ಶುಕ್ರವಾರ, ಜುಲೈ 19, 2013

ಮುಧೋಳ ಮಳೆ..

ಮುಧೋಳ ಮಳೆ : ಹನಿಗಳ ಆಭರಣ

ಡಾ.ಶಿವಾನಂದ ಕುಬಸದ. 

     ನಮ್ಮಲ್ಲಿ ಮಳೆಯಾದರೂ ಸುದ್ದಿಯೇ...ಅದೂ ಮಳೆಗಾಲದಲ್ಲಿ ಆದರೂ ಕೂಡ! ಅಚ್ಚ ಕಪ್ಪು ಮೋಡಗಳು ಸುಳಿದಾಡುತ್ತಿದ್ದು ಅನೇಕ ದಿನಗಳಾದವು. ಮಳೆಯೇ ಇಲ್ಲ. ಅದರಿಂದಾದ ಒಂದೇ ಪರಿಣಾಮವೆಂದರೆ ಸೋಲಾರ್ ದಲ್ಲಿ ನೀರು ಕಾಯುವುದಿಲ್ಲ..! ಪುಣ್ಯಕ್ಕೆ ಬೆಳಗಾವಿಯಲ್ಲೋ ಮಹಾರಾಷ್ಟ್ರದಲ್ಲೋ ಮಳೆಸುರಿದು ನಮ್ಮ “ಘಟಪ್ರಭೆ” ಒಂದಿಷ್ಟು ನೀರು ಹೊತ್ತು ತಂದು ನಮ್ಮ ನೆಲವನ್ನು ಹಸಿರಾಗಿಸುತ್ತಾಳೆ. ನಾವು ಯದ್ವಾ ತದ್ವಾ ನೀರುಣಿಸಿ ನಮ್ಮ ಹೊಲಗಳನ್ನು ಜೌಗಾಗಿಸಿ, “ಸವುಳು-ಜವುಳು” ಕಾರ್ಯಕ್ರಮಕ್ಕೆ ಗಂಟು ಬೀಳುತ್ತೇವೆ...!!


ಇಂದು ಮಧ್ಯಾಹ್ನ ಸಣ್ಣಗೆ ಮಳೆ ಸುರಿದಾಗ ನಮ್ಮ ಮನೆಯದುರಿನ ತೂಗುಕುರ್ಚಿಯಲ್ಲಿ ಕುಂತು ಅದನ್ನು ನೋಡಿದ್ದೇ ಒಂದು ಅದ್ಭುತ ಅನುಭವ. ಸೃಷ್ಟಿಯ ಮಾಯೆಯೇ ಅಂಥದು.. ಸಣ್ಣಗೆ ಸುರಿದ ಮಳೆಯ ಹನಿಗಳನ್ನು ಗಿಡದ ಎಲೆಗಳು ಧರಿಸಿ, ಆಮೇಲೆ ಸ್ವಲ್ಪವೇ ಬಾಗಿ, ಹನಿಗಳು ಧೊಪ್ಪನೆ ಬಿದ್ದು ಪೆಟ್ಟಾಗಬಾರದೆಂದು ಪ್ರೀತಿಯಿಂದ ನೆಲಕ್ಕಿಳಿಸುವ ಪರಿಯ ಕಂಡು ಸೋಜಿಗ ನನಗೆ. ಹೂವುಗಳೆಲ್ಲ ತೃಪ್ತಿಯಿಂದ ಮುಖವರಳಿಸಿ ಕಣ್ಣು ಹಿಗ್ಗಿಸಿ ಮಳೆಯನ್ನು ಇಳೆಗೆ ಬರಮಾಡಿಕೊಳ್ಳುತ್ತಿರುವ೦ತೆ ಕಾಣುತ್ತಿದ್ದವು. ಹುಲ್ಲುಹಾಸು ಹುರುಪುಗೊಂಡು ಹನಿಗಳ ಆಭರಣ ಧರಿಸಲು ಸಜ್ಜಾಗಿ ನಿಂತಿತ್ತು.

ಇಂಥ ದೃಶ್ಯ ನಮಗೊದಗುವುದೇ ಅಪರೂಪ. ಮಳೆ ಬರುವಾಗ ಒಂದೋ ನಾವು ರಾತ್ರಿಯ ನಿದ್ದೆಯಲ್ಲಿರುತ್ತೇವೆ. ಬೆಳಗಾಗೆದ್ದು ರಸ್ತೆ ರಾಡಿಯಾದಾಗಲೇ ಗೊತ್ತು ಮೋಡಗಳು ಕರಗಿದ್ದವೆನ್ನುವುದು. ಸೋಮಾರಿ ಮನಸ್ಸು ಖುಷಿ ಪಡುತ್ತಿರುತ್ತದೆ, “ಇವತ್ತು ವಾಕಿಂಗ್ ಇಲ್ಲ” ಎಂದು..! ಇಲ್ಲವೇ ಮಧ್ಯಾಹ್ನದ ರೋಗಿಗಳ ಮಧ್ಯೆ ಮಳೆ ನೋಡುವದಂತೂ ದೂರ ಬಂದ ಅತಿಥಿಗಳನ್ನು ಮಾತಾಡಿಸುವುದೂ ಅಸಾಧ್ಯ.

ಇಂದು ‘’ಅಷಾಢ ಏಕಾದಶಿ’’ ಪೇಷಂಟ ಕಡಿಮೆ. ಹೀಗಾಗಿ ಈ ಭಾಗ್ಯ ಒದಗಿ ಬಂತು..!!