂತವಾಗಲು ಜನಪದ ಸಾಹಿತ್ಯದ ಬೇರಿನಿಂದ ನೀರು ಕುಡಿಯಬೇಕಾಗಿದೆ. ಕೇವಲ ಹಳೆಯದರ ಪಳೆಯುಳಿಕೆಯಾಗದಂತೆ ಜನಪದ ಸಾಹಿತ್ಯ ಇವತ್ತು ಆಧುನಿಕತೆಯ ಶಕ್ತಿ, ಸೌಂದರ್ಯ, ವೈಚಾರಿಕತೆ ಮೈಗೂಡಿಸಿಕೊಂಡು ಬೆಳೆದು ನಿಲ್ಲ ಬೇಕಾದ ಕಾಲ ಬಂದಿದೆ. ಹೀಗಾಗಿ ಜನಪದದಿಂದ ಶಿಷ್ಟ ಸಾಹಿತ್ಯ, ಶಿಷ್ಟ ಸಾಹಿತ್ಯದಿಂದ ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಕೊಡಕೊಳ್ಳುವ ಕಾರ್ಯ ನಡೆದೆ ಇದೆ. ಈ ಮೂಲಕ ಹೃದಯದಲ್ಲಿ ನಿಂತ ಜನಪದರು ವೈಚಾರಿಕ ನೆಲೆಗಟ್ಟಿನಲ್ಲಿ, ವೈಚಾರಿಕ ನೆಲೆಗಟ್ಟಿನಲ್ಲಿದ್ದ ಶಿಷ್ಟರು  ಹೃದಯದಲ್ಲಿ ನಿಂತು ಬದುಕುವ ಸಂದರ್ಭ ಸೃಷ್ಠಿಯಾಗಿದೆ. ‘ಆಧುನಿಕತೆಯಿಂದ ಜನಪದವೂ ಜೀವಂತವಾಗುವುದು. ಜನಪದ ಸಾಹಿತ್ಯದ ಸತ್ವ ಸೊಬಗುಗಳಿಂದ ಇಂದಿನ ಹೆಚ್ಚಿನ ಕವಿಗಳು ಶಿಷ್ಟ ಸಾಹಿತ್ಯ ರಚಿಸುತ್ತಿರುವ ಅವರ ಕಾವ್ಯ ಜೀವಂತವಾಗಿರಲು ಕಾರಣವಾಗಿದೆ. ಇಲ್ಲದಿದ್ದರೆ ಅವರ ರಚನೆಗಳೆಲ್ಲ ಕಾಗದದ ಹೂವುಗಳಾಗುವವು’ಎಂಬ ಚೆನ್ನಣ್ಣ ವಾಲೀಕಾರರ ಮಾತುಗಳು ಜಾನಪದವನ್ನು ಅರಗಿಸಿ ಕೊಂಡ ಶಿಷ್ಟತೆಯ ಪ್ರಸ್ತುತತೆಯನ್ನು ಕಂಡರಿಸುತ್ತದೆ.
                ಆದಾವ ನಮ ಜೋಳ
                ಉಳಿದಾವ ನಮ ಹಾಡ
   ಎನ್ನುವಂತೆ ಜನಪದಕ್ಕೆ ಅಂತ್ಯ ಎಂಬುದು ಇಲ್ಲ. ಅದು ಬೇರೆ ಬೇರೆ ರೂಪದಿಂದ ಹೊರ ಹೊಮ್ಮುತ್ತಲೇ ಇರುತ್ತದೆ. ವೈಜ್ಞಾನಿಕ ನಾಗರಿಕತೆಯ ಹಾಗೂ ಅರ್ವಾಚೀನ ಕಲೆಗಳ ತಾಯಿ ಬೇರುಗಳನ್ನು ಪ್ರಾಚೀನ ಜನಪದದಲ್ಲಿ ಗುರುತಿಸುತ್ತೇವೆ.

                           ಖ್ಯಾತ ವಿದ್ವಾಂಸರಾದ ದೇ.ಜವರೇಗೌಡರು ಹೇಳುವಂತೆ:
“ಮುತ್ತಜ್ಜನೆಂತು ಮೊಮ್ಮಗನಿಗೆ ಪೂಜ್ಯನೋ ಅಂತೆಯೇ ಶಿಷ್ಟಪದಕ್ಕೆ ಜಾನಪದ ಆರಾಧ್ಯವಾಗುತ್ತದೆ. ಶಿಷ್ಟ ಸಾಹಿತ್ಯ ಯಾವಾಗಲೂ ಎಂದಿನಿಂದಲೂ ಜನಪದ ಸಾಹಿತ್ಯಕ್ಕೆ ಋಣಿಯಾಗಿದೆ. ಹೋಮರ್, ವಾಲ್ಮೀಕಿ, ವ್ಯಾಸಾದಿ ಕವಿಗಳೆಲ್ಲರೂ ಅಜ್ಞಾತ ಜನಪದ ಕವಿಗಳಿಗೆ ನಾನಾ ರೀತಿಯಲ್ಲಿ ಋಣಿಗಳಾಗಿದ್ದಾರೆನ್ನುವುದು ಸರ್ವವೇದ್ಯ ಸಂಗತಿಯಾಗಿದೆ.” ಶಿಷ್ಟ ಸಾಹಿತ್ಯ ಮಡುಗೊಂಡು ಪಾಚಿ ಬೆಳೆದು ಬಗ್ಗಡಗೊಂಡು ನಾರುವಂತಾದಾಗ ಜನಪದ ಸಾಹಿತ್ಯ  ವಾಹಿನಿ ಅದರ ಮೇಲೆ ಹರಿದು ಪಾಚಿ ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು. ವಡ್ರ್ಸವರ್ತ, ಬರನ್ಸ,  ಸ್ಕಾಟ್, ಪುಸ್ಕಿನ್, ಕುಮಾರವ್ಯಾಸ, ವಚನಕಾರರು ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಅದರಂತೆ ಪಂಪ ತನ್ನ ಕಾವ್ಯದ ಉನ್ನತಿಗೆ ಪ್ರೌಢದ ಜತೆಗೆ ದೇಸೀಯನ್ನು ಸಮೀಕರಿಸಿದ್ದಾನೆ.ಶಿವಶರಣರು ತಮ್ಮ ಹಿಂದಿನ ಚಂಪೂ ಪರಂಪರೆಯನ್ನು ಮುರಿದು ವಚನ ಪರಂಪರೆಯನ್ನು ಪ್ರತಿಷ್ಠಾಪಿಸಲು ಜನಪದ ಸಾಹಿತ್ಯವನ್ನೇ ಆಶ್ರಯಿಸಿದರು. ಜನಪದ ಭಾಷೆ, ಛಂದಸ್ಸು ಶಿಷ್ಟ ಸಾಹಿತ್ಯದ ಹುಟ್ಟಿಗೆ ಮೂಲವಾಗಿದೆ. ಗರತಿಯ  ತ್ರಿಪದಿಯೇ ಶಿಷ್ಟರ ಚೌಪದಿ, ಷಟ್ಪದಿ ಹುಟ್ಟಿಗೆ ಬುನಾದಿಯಾಗಿದೆ. ಜನಪದ ಛಂದಸ್ಸು, ಜೈನರ ಚಂಪೂ, ವೀರಶೈವರ ವಚನ ರಗಳೆ, ಬ್ರಾಹ್ಮಣರ ಷಟ್ಪದಿ, ದಾಸರ ಹಾಡು, ಸರ್ವಜ್ಞನ ತ್ರಿಪದಿಗಳಿಗೆ ಆಶ್ರಯವಾಗಿದೆ.
               ಜನಪದ ಗೀತೆ ಎಲ್ಲವನ್ನು ಒಳಗೊಂಡ ಬಯಲು ಆಲಯ. ಅದು ಉದ್ದೇಶಪೂರ್ವಕವಾಗಿ ಕಲಾತ್ಮಕವಾದುದಲ್ಲ. ಅದರ ಜೀವಂತಿಕೆಯೇ ಅದರ ಕಲಾತ್ಮಕತೆ, ಅನುಭವ ಮತ್ತು ಶಾಸ್ತ್ರರೂಪದ ಇಲ್ಲಿನ ವಸ್ತು ಜನರ ಸಮೂಹ ಕೇಂದ್ರಿತ ಆಸಕ್ತಿ, ಮಾತೃ ನಂಬಿಕೆಗಳ ಮೇಲೆ ನಿಂತಿರುವಂಥದಾಗಿದೆ. ‘ವ್ಯಕ್ತಿ ವ್ಯವಸ್ಥೆಯ ಸಂಬಂಧ, ಸಾಮಾಜಿಕ ರಚನೆ, ಸಂಘರ್ಷ ರೂಪದ ಜೀವನ, ಮಾನವ ಜೀವನದ ಸ್ಥಿತಿಗತಿಗಳ ನೀತಿ, ನಿಯಮ ನಿಷ್ಠೆ, ಸಾರ್ಥಕತೆಗಳು ಆಚಾರ, ವಿಚಾರ, ಸಂಪ್ರದಾಯ ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ’ ಹೀಗೆ ಒಟ್ಟು ಬದುಕಿನ ಪ್ರತಿ ಮಗ್ಗಲುಗಳನ್ನು ಆವರಿಸಿಕೊಂಡಿರುವ ಜನಪದವು ಶಿಷ್ಟ ಪ್ರಕಾರಕ್ಕೆ ತನ್ನ ಕೊಡುಗೆ ನೀಡುತ್ತ ಉಳಿದುಕೊಂಡು ಬಂದಿರುವುದು ಅದರ ಚಲನ ಶೀಲತೆಗೆ ಸಾಕ್ಷಿಯಾಗಿದೆ.    
        ಚಂಪೂ, ವಚನÀ, ಷಟ್ಪದಿ, ನವೋದಯ ಸಾಹಿತ್ಯ ಮುಂತಾಗಿ ಕನ್ನಡ ಕಾವ್ಯ ಪರಂಪರೆಯ ಉದ್ದಕ್ಕೂ ಜಾನಪದದ ಇತಿಹಾಸ ಗುರುತಿಸಬಹುದು.ತ್ರಿಪದಿಗಳು, ಕಥನಕವನಗಳು, ಗೊಂದಲಿಗರ ಹಾಡುಗಳು, ಲಾವಣಿಗಳು, ಕೋಲಾಟದ , ಬಯಲಾಟದ ಪದಗಳು, ಡೊಳ್ಳಿನ ಪದಗಳು.. ಹೀಗೆ ಅನೇಕ ರೀತಿಯ ಪದ್ಯ ರೂಪಗಳು ಬಹುಕಾಲದಿಂದಲೂ ನಡೆದು ಬಂದಿರುವುದು ಇತಿಹಾಸದ ಮುಂದುವರಿಕೆಯಾಗಿದೆ.
ಇಂದಿಗೂ ಜನಪದ ಕಾವ್ಯ ಪರಂಪರೆ ಜೀವಂತವಾಗಿದೆ. ಗೊಂದಲಿಗರು, ಹೆಳವರು ತಾವು ಕಲಿತ ಹಾಡುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ತಾವು ಹೋದೆಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಹಿಮ್ಮೇಳದಲ್ಲಿ ಉಪಯೋಗಿಸಿಕೊಳ್ಳುತ್ತಾರೆ,
                      ಮುಂದೆ ಅವರೂ ಸ್ವತಂತ್ರವಾಗಿ ಹಾಡಬಲ್ಲವರಾಗುತ್ತಾರೆ. ಶಕ್ತರಾದವರು ಹೊಸ ಹಾಡುಗಳನ್ನು ಕಟ್ಟಿಕೊಂಡು ಜೋಡಿಸಿಕೊಳ್ಳುತ್ತಾರೆ. ಕಂಸಾಳೆ ಸಿರಿಯ ದೇವರ ಗುಡ್ಡರು ಗುರುವಿನ ಮೂಲಕ ಹಾಡುಗಳನ್ನು ಕಷ್ಟಪಟ್ಟು ಕಲಿಯುತ್ತಾರೆ ಇದು ಪರಂಪರೆಯಿಂದ ಸಾಗಿ ಬಂದ ಇತಿಹಾಸ ಗುರುತಿಸುತ್ತದೆ.
        ಜಾನಪದಕ್ಕೆ ಪ್ರಭು ಸಂಸ್ಕ್ರತಿಯಲ್ಲಿ ಹುಟ್ಟಿಕೊಂಡ ಸಾಹಿತ್ಯ ತತ್ತ್ವಗಳನ್ನು ಇವತ್ತಿಗೂ ಅನ್ವಯಿಸಿಕೊಳ್ಳುವ ಬಗ್ಗೆ ಹಿ.ಶಿ. ರಾಮಚಂದ್ರೇಗೌಡರ ವಿರೋಧವಿದೆ. ಶ್ರೇಷ್ಠತೆಯ ಮಾನದಂಡಗಳು ವರ್ಗಸಮಾಜ ಮತ್ತು ಬಹುಸಮಾಜದ ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಬೇರೆ ಬೇರೆಯಾಗುತ್ತವೆ. ಕಾವ್ಯ ಧ್ವನಿ-ಸಾಂಸ್ಸøತಿಕ ಧ್ವನಿ ಅದು ಅಲೌಕಿಕ ಧ್ವನಿ ಅಲ್ಲ. ಇದರ ಪರಿಣಾಮವಾಗಿ ಸಂಸ್ಕøತಿ ಹುಟ್ಟಿಕೊಳ್ಳುತ್ತದೆ. ಸಾಹಿತ್ಯ ಸ್ಠೃಷ್ಟಿಯಾಗುತ್ತದೆ. ಇಲ್ಲಿ ಶಿಷ್ಟ ಮತ್ತು ಜನಪದ ಸಾಹಿತ್ಯದ ಸಂದರ್ಭಗಳನ್ನು ಗಮನಿಸಬೇಕು.                                              
     ‘ಶಿಷ್ಟ ಜನಪದವಾದರೆ ಅದಕ್ಕೆ ಚಿರಂತತೆ ಬರುವುದು. ಜನಪದ ಶಿಷ್ಟವಾದರೆ ಅದಕ್ಕೆ ಸಾವುಂಟಾಗುವುದು’ ಎಂಬ ಚೆನ್ನಣ್ಣ ವಾಲೀಕಾರರ ಮಾತನ್ನು ಇಲ್ಲಿ ಗಮನಿಸಬೇಕು. ಶಿಷ್ಟರ ಸಾಹಿತ್ಯ ಶಿಷ್ಟರ ಮಧ್ಯೆಯೇ ಬೆಳೆದು ಅಲ್ಲಿಯೇ ಪರ್ಯಾವಸಾನಗೊಳ್ಳುತ್ತದೆ. ಶಿಷ್ಟ ಸಾಹಿತ್ಯದಲ್ಲಿ ಕವಿ, ಗಮಕಿ, ಕೆಲವೊಮ್ಮೆ ಸಹೃದಯ ಇರುತ್ತಾರೆ. ಶಿಷ್ಟ ಸಾಹಿತ್ಯದ ಪ್ರದರ್ಶನಕ್ಕೆ ಸಂದರ್ಭ ಒದಗಿಸಿಕೊಂಡು ಅದಕ್ಕಾಗಿಯೇ ವೇದಿಕೆ ನಿರ್ಮಿಸಬೇಕು. ಶಿಷ್ಟ ಸಾಹಿತಿ ತಾನೇ ರಚಿಸಿದ ಕವನವನ್ನು ಬಾಯಿಪಾಠ ಮಾಡಿ ಹಾಡಬೇಕಾಗುತ್ತದೆ. ಆದರೆ ಜನಪದದಲ್ಲಿ ಹೀಗಿಲ್ಲ. ಜನಪದ ಗೀತೆಗಳನ್ನು ಹಾಡುವವರು ಅವರದೇ ಆದ ರಾಗ, ಭಾವ, ತಾಳ, ಮೇಳಗಳನ್ನು ಅಳವಡಿಸಿಕೊಂಡು ಹಾಡುತ್ತಾರೆ. ಹಾಗೆ ಹಾಡುವಾಗ ಭಾವಕ್ಕನುಗುಣವಾಗಿ ಸಂದರ್ಭ ತಕ್ಕಂತೆ ಹಿಗ್ಗಿಸುವ ಕುಗ್ಗಿಸುವ ಸಾಮಥ್ರ್ಯವೂ ಅವರದಾಗಿರುತ್ತದೆ. ಆದ್ದರಿಂದ ಸಹೃದಯವೇ ಜನಪದ, ಜಾನಪದವೇ ಸಹೃದಯ. ಜನಪದ ಅದಕ್ಕಾಗಿಯೇ ನಿರ್ಮಿಸಿ ಮತ್ತೆ ಕಿತ್ತೆಸುವ ಅಗತ್ಯವಿಲ್ಲ. ಅದು ಜನಸಾಮಾನ್ಯರ ನಿತ್ಯ ಜೀವನದೊಂದಿಗೆ ಬೆರೆತು ಅವರೊಡನೆಯೇ ಜೀವಿಸುತ್ತದೆ. ಜೊತೆಗೆ ಜನಪದ ಕವಿ ಅನುಭಾವಿಯಾಗಿದ್ದರಿಂದ ಅದನ್ನು ಹೇಳುವ ಚತುರನಾಗಿರುತ್ತಾನೆ. ಹೀಗೆ ಶಿಷ್ಟ ಮತ್ತು ಜನಪದ ಸಾಹಿತ್ಯ ತನ್ನ ನೆಲೆಯಲ್ಲಿ ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತವೆ.
        ‘ಜನಪದ ಕಾವ್ಯದಲ್ಲಿ ಚಿಕ್ಕಪುಟ್ಟ ಪದಗಳೇ ಹೆಚ್ಚು, ಕಾರಣ ದೀರ್ಘ ಕವಿತೆಗಳನ್ನು ಕಟ್ಟುತ್ತ ನೆನಪಿಡುವುದು ಕಠಿಣ’ ಎಂದು ಹೇಳುವ ಮಾತಿದೆ. ಆದರೆ ಇದು ತಪ್ಪು. ಜನಪದ ಕಾವ್ಯಗಳು ಕೇವಲ ತ್ರಿಪದಿ ರೂಪದ ಪುಟ್ಟ ಪುಟ್ಟ ಕೃತಿಗಳಾಗದೆ ಅನೇಕ ಮಹಾಕಾವ್ಯಗಳು ಜಾನಪದದ ವಿಸ್ತಾರವನ್ನು ಸಾರಿವೆ.’ ಈ ಕಾವ್ಯಗಳ ಹಿರಿಮೆಯನ್ನು ದೇ. ಜವರೇಗೌಡರು ಹೀಗೆ ದಾಖಲಿಸುತ್ತಾರೆ:
       ‘ಮಲೆಯ ಮಾದೇಶ್ವರ ಕಾವ್ಯ, ದೇವರ ಗುಡ್ಡದ ಮಹಾಕಾವ್ಯ ಕಂಸಾಳೆ ವಾದ್ಯದೊಡನೆ ಏಳೆಂಟು ರಾತ್ರಿ ಅವಿಚ್ಛಿನ್ನವಾಗಿ ಅದರ ಗಾಯನ ಸಾಗುತ್ತದೆ. ವೈವಿಧ್ಯಮಯವಾದ ಛಂದೋಬಂಧಗಳಲ್ಲಿ ರಚಿತವಾದ ಲಲಿತಕಾವ್ಯವಿದು...
                     
ನೀಲಗಾರರಿಗೆ  ಮೀಸಲಾದ ಮಂಟೇಸ್ವಾಮಿ ಕಾವ್ಯ ಒಂದೇ ಒಂದು ಛಂದದಲ್ಲಿ ತಂಬೂರಿಯೊಡನೆ ನಿರರ್ಗಳವಾಗಿ ಹರಿಯುತ್ತದೆ. ಮೊದಲನೆಯದರಲ್ಲಿ ಮೂವತ್ತೆರಡು ಸಾವಿರ ಸಾಲುಗಳೂ, ಎರಡನೆಯದರಲ್ಲಿ ಇಪ್ಪತ್ನಾಲ್ಕು ಸಾವಿರ ಸಾಲುಗಳಿದ್ದು ಕಲೇವಾಲಕ್ಕಿಂತ ಗಾತ್ರದಲ್ಲಿ ದೊಡ್ಡದೆಂದೇ ಹೇಳಬೇಕು. ನೀಲಗಾರರ ಮಂಟೇಸ್ವಾಮಿ ಕಾವ್ಯವನ್ನು ‘ಧರೆಗೆ ದೊಡ್ಡವರ ವಚನ’ವೆಂದು ಕರೆಯುತ್ತಾರೆ. ಸುಮಾರು ಹದಿನೈದು ಸಾವಿರ ಸಾಲುಗಳು ವಿಸ್ತಾರವುಳ್ಳ, ಹತ್ತು ವಿಭಾಗಗಳಲ್ಲಿ ದೊರೆಯುವ ‘ಜನಪದ ಬಸವ ಪುರಾಣ’ವೊಂದು ಸೊಗಸಾದ ಮಹಾಕಾವ್ಯ. ಚೌಡಿಕೆ ಸಂಪ್ರದಾಯದ ಎಲ್ಲಮ್ಮನ ಕಾವ್ಯ ಮತ್ತು ಕಾಡುಗೊಲ್ಲರ ಸಂಪ್ರದಾಯದ ಜುಂಜಪ್ಪನ ಕಾವ್ಯಗಳು ಮಹಾ ಕಾವ್ಯದ ವಿಸ್ತಾರ ಹೊಂದಿರದಿದ್ದರೂ ಗುಣಲಕ್ಷಣಗಳಿಂದ  ಸಮೃದ್ಧವಾದ ಜನಪ್ರಿಯ ಕೃತಿಗಳು’ ಹೀಗೆ ಕೆರೆಯ ಹೊನ್ನಮ್ಮ, ಕಾಳಿಂಗರಾಯ, ಚೆನ್ನಿಗ ಚೆಲುವಯ್ಯ ಮುಂತಾದ ಮಹಾಕಾವ್ಯಗಳು ಕನ್ನಡ ಜನಪದ ಕಾವ್ಯದ ಗುಣ ಗಾತ್ರಗಳೆರಡರಿಂದಲೂ  ಸಮೃದ್ಧವಾಗಿ, ಬೇರೆ ಕಡೆ ಸಿಗದ ಮೌಲಿಕ ಸಾಹಿತ್ಯ ‘ಜಾಗತಿಕ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗ ಬಲ್ಲವುಗಳಾಗಿವೆ’ ಎಂದಿದ್ದಾರೆ.
        ಶಿಷ್ಟ ಸಾಹಿತ್ಯÀ ಕೇವಲ ಮನಸ್ಸಿನ ಸಾಹಿತ್ಯ, ಜನಪದ ಸಾಹಿತ್ಯ ದೇಹ ಮತ್ತು ಮನಸ್ಸಿನ ಸಾಹಿತ್ಯ ಇದು ಕ್ರಿಯೆಯೊಂದಿಗೆ ಹುಟ್ಟುತ್ತದೆ. ಬೀಸುವಾಗ, ಕುಟ್ಟುವಾಗ, ಅಲೆದಾಡುವಾಗ, ದೋಣಿ ನಡೆಸುವಾಗ ಹೀಗೆ ಒಟ್ಟು ಕ್ರಿಯೆಯಲ್ಲಿಯೇ ರೂಪುಗೊಂಡು ಬಳಕೆಯಾಗುತ್ತದೆ. ಶಿಷ್ಟ ಸಾಹಿತ್ಯವು ಏಕಸೃಷ್ಟಿಗೆ, ಏಕ ಶ್ರೇಷ್ಠತೆಗೆ ಸಂಬಂಧಪಟ್ಟಿದಾದರೆ, ಜನಪದ ಸಾಹಿತ್ಯ ಪುನರ್ ಸೃಷ್ಠಿಯಾಗುವಂಥದು. ಒಂದು ವ್ಯಕ್ತಿ ಸೃಷ್ಠಿ, ಮತ್ತೊಂದು ಸಮೂಹ ಸೃಷ್ಠಿ. ಜನಪದ ಸಾಹಿತ್ಯ ಸಮಾಜನಿಷ್ಠವಾಗಿ, ವಿಷಯನಿಷ್ಠವಾಗಿ ಮಾತನಾಡುತ್ತದೆ. ಅದು ವಸ್ತುನಿಷ್ಠವಾಗಿ ಮಾತನಾಡುವುದಿಲ್ಲ. ಹೀಗೆ ಅದರ ಪ್ರತ್ಯೇಕ ಅಸ್ತಿತ್ವಗಳನ್ನು ಗುರುತಿಸಿದರೂ ಅವು ಒಂದರೊಳಗೊಂದು  ಬೆಸೆದುಕೊಂಡು ಸೃಷ್ಟಿಯಾಗುತ್ತಿರುವುದು ಜನಪದದ ಪುನರ್ ಸೃಷ್ಟಿಯ ದ್ಯೋತಕವಾಗಿದೆ.
          ‘ಜಾನಪದಕ್ಕೆ ಸಾವಿಲ್ಲ; ಅದು ಭಿನ್ನ ರೂಪದಲ್ಲಿ ಮುಂದುವರೆಯುತ್ತದೆ’ ಎಂಬ ಮಾತಿನಂತೆ ‘ಜಾನಪದ ಪಳಿಯುಳಿಕೆ’ ಎಂಬ ಮಾತೂ ಇದೆ. ಪಳೆಯುಳಿಕೆ ಎಂದರೆ ಅಪ್ರಸ್ತುತ ಪಳೆಯುಳಿಕೆ ಎಂದಲ್ಲ, ಪಳೆಯುಳಿಕೆಯ ಪುನಃಸೃಷ್ಟಿ ಅಂದರೆ ಪಳೆಯುಳಿಕೆಯನ್ನು ಪುನಃಸೃಷ್ಟಿಸುತ್ತಾ ಪ್ರಸ್ತುತಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಜಾನಪದ ಎಂಬ ತಿದ್ದುಪಡಿಯೊಂದಿಗೆ ತಿಳಿದುಕೊಳ್ಳಬೇಕು ಎಂಬುದು ಅದರ ನಿರಂತರ ಪುನಃಸೃಷ್ಟಿ ಕ್ರಿಯೆಯನ್ನು ಕಾಣುತ್ತೇವೆ. *

ಡಾ.ಪ್ರಕಾಶ ಗ.ಖಾಡೆ, ,ಮನೆ ನಂ135, ಸೆಕ್ಟರ್ ನಂ63, ನವನಗರ, ಬಾಗಲಕೋಟ -587103.
  ಮೊ; 9845500890 .

ಬಾಗಲಕೋಟ ತಾಲೂಕು ಸಮಕಾಲೀನ ಕಾವ್ಯ


                      ಬಾಗಲಕೋಟೆ ತಾಲೂಕು ಸಮಕಾಲೀನ ಕಾವ್ಯ


                                                               -ಡಾ.ಪ್ರಕಾಶ ಗ.ಖಾಡೆ

    ಬಾಗಲಕೋಟೆ ತಾಲೂಕು ಕಾವ್ಯ ಪರಂಪರೆಯು ತುಂಬಾ ಮೌಲಿಕವಾಗಿ ಒಡಮೂಡಿದೆ.ಜಾನಪದ,ವಚನ,ಸೂಫಿ ಪರಂಪರೆಯಿಂದ ಆಧುನಿಕ ಕಾವ್ಯದ ಅಪರೂಪದ ಮಾದರಿಗಳನ್ನು ಕನ್ನಡಕ್ಕೆ ನೀಡಿದ ಕೊಡುಗೆ ಈ ನೆಲದ್ದು.ಘಟಪ್ರಭೆಯ ಒಳ ಸೆಳವು,ಕೃಷ್ಣೆಯ ಸೀಮಾ ಪ್ರವಹಿಸುವಿಕೆಯ ವಿಶಿಷ್ಟ ನದಿ ಸಂಸ್ಕøತಿಯ ಪ್ರತೀಕವಾಗಿ ಇಲ್ಲಿನ ಕಾವ್ಯ ಮೈದೋರಿದೆ.ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜನಪದ ಗೀತೆಗಳನ್ನು ಹಾಡಿಕೊಂಡು ಬರುವ ಜನಪದರಿದ್ದಾರೆ,ವಚನ ಪರಂಪರೆಗೆ ಸಾಕ್ಷಿಯಾಗಿ ಇಲ್ಲಿಯ ಹಲವು ನೆಲೆಗಳು ಪುನೀತವಾಗಿವೆ. ಶಿರೂರಿನ ಶಾಸನ ಕವಿ ಹಬ್ಬಣ್ಣ ನಾಯಕ ಕೀರ್ತಿವಂತ ಕವಿ.ಕನ್ನಡ ದಾಸ ಪರಂಪರೆಯ ಶ್ರೀಮಂತಿಕೆಗೆ ಪ್ರಸನ್ನ ವೆಂಕಟದಾಸರು ಬಾಗಲಕೋಟೆಯನ್ನು ತಮ್ಮ ನೆಲೆಯಾಗಿಸಿಕೊಂಡಿದ್ದರು. ಅನುಭಾವಿ ವರಕವಿ ಮಧುರಚೆನ್ನರಿಗೆ ಜ್ಞಾನ ದೀಕ್ಷೆಯನ್ನು ನೀಡಿದ್ದು ಬಾಗಲಕೋಟೆ.ಆಧ್ಯಾತ್ಮದ ಕಾವ್ಯ ಸರಳತೆಯ ಪ್ರತೀಕವಾಗಿದ್ದ ಜೀವಣ್ಣ ಮಸಳಿ,ಕನ್ನಡ ನವ್ಯ ಕಾವ್ಯದ ಅಪರೂಪದ ಕೃಷಿಗೈದ ಆನಂದ ಝುಂಜರವಾಡ,ದಲಿತ ಬಂಡಾಯದ ಘಟ್ಟಿ ಧ್ವನಿಯಾದ ಡಾ.ಸತ್ಯಾನಂದ ಪಾತ್ರೋಟ, ಆಧುನಿಕ ಕಾವ್ಯಕ್ಕೆ ದೇಸಿಯತೆ ತುಂಬಿದ ಡಾ.ಪ್ರಕಾಶ ಖಾಡೆ, ಸಹೃದಯ ಸಹಬಾಳ್ವೆಯ ಕವಿ ಡಾ.ಮೈನುದ್ದೀನ ರೇವಡಿಗಾರ,ಪ್ರೀತಿ ಬದುಕಿನ ಕಾವ್ಯ ಕಟ್ಟಿದ ಅಬ್ಬಾಸ ಮೇಲಿನಮನಿ, ಮಾನವೀಯ ಸಂಬಂಧಗಳನ್ನು ಹೆಣೆದ ಬಸವರಾಜ ಹೂಗಾರ,ತ್ರಿಪದಿಗಳ ಕಾವ್ಯ ಸೊಗಸು ಚೆಲ್ಲಿದ ಗುರುಸ್ವಾಮಿ ಗಣಾಚಾರಿ,ಚುಟುಕು ಕಾವ್ಯಕ್ಕೆ ಚುರುಕು ತಂದ ಶ್ಯಾಮ ಹುದ್ದಾರ ಮತ್ತು ಪ್ರಲ್ಹಾದ ಹುದ್ದಾರ ಬಾಗಲಕೋಟೆ ತಾಲೂಕಿಗೆ ಸೇರಿದವರೆಂಬುದು ಹೆಮ್ಮೆಯ ಸಂಗತಿ.
ಘಟ್ಟೆಯ ದಂಡೆಯ ಕಬ್ಬಿನ ರಸವು
ಬೆಲ್ಲದ ಅಚ್ಚು ಬಲು ಮೆಚ್ಚು ಮಾಲಿಂಗೇಶಗೆ
ಹಾಸಿದ ಪಟ್ಟಿ ಝಾಡಿಯಂದವ ನೋಡಿರಯ್ಯ
ಸೋನೆ ಮಳೆ ನಡುಗುವ ಚಳಿಗೆ
ಬೆಚ್ಚನ್ನ ಕುಂದರಗಿ ಕಂಬಳಿ ಹೊದಿಯಿರಯ್ಯ
ತುಳಸಿಗಿರಿಯಗ ನಮಿಸಿ ಕಲಾದಗಿ ಚಿಕ್ಕು ಸವಿಯಿರಯ್ಯ.
 ಕವಿ ಹನಮಂತ ತಾಸಗಾಂವಕರ ಅವರ ಈ ಸಾಲುಗಳು ಬಾಗಲಕೋಟ ಜಿಲ್ಲೆಯ ವೈಶಿಷ್ಟ್ಯವನ್ನು ಚಿತ್ರಿಸುತ್ತವೆ.ದಲಿತ ಬಂಡಾಯ ಮನೋಭಾವದ ಕವಿತೆಗಳಿಂದ ಕನ್ನಡ ಕಾವ್ಯಕ್ಕೆ ಪ್ರೀತಿ ಸ್ಪರ್ಷ ನೀಡಿದ ಡಾ.ಸತ್ಯಾನಂದ ಪಾತ್ರೋಟ ಅವರ ಜಾಜಿ ಮಲ್ಲಿಗೆ ಕವನ ಅತ್ಯಂತ ಜನಪ್ರಿಯವಾಗಿದೆ.


ಡಾ.ಸತ್ಯಾನಂದ ಪಾತ್ರೋಟ

ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ
ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ
ಸತ್ತ ನರಗಳ ಸುತ್ತ ಹಸಿದ ಹಾವುಗಳಿಲ್ಲ
ಟೊಂಗೆ ಟೊಂಗೆಯ ತುಂಬ ಬಿರಿವ ಮೊಗ್ಗು.
ಹೀಗೆ ಅವರ ಕಾವ್ಯ ಧ್ವನಿ ರೂಪಿತವಾಗಿದೆ.ನವ್ಯ ನವೋದಯ ಕಾವ್ಯದ ಬೆರೆಕೆಯಲ್ಲಿ ಬರೆಯುತ್ತಿರುವ ಆನಂದ ಝುಂಜರವಾಡ ಕನ್ನಡದ ಮುಖ್ಯ ಕವಿ.
ನನ್ನ ರಸಿಕನಿಗೆ ತಬ್ಬಲು ಮುಗಿಲಂಗಳಕೆ
ನಿಲುಕದ ಸೂಚೀಪರ್ಣ ತೋಳುಗಳೀರಲಿ
ತನ್ನ ಚಿತೆಯ ಕಾವಿನಲ್ಲೂ ನಲ್ಲೆಯ ಮೊಲೆಗಾವು
ಹುಡುಕುವ ನಲ್ಲನ ಉನ್ಮತ್ತ ವಾಂಛೆ ಇರಲಿ
ತನ್ನೇಲ್ಲ ಶೂನ್ಯ ಏಕಾಂತಗಳನ್ನೂ ನಡು-ಸರೋವರದಲ್ಲಿ
ಅಡಗಿ ಗೆಲ್ಲುವೆನೆಂಬ ಪ್ರಾಕೃತಿಕ ಛಲವಿರಲಿ.
 ಝುಂಜರವಾಡರ ಈ ಕವಿತೆಯ ಸಾಲುಗಳು ಅವರ ಕಾವ್ಯ ಶಕ್ತಿಯನ್ನು ಪ್ರಕಟಪಡಿಸುತ್ತವೆ.ಅವರ ‘ಕವಿತಾನ..ಮರತವ್ರಿಗೆ ಕವೀನ್ನ ಮರೀಲಿಕ್ಕೆಷ್ಟೊತ್ತು.’ಎಂಬ ಕಾವ್ಯ ಧ್ವನಿಯ ಹಿಂದಿನ ನೋವು ಸೃಜನತೆಯ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ.
 ನವೋದಯೋತ್ತರ ಕಾವ್ಯದ ಬಿರುಸಿನಲ್ಲಿ ಬರೆಯಲಾರಂಭಿಸಿದ ಡಾ.ಪ್ರಕಾಶ ಖಾಡೆ ಸಂಕೀರ್ಣ ಕಾವ್ಯದ ವಿಶಿಷ್ಟಾಭಿವ್ಯಕ್ತಿ ರಚನೆಗಳನ್ನು ನೀಡಿದ್ದಾರೆ.

ನಾವೂ ಜೋರು ಮಾಡಬಹುದು
ಸಿಕ್ಕವರ ಮೇಲೆ
ಏನು ಉಳಿಯುತ್ತದೆ ಹೇಳಿ
ಇಲ್ಲಿ ಪ್ರೀತಿ ಇರದ ಮೇಲೆ.
ಪ್ರೀತಿಯ ಅರ್ಥವನ್ನು ವಿಸ್ತರಿಸಿದ ಡಾ.ಖಾಡೆ ಅವರ ಈ ಸಾಲುಗಳು ಮಾನವೀಯತೆಯನ್ನು ಸಾರುತ್ತವೆ.ಆಧುನಿಕ ವಚನಗಳನ್ನು ರಚಿಸಿ ಹೆಸರಾದ ಗುರುಸ್ವಾಮಿ ಗಣಾಚಾರಿ ಅವರು
ಭಾವವಿಲ್ಲದ ಕಾವ್ಯ ಜೀವವಿಲ್ಲದ ದೇಹ
ಹಾವ ಭಾವರಿಯದ ನರ್ತಕಿ ನಟನೆ ಪರಿ
ಕಾವ್ಯ ರಸಹೀನ ಗುರುಲಿಂಗ.
ಎಂದು ಕಾವ್ಯ ಕುರಿತು ಹೇಳುತ್ತರೆ.ಗೇಯತೆ,ಪ್ರಾಸಬದ್ಧತೆ,ಲಾಲಿತ್ಯ,ಸುಂದರ ಪದಪುಂಜಗಳು ಇವರ ಕವಿತೆಗಳ ವಿಶೇಷ.ಕವಿ ಅಬ್ಬಾಸ ಮೇಲಿನಮನಿ ಅವರ ಕವಿತೆಗಳು ಜೀವದ್ರವ್ಯದ ಸೆಳಕುಗಳಾಗಿವೆ.
ಗಿಡದ ಟೊಂಗೆ ಟೊಂಗೆಗೂ
ಕಾಳಿಂಗ ಹರಿದಾಡುತ್ತಿದ್ದರೂ
ಹಕ್ಕಿ ಗೂಡು ಕಟ್ಟದೆ
ಬಿಡುವುದಿಲ್ಲ,ನಿಲ್ಲಿಸುವುದಿಲ್ಲ
ಜೀವದೊಲವಿನ ಹಾಡು.
ಮೂರು ಗಳಿಗೆ ಧಾವಂತದಲ್ಲಿ ಬದುಕು ರೂಪಿಸಿಕೊಳ್ಳುವ ಮನುಷ್ಯನ ತುಡಿತಕ್ಕೆ ನಿತಾಂತ ಸಂಭ್ರಮವಿದೆ.ನಾವೇ ಹುಟ್ಟುಹಾಕಿದ ಜಾತಿ,ಸ್ವಜನ ಪಕ್ಷಪಾತ,ಗುಂಪುಗಾರಿಕೆ,ಸ್ವಾರ್ಥ,ದ್ವೇಷ,ಕೌರ್ಯಗಳ ಗೆಲ್ಲಲು ಎದೆಗಾರಿಕೆಯ ವಿಶ್ವಾಸ ಬೇಕಾಗಿದೆ.ಮುಳ್ಳುಗಳ ನಡುವೆ ಅರಳಿಕೊಳ್ಳುವ ಗುಲಾಬಿಯ ಪ್ರೀತಿಯೇ ಅದಕ್ಕೆ ಸಾಕಾಗಿದೆ ಎನ್ನುತ್ತಾರೆ ಕವಿ ಅಬ್ಬಾಸ ಮೇಲಿನಮನಿ.ನವ್ಯ ಕಾವ್ಯದ ಬರವಣಿಗೆಯನ್ನು ಇಂದಿಗೂ ಉಳಿಸಿಕೊಂಡು ಬಂದ ಕವಿ ಅಂಬಾದಾಸ ವಡೆ ಕಾವ್ಯವನ್ನು ಜನಮುಖಿಯಾಗಿಸಿದ್ದಾರೆ.
ಕಾಗಿ ನಿನ್ನ ಮ್ಯಾಲ ಹಾಡ ಕಟ್ಟೊದು
ಹಾಡ ಕಟ್ಟಿ ಹಾಡೂದಂದ್ರ
ಎಂಥಾ ಹಾಸ್ಯಾಸ್ಪದ ಹೌದಲ್ಲೋ
ನಿನ್ನ ಕರೆ ಬಣ್ಣಕ್ಕ ,ಕೆಟ್ಟ ಸ್ವರಕ್ಕ,
ನಿನ್ನ ಖಾಯಂ ಕತ್ತಲಗವ್ಯಾಗಿಟ್ಟ ನನ್ನ ಹಿರ್ಯಾರು
ನಿನ್ನ ಮ್ಯಾಲಿನ ನನ್ನ ಹಾಡಕ್ಕ ಖೊಳ್ಳಂತ ನಗೋದೆನು
ಆಶ್ಚರ್ಯವಿಲ್ಲ ಬಿಡು..
    ಹೀಗೆ ವಡೆಯವರು ಕಾವ್ಯದ ವಸ್ತು ಆಯ್ಕೆಯಲ್ಲಿ ಹೊಸತನ ಹುಡುಕುತ್ತಾರೆ. ಕವಿಗಳಾದ ಡಾ.ವಿಜಯಕುಮಾರ ಕಟಗಿಹಳ್ಳಿಮಠ,ಡಾ.ಬಿ.ಕೆ.ಹಿರೇಮಠ,ಪಿ.ವೈ.ಗಿರಿಸಾಗರ,ಮಲ್ಲಿಕಾರ್ಜುನ ಯಾಳವಾರ,ಧೃವಾಚಾರ್ ಕಾಖಂಡಕಿ,ಸಂಗು ಕೋಟಿ,ಉಮೇಶ ತಿಮ್ಮಾಪುರ,ಗಂಗಾಧರಯ್ಯ ಜಾಲಿಬೆಂಚಿ,ಎಸ್.ಎಸ್.ಹಳ್ಳೂರ,ಬೀರಪ್ಪ ಹಳಮನಿ,ರಾಜು ಯಾದವ, ನಾರಾಯಣ ಯಳ್ಳಿಗುತ್ತಿ,ಮಹಾಬಳೇಶ್ವರ ಗುಡಗುಂಟಿ,ವೀರೇಶ ಖೋತ,ಎಚ್ಕೆ ಆವಟಿ, ಡಾ.ವೀರೇಶ ಬಡಿಗೇರ, ಶಂಕರ ಲಮಾಣಿ,ಶ್ರೀನಿವಾಸ ಅಧ್ಯಾಪಕ ,ದೊಡ್ಡಣ್ಣ ಗದ್ದನಕೇರಿ,ನಾಗರಾಜ ಪೂಜಾರ,ಕೃಷ್ಣ ಕೋರಾ,ಸುಭಾಸ್ಚಂದ್ರ ಜಾಧವ,ಸಿದ್ದರಾಜ ಸೊನ್ನದ, ಶಂಕರ ಹೂಗಾರ,ಮೊದಲಾದವರು ತಾಲೂಕಿನ ಜನಪ್ರಿಯ ಕವಿಗಳು,ಬಾಗಲಕೋಟ ತಾಲೂಕಿನ ಮಹಿಳಾ ಕಾವ್ಯವು ಚೆಲುವಾಗಿ ಚೆಲ್ಲುವರಿದಿದೆ.ಶಾಂತಾಬಾಯಿ ಸಾಬಾದಿ,ರೇಖಾ ಕಾಖಂಡಕಿ,ವೀಣಾ ಶಾಂತೇಶ್ವರ,ಡಾ,ಶಕುಂತಲಾ ದುರ್ಗಿ,ಡಾ.ಮಲ್ಲಿಕಾ ಘಂಟಿ,ಡಾ.ಸರೋಜಿನಿ ಪಾವಟೆ,ಡಾ.ಶಶಿಕಲಾ ಮರಿಬಾಶೆಟ್ಟಿ,ಸುಮಂಗಲಾ ಬಾದಾಮಿ,ರುದ್ರಮ್ಮ ಕೋರಿ,ಎನ್,ರಾಜೇಶ್ವರಿ,ಮಹೇಶ್ವರಿ ಕೋಟಿ,ಸುನಂದಾ ಕನಮಡಿ,ಜಾಸ್ಮೀನ್ ಕಿಲ್ಲೆದಾರ,ಜಯಶ್ರೀ ದೇಶಪಾಂಡೆ,ಸುರೇಖಾ ದತ್ತಾತ್ರೇಯ,ಹೇಮಾ ದೇಸಾಯಿ,ಮಂಜುಳಾತಾಯಿ ಅಂಗಡಿ,ರಾಜೇಶ್ವರಿ ಕಂಠಿ,ಗೌರಿ ಕಂಠಿ, ಗುರಮ್ಮ ಸಂಕೀನ,ಸಂಗೀತಾ ಸಿಕ್ಕೇರಿ,ಮೀನಾಕ್ಷಿ ಮುಂಡಗನೂರ,ವೀರಮ್ಮ ಪಾಟೀಲ,ಮಹಾದೇವಿ ಹೊಸಮನಿ ಮೊದಲಾದವರು ಕಾವ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.ಒಟ್ಟಾರೆ ಘಟಪ್ರಭೆಯ ತಟದ ಬಾಗಿಲು ಕೋಟೆಗೆ ಸಮಕಾಲೀನ ಕಾವ್ಯ ತೋರಣ ಹಚ್ಚ ಹಸುರಿನಿಂದ ಕೂಡಿದೆ. #