ಸೋಮವಾರ, ಮಾರ್ಚ್ 28, 2016

ಅವಧಿ.-ಡಾ.ಖಾಡೆ ಕವಿತೆಗಳು.

ಮಲಗಿದವರ ಕನಸುಗಳಿಗೆ ಬೆಂಕಿ ಹಚ್ಚಿ..

Dr.Khade Prakash-PP

ಡಾ ಪ್ರಕಾಶ ಗ ಖಾಡೆ
ಬೆರಗಾಗಬೇಕಿಲ್ಲ
ಬೆವರ ಹಸಿವುಂಡ ಹಸಿರಿಗೆ,
ಬೆರಗಾಗಬೇಕಿಲ್ಲ
ಬಸವಳಿದು ಉಳಿದ ಹೆಸರಿಗೆ,
ಬೆರಗಾಗಬೇಕಿಲ್ಲ
ಬೆಂಕಿಯಲ್ಲಿ ಬೆಂದ ಕಬ್ಬಿಣಕ್ಕೆ,
ಬೆರಗಾಗಬೇಕಿಲ್ಲ
ಸುಟ್ಟುಕೊಂಡು ಕುದ್ದ ಅನ್ನಕ್ಕೆ,
ಬೆರಗಾಗಬೇಕಿಲ್ಲ
ನೋವುಂಡು ಹೆತ್ತ ಒಡಲಿಗೆ,
ಬೆರಗಾಗಬೇಕಿಲ್ಲ
ಗಾಣಕ್ಕೆ ಸಿಕ್ಕ ಕಬ್ಬಿಗೆ,
ಬೆರಗಾಗುವದಾದರೆ
ಆಗಿಬಿಡಿ ಕನಸ ಕದ್ದವರ
ಹುಸಿ ಕನಸಿನ ಗೋಪುರಕ್ಕೆ
ಮತ್ತೆ ನಾಳಿನ ಭ್ರಮೆಗಳಿಗೆ.

traditional lamp
ಕಬ್ಬ ಹಿಂಡಿ ರಸವ ಪಡೆವರು
ರವದಿಯ ತಿಪ್ಪೆಗೆಸೆದು.
ರಸವ ಸವಿದವರು ವಿರಸ ಹೆತ್ತರು.
ರವದಿ ಗೊಬ್ಬರವಾಗಿ ಹೊಸ ಹೂವ ಅರಳಿಸಿತು.
ಬದುಕು ಉಣದವರ ಹಸಿವಿಗೆ
ಏನು ಕೊಟ್ಟರೂ ತುಂಬದ ಹೊಟ್ಟೆ.
traditional lamp

ನನಗೆ ಮಾತುಗಳ
ಕೇಳಬೇಕಿತ್ತು
ಮೌನವಿದ್ದವರ ಬಳಿಹೋದೆ.
ನನಗೆ ಕೋಪಿಸಿಕೊಂಡವರ
ನೋಡಬೇಕಿತ್ತು
ಮುಗುಳ್ನಗುವವರ ಬಳಿಹೋದೆ.
ನನಗೆ ನೆತ್ತಿಸುಡುವ
ಉರಿಬಿಸಿಲು ಬೇಕಿತ್ತು
ಹಾಲು ಚೆಲ್ಲಿದ ಬೆಳದಿಂಗಳ ಅರಸಿ ಹೋದೆ.
ನನಗೆ ಈಗ ಅಸಮಾಧಾನವಿಲ್ಲ
ಹೋದಲ್ಲಿ ಬಂದಲ್ಲಿ
ಸಮಾಧಾನದ ಗಾಳಿ ಬೀಸುತ್ತಿದೆ
ದೇವರೆಂಬವರು ಮನುಷ್ಯರಾಗಿದ್ದಾರೆ
traditional lamp

ನನಗೆ ಕನಸುಗಳಿದ್ದವು
ಜೊತೆಯಲ್ಲಿ ನೀವಿದ್ದೀರೆಂದು,
ನನಗೆ ಕತ್ತಲೆಯ ಭಯವಿರಲಿಲ್ಲ
ಬೆಳಕಾಗಿ ನೀವಿದ್ದೀರೆಂದು,
ನನಗೆ ನೋವಿನ ಅನುಭವ ಗೊತ್ತಿರಲಿಲ್ಲ
ಸಾಂತ್ವನ ಹಂಚಲು ನೀವಿದ್ದೀರೆಂದು,
ನನಗೆ ನಾಳೆಗಳ ನಂಬಿಕೆ ಇರಲಿಲ್ಲ
ಇಂದೂ ನನ್ನೊಂದಿಗೆ ನೀವಿದ್ದೀರೆಂದು,
ಈಗ ಹೃದಯಕ್ಕೆ ಮಾತು ಬಂದಿದೆ,
ಮನಸ್ಸಿನ ತುಂಬ ನೀವಿದ್ದೀರೆಂದು,
ಕಾಲಕ್ಕೆ ಬೆರಗಾಗಿ ನಿಜದ ಬದುಕಾಗಿ
ನಂಬುಗೆ ಹುಸಿಯಾಗಿ ಸಾಗಿದ್ದೇ ದಾರಿ
ಈಗ ಹೇಳಲು ಏನೂ ಉಳಿದಿಲ್ಲ ನೀವಿದ್ದೀರೆಂದು.
traditional lamp

ಕತ್ತಲೆಗೆ ಬೆಳಕ
ಹೊತ್ತಿಸುವುದು ಬೇಡಾಗಿದೆ,
ಇರುಳಲ್ಲೂ ಸುಳ್ಳುಗಳೇ
ಸತ್ಯದ ಬಾಗಿಲು ಮುಚ್ಚಿವೆ,
ಕಣ್ಣಿದ್ದವರೂ ಏನೂ
ಕಾಣಿಸುತ್ತಿಲ್ಲ ಎಂಬ
ಕನವರಿಕೆಯಲ್ಲಿ ಮುಳುಗಿದ್ದಾರೆ,
ದಾರಿಗೆ ಮುಳ್ಳನ್ನು
ಹೂವ ತಂದವರೇ ಹಚ್ಚಿದ್ದಾರೆ,
ತುಂಬಿದ ಕೊಡಕ್ಕೂ
ಕಂಡಕಂಡಲ್ಲಿ ತೂತು ಕೊರೆದಿದ್ದಾರೆ,
ಮನದ ಸ್ವಚ್ಚತೆಗೆ ತನುವ ಮೈಲಿಗೆಯಾಗಿಸಿ
ಹೃದಯದ ಗಾಯಗಳಿಗೆ
ಹೊಸ ನೋವುಗಳ
ಪಾಳಿಗೆ ಬಿಟ್ಟಿದ್ದಾರೆ,
ಇಂಥದೇ ನಾಳೆ ಇರುತ್ತದೆ ಎಂದು ಯಾರು ಹೇಳಿದರು.
ಕನಸುಗಳಿಗೆ ತೆರೆದಷ್ಟು ಆಕಾಶ
ಬಯಲ ತುಂಬ ಬೆಳಕಿನ ಪ್ರಕಾಶ.
traditional lamp

ಬರೆಯುವವರ
ಕೊಲ್ಲುವ ಕಟುಕರ ಆತ್ಮಕ್ಕೆ
ಶಾಂತಿ ಕೋರಲು
ಓದುವದ ನಿಲ್ಲಿಸಬೇಕೆಂದಿದ್ದೇನೆ,
ಕೇಳಿಸಿಕೊಳ್ಳದ
ಕಿವಿ ಪೊರೆಯ ಮುಚ್ಚಿಕೊಂಡವರ
ಎದಿರು ತಲೆ ಚಚ್ಚಿಕೊಳ್ಳದೇ
ಮಾತಿಗೆ ಕೀಲಿ ಜಡೆಯಬೇಕೆಂದಿದ್ದೇನೆ.
ಯಾವ ಹಾಡಲ್ಲೂ
ಹೃದಯದಲ್ಲಿ ಅದ್ದಿ ತೆಗೆದ ಪದಗಳಿಲ್ಲದೇ
ರಕ್ತ ಕಾರುವ ಭಾವಗಳ ನಾಗಾಲೋಟಕ್ಕೆ
ತತ್ತರಿಸಿ ಹೋಗದೆ ಶಾಂತಿ
ಬೀಜಗಳ
ಜತನವಾಗಿಟ್ಟುಕೊಳ್ಳಬೇಕೆಂದಿದ್ದೇನೆ.
ಎಲ್ಲವೂ ಇದ್ದು ಬದುಕುವ
ಜೀವ ಜಾತ್ರೆಗೆ ಯಾರೂ ಕರೆದುಕೊಂಡು ಹೋಗಬೇಕಿಲ್ಲ,
ಎಲ್ಲರೂ ಖರೀದಿಗೆ ನಿಂತಿದ್ದಾರೆ
ಮಲಗಿದವರ ಕನಸುಗಳಿಗೆ
ಬೆಂಕಿ ಹಚ್ಚಿ.
-ಡಾ.ಪ್ರಕಾಶ ಗ.ಖಾಡೆ

ಗುರುವಾರ, ಏಪ್ರಿಲ್ 16, 2015

ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ತೆರೆ

ಪುಟ್ಟರಾಜರಿಗೆ ಭಾರತರತ್ನ ನೀಡಿ

ಗದಗ: ಸಾವಿರಾರು ಅಂಧ ಮಕ್ಕಳ ಬಾಳಿಗೆ ಬೆಳಕು ನೀಡಿದ ಪುಟ್ಟರಾಜ ಗವಾಯಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿ ಗೌರವಿಸಬೇಕು ಎಂದು ವಿಶ್ರಾಂತ ಕುಲಪತಿ  ಡಾ. ಎಸ್.ಪಿ.ಹಿರೇಮಠ ಹೇಳಿದರು. 
ನಗರದ ತೋಂಟದಾರ್ಯ ಮಠ­ದಲ್ಲಿ ಮಂಗಳವಾರ ರಾತ್ರಿ ನಡೆದ ಜಾತ್ರಾ ಮಹೋತ್ಸವದ ಮಂಗಲೋ­ತ್ಸವ­ದಲ್ಲಿ ಐದು ಗ್ರಂಥ ಬಿಡುಗಡೆಗೊಳಿಸಿ ಮಾತ­ನಾಡಿದ ಅವರು, ಪುಟ್ಟರಾಜರು ಸ್ವತಃ ಅಂಧರಾಗಿದ್ದರೂ  76 ಪುಸ್ತಕ ರಚಿಸಿ­ರುವುದು ವಿಸ್ಮಯವಾಗಿದೆ. ತಮ್ಮ ಬದುಕನ್ನು ಸಂಗೀತ, ಸಾಹಿತ್ಯ ಹಾಗೂ  ಅಂಧರ ಸೇವೆಗೆ ಮೀಸಲಿರಿಸಿದರು. ಸಂಗೀತ ಶಿಕ್ಷಣ ಪಡೆದ ಅನೇಕ ಶಿಷ್ಯರು ದೇಶ, ವಿದೇಶಗಳಲ್ಲಿ ಪ್ರಖ್ಯಾತ ಕಲಾ­ವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಗೀತ ಸಾಧಕ  ಪುಟ್ಟರಾಜರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡುವ ಮೂಲಕ ಗೌರವಿಸಬೇಕು ಎಂದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ  ಜಿ.ಬಿ ಖಾಡೆ ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ.  ಹಿಂದಿನ ದಿನಗಳಲ್ಲಿ ಸಾಹಿತ್ಯ ಸಂಗ್ರಹಿಸಲು ಹಳ್ಳಿಗಳಿಗೆ ಅಲೆದಾಡ­ಬೇಕಿತ್ತು. ಆದರೆ, ಇಂದು ಸಾಹಿತ್ಯ ಸಂಗ್ರಹ ಸರಳವಾಗಿದೆ ಎಂದರು.
ಜಿ.ಬಿ.ಖಾಡೆ ಹಾಗೂ ಡಾ.ಸತ್ಯಾನಂದ ಪಾತ್ರೋಟ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ರಬಕವಿ ಬ್ರಹ್ಮಾನಂದಾಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹಾಗೂ  ರಟಕಲ್ ರೇವಣಸಿದ್ಧ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಡಾ.ಸಿದ್ದಲಿಂಗ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ       ಮತ್ತಿತರರು ಪಾಲ್ಗೊಂಡಿದ್ದರು. 
ರಮೇಶ ಕಲ್ಲನಗೌಡರ ರಚಿಸಿದ ಡಾ. ಪುಟ್ಟರಾಜಕವಿ ಗವಾಯಿಗಳು, ಡಾ. ಎಸ್.ಪಿ. ಹಿರೇಮಠ ರಚಿಸಿದ ರಾವ್‌ ಬಹಾದ್ದೂರ ಷಣ್ಮುಖಪ್ಪ ಅಂಗಡಿ, ಕೆ.ಎಂ. ರೇವಣ್ಣ ರಚಿಸಿದ ಜನಪದ ತಜ್ಞ ಕೆ.ಆರ್. ಲಿಂಗಪ್ಪ, ಡಾ.ಎಂ.ಎಂ. ಕಲಬುರ್ಗಿ ಅವರ ಕೃತಿ ಕಿತ್ತೂರು ಸಂಸ್ಥಾನ ಸಾಹಿತ್ಯ ಭಾಗ-3, ಸಂಗಮ್ಮ ಕರವೀರ ಶೆಟ್ಟರ ಅವರ ಕೃತಿ ಸಂಗಮ್ಮ ಕರವೀರಶೆಟ್ರ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಪ್ರೊ. ರಮೇಶ ಕಲ್ಲನಗೌಡರ ಗ್ರಂಥ ಪರಿಚಯಿಸಿದರು. ಬಸವರಾಜ ಅಡವಳ್ಳಿ, ಗೋಡನಾಯಕದಿನ್ನಿಯ ರೇವಣ­ಸಿದ್ದಯ್ಯ ಹಿರೇಮಠ ಹಾಗೂ ಸಂಗಡಿಗರು ವಚನ ಸಂಗೀತ ನೀಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿ­ದರು. ಬಾಹುಬಲಿ ಜೈನರ, ಗೀತಾಂಜಲಿ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು.

ಶನಿವಾರ, ಏಪ್ರಿಲ್ 4, 2015

ನುಡಿ ನಮನ

ಅಭಿನವ ಸರ್ವಜ್ಞನಿಗೊಂದು ನುಡಿ ನಮನ''
(ಕವಿ ಡಾ. ಆರ್ ಸಿ ಮುದ್ದೇಬಿಹಾಳ ಅವರ ಕುರಿತು)  
-ಮಲ್ಲಿಕಾರ್ಜುನ ಬೃಂಗಿಮಠ,ವಿಜಯಪುರ
ಕನ್ನಡಕ್ಕೆ ಮೂರು ಮಹಾಕಾವ್ಯ ನೀಡಿದೆ
35 ಸಾವಿರಕ್ಕೂ ಹೆಚ್ಚು ತ್ರಿಪದಿ ಬರೆದೆ
50ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದೆ
ಇನ್ನು 50ತ್ತು ಪುಸ್ತಕ ಬರೆದಿಟ್ಟು [ಅಪ್ರಕಟಿತ] ಶಿವನಪಾದ ಸೇರಿದೆ
ಸಿಂಧೂರ ಲಕ್ಷ್ಮಣ, ಬಸವಣ್ಣನ ಮಾಹಾಕಾವ್ಯಲೋಕಾರ್ಪಣೆಮಾಡಿದೆ
ಜಗದ ಕೆಟ್ಟ ನೀತಿ ನಿಯಮಗಳಿಗೆ ಕಾವ್ಯ ಖಡ್ಗದಿ ತೀಡಿದೆ
ನೂರಾರು ಊರುಗಳು ತಪ್ಪದೇ ತಿರುಗಿದೆ
ಪರಿಶುದ್ಧ ಭಾವದಿ ಸಾಹಿತ್ಯ ನಮಗೆ ನೀಡಿದೆ
ಪ್ರಚಾರ ಪಡೆಯದೇ, ಪ್ರಶಸ್ತಿಗೆ ರಾಜಕೀಯ ಜನರ ಬಾಲಗೋಚಿಯಾಗದೆ
ದಿಗ್ಗಜನಾಗಿ ನಡೆ ನುಡಿಯಿಂದ ಪ್ರಮಾಣಿಕ ನಿಷ್ಠುರನಾಗಿ ನಡೆದೆ
ತಪ್ಪು ಮಾಡಿದವು ಸಾಹಿತ್ಯ ಪರಿಷತ್ತುಗಳು ನಿಮ್ಮನ್ನು ಅಧ್ಯಕ್ಷನನ್ನಾಗಸದೇ
ನಿರ್ಲಕ್ಷ್ಯಮಾಡಿದರೂ ಛಲಬಿಡದೆ ಸಾಹಿತ್ಯ ಬರೆದೆ
ಅಭಿಮಾನಿಗಳಿಗೆ ಉತ್ತಮ ಸಾಹಿತ್ಯ ಪುಸ್ತಕ ನೀಡಿದೆ.
ಆಯುರ್ವೇದ ಗ್ರಂಥಗಳನ್ನು ಬರೆದೆ
2004 ರ ನವೆಂಬರ 22 ರಂದು ಭೃಂಗಿಮಠ ವೇದಿಕೆಯಿಂದ ಸನ್ಮಾನಗೊಂಡೆ
ಕನ್ನಡದಲ್ಲೇ ಅತಿ ಹೆಚ್ಚ ಪುಸ್ತಕ ಬರೆದೆ
ಕನ್ನಡ, ಹಿಂದಿ, ಇಂಗ್ಲೀಷ, ಸಂಸ್ಕ್ರತ,ಉರ್ದು, ಮರಾಟಿ ಭಾಷೆ ಪಂಡಿತನೆನಸಿದೆ
ಆಯುರ್ವೇದ ಯುನಾನಿ ಬಾರತೀಯ ಸಂಸ್ಕ್ಋತಿಯ ವ್ಯದ್ಯ ಪದ್ದತಿ ಕನ್ನಡಕ್ಕೆ ಬರೆದೆ
ನಿಮ್ಮ ನಿರ್ಲಕ್ಷಿಸಿ ಕನ್ನಡ ಸಾ ಪರಿಷತ್ತುಗಳು ಮೋಸ ಮಾಡಿವೆ
ಈ ರೀತಿಯಾದದ್ದಕ್ಕೆ ನಮ್ಮಲ್ಲೂ ಬೇಸರವಿದೆ
ನಿಮ್ಮಗೆ ನ್ಯಾಯ ಕೊಡಿಸಲು ನಾನು ಬಡೆದಾಡಿದೆ ಹಲವು ಸಂಘಸಂಸ್ಥೆಗಳಿಗೆ ನಿಮ್ಮ ಸನ್ಮಾನಿಸಲು ಕೋರಿದೆ
ನಿಮ್ಮ ಘಟ್ಟಿತನ ನನ್ನ ಮನ ಸ್ಪಂದಿಸಿದೆ ನಿಮ್ಮ ನಿಷ್ಟುರತೆಯನಗೆ ಹಿಡಿಸಿದೆ
ನಿಜವಾಗಿಯೂ ಕನ್ನಡ ಸಾಹಿತ್ಯ ವಲಯ ನಿಮ್ಮನ್ನು ನಿರ್ಲಕ್ಷಿಸಿ ಮೋಸಿಸಿದೆ
ನಿಮ್ಮಾತ್ಮಕ್ಕೆ ಶಾಂತಿ ದೊರೆಯಬೇಕಾದರೆ ನಿಮ್ಮ ಸಮಗ್ರ ಸಾಹಿತ್ಯ ಪ್ರಕಟಿಸಲು ಸಾಹಿತ್ಯ ಪರಿಷತ್ತುಗಳಿಗೆ ನನ್ನ ಮನ ಆಗ್ರಹಿಸಿದೆ
ಇದೋ ಡಾ; ಆರ್ ಸಿ ಮುದ್ದೇಬಿಹಾಳ ದಿಗ್ಗಜ ಆತ್ಮವೇ ನಿನ್ನ ನೆನೆದು ನಾ ಈ ನುಡಿ ಅರ್ಪಿಸಿದೆ.

ಬುಧವಾರ, ಡಿಸೆಂಬರ್ 10, 2014

ಕರ್ನಾಟಕದ ಗಾಂಧಿ


ಕರ್ನಾಟಕದ ಗಾಂಧಿ ನೀಲಕಂಠಜಿ ಗಣಾಚಾರಿ.
EmailPrintFontSizeFontSize

 ಡಾ.ಪ್ರಕಾಶ ಗ.ಖಾಡೆ
ಗಾಂಧಿ ತತ್ವಗಳ ಅನುಷ್ಠಾನದಲ್ಲಿ ತಮ್ಮ ಜೀವಿತದ ಉದ್ದಕ್ಕೂ ದುಡಿದು ಗಾಂಧಿ ಕನಸಿನ ಆದರ್ಶ ಗ್ರಾಮಗಳ ಸ್ಥಾಪನೆಯಲ್ಲಿ ಕರ್ನಾಟಕದಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿ ಹೆಸರಾದ ನೀಲಕಂಠಜಿ ಗಣಾಚಾರಿಯವರು 94 ವರ್ಷಗಳ ಸಾರ್ಥಕ ಬದುಕನ್ನು ಬದುಕಿ 2010 ಡಿಸೆಂಬರ್ 14 ರಂದು ನಮ್ಮನ್ನಗಲಿದರು.ಇವರ ಕಾರ್ಯಕ್ಷೇತ್ರವಾದ ಬಾದಾಮಿ ತಾಲೂಕಿನ ನರನೂರ ಗ್ರಾಮದಲ್ಲಿ ಸಮಾಧಿಯಿದ್ದು ಇಲ್ಲಿ ಪ್ರತಿ ವರ್ಷ ಗಾಂಧಿಲೋಕದ ಅವಧೂತ ನೀಲಕಂಠಜಿ ಅವರ ಪುಣ್ಯತಿಥಿ  ಜರುಗುತ್ತಿದೆ.
ನೀಲಕಂಠ ಗೊರಚಯ್ಯ ಗಣಾಚಾರಿ ಅವರು ಜೂನ 10 ,1916 ರಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು.ಬಾಲಕರಿರುವಾಗಲೇ ಸ್ವಾತ್ರಂತ್ಯ ಚಳುವಳಿಯಲ್ಲಿ ಧುಮುಕಿದರು.ಬಾಲಕ ನೀಲಕಂಠ 4 ನೇ ತರಗತಿ ಓದುತ್ತಿರುವಾಗಲೇ ಎಲ್ಲೆಡೆ ಸ್ವರಾಜ್ಯ ಆಂದೋಲದ ಮಾತು. ವಿದ್ಯಾರ್ಥಿ ನೀಲಕಂಠನನ್ನು ಶಿಕ್ಷಕರು ಹೊಸೂರಿನಿಂದ ಬೈಲಹೊಂಗಲಕ್ಕೆ ವರ್ತಮಾನ ಪತ್ರಿಕೆಗಳನ್ನು ತರಲು ಕಳಿಸುತ್ತಿದ್ದರು.ಹೊಸೂರು ಗಂಡುಮೆಟ್ಟಿನ ನೆಲ.ಸ್ವಾತ್ರಂತ್ಯ ಆಂದೋಲನಕ್ಕೆ ಈ ಪುಟ್ಟ ಗ್ರಾಮದ ಕೊಡುಗೆ ದೊಡ್ಡದು.ಇಲ್ಲಿ ಗಾಂಧಿ,ನೆಹರು,ವಲ್ಲಭಾಯಿ ಪಟೇಲರು ಬಂದುಹೋಗಿದ್ದಾರೆ.ಈ ಹೋರಾಟಗಾರರ ಪ್ರಭಾವವೇ ನೀಲಕಂಠಜಿ ಅವರ ಮೇಲಾಗಿ ಇವರು ಆಗಿನಿಂದಲೇ ಇಡೀ ಬದುಕನ್ನು ರಾಷ್ರಕ್ಕಾಗಿ ಮುಡಿಪಿಟ್ಟರು.
ಗಾಂಧೀಜಿ 1937 ರಲ್ಲಿ ಬೆಳಗಾವಿ ಜಿಲ್ಲೆ ಹುದಲಿ ಗ್ರಾಮಕ್ಕೆ ಬಂದಾಗ ಇವರು ಗಾಂಧಿ ಒಟ್ಟಿಗೆ 50 ಮೈಲು ನಡೆದುಕೊಂಡು ಹೋದರು.ಅಲ್ಲಿ ಅವರೊಂದಿಗೆ ಮಾತನಾಡುವ ಅವಕಾಶ ದೊರೆಯಿತು.ನೀಲಕಂಠಜಿ ಅವರ ಖಾದಿ ಮತ್ತು ಗಾಂಧಿ ತತ್ವಗಳ ಒಲವನ್ನು ಕಂಡ ಗಾಂಧಿವಾದಿ ಕೌಜಲಗಿ ಹನಮಂತರಾಯರು ತಮ್ಮ ಚರಕಾ ಸಂಘದಲ್ಲಿ ಸೇರಿಸಿಕೊಂಡು ಖಾದಿಯ ಶಿಕ್ಷಣಕ್ಕಾಗಿ ಇವರನ್ನು ವಾರ್ಧಾಕ್ಕೆ ಕಳಿಸಲಾಯಿತು.ಮುಂದೆ ಹುದಲಿಯ ಜಮ್ನಾಲಾಲ ಖಾದಿ ವಿದ್ಯಾಲಯದಲ್ಲಿ ಖಾದಿ ಶಿಕ್ಷಣ ಪೂರೈಸಿದರು.1942 ರ ಚಳುವಳಿ ಸಂದರ್ಭದಲ್ಲಿ ಮುನವಳ್ಳಿ ಬಳಿ ಇವರನ್ನು ಬಂಧಿಸಿ 5 ತಿಂಗಳುಗಳ ಕಾಲ ಜೈಲಿಗೆ ಹಾಕಿದರು.ಜೈಲಿನಿಂದ ಬಿಡುಗಡೆಯಾಗಿ ಬಂದು ಖಾದಿ ನೇಯ್ಗೆಯ ಶಿಕ್ಷಣ ಕೊಡಲು ಅಮರಗೋಳ,ಗೊಬ್ಬರಗುಂಪಿ,ಹುಣಸೀಕಟ್ಟಿ ಗ್ರಾಮಗಳಿಗೆ ತೆರಳಿದರು.ಅಮರಗೋಳದಲ್ಲಿ ಮಾಡುತ್ತಿದ್ದ ಇವರ ಕೆಲಸದ ವರದಿ ಗಾಂಧೀಜಿಯವರನ್ನು ತಲುಪಿದಾಗ ಗಾಂಧಿಜಿಯವರ ಕಾರ್ಯದರ್ಶಿಯವರಿಂದ ನೀಲಕಂಠಜಿ ಅವರಿಗೆಪತ್ರ ಬಂತು. ಅದರಲ್ಲಿ "ತಾವು ಹಳ್ಳಿಗಳಲ್ಲಿ ಸೇವಾ ಸಲುವಾಗಿ ಕೂತಿದ್ದೀರಿ,ಅದರ ವರದಿಯನ್ನು ನನಗೆ ತೋರಿಸಿದರು.ಗಾಂಧಿಜಿಯವರು ಇದನ್ನೇ ಇಚ್ಛೆ ಮಾಡುತ್ತಾರೆ,ಹೊಸ ತರುಣರು ಹಳ್ಳಿ ಹಳ್ಳಿಗೆ ಹೋಗಿ ಸೇವೆ ಮಾಡಲಿಕ್ಕೆ ತೊಡಗಬೇಕು.ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿ ಗಾಂಧೀಜಿಯವರ ಆಶೀವರ್ಾದವಿದೆ".ಸೇವಾಶ್ರಮದ ವಿದ್ಯಾಲಯದ ಪ್ರಾಚಾರ್ಯ ನರಹರಿ ಪರೇಖ ಈ ಪತ್ರ ಬರೆದಾಗ ನೀಲಕಂಠಜಿ ಅವರಿಗೆ ಹಳ್ಳಿಗಳಲ್ಲಿ ಕೆಲಸ ಮಾಡುವ ಶ್ರದ್ಧೆ ಮತ್ತಷ್ಟು ಬೆಳೆಯಿತು.     ನೀಲಕಂಠಜಿಯವರು ವಿನೋಬಾರ ಕರೆಯ ಮೇರೆಗೆ ಕೇರಳ,ತಮಿಳುನಾಡು.ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧಕ್ಕಾಗಿ ಪಾದಯಾತ್ರೆ ಕೈಕೊಂಡು ಜನಜಾಗೃತಿ ಮೂಡಿಸಿದರು.

ಮಹಾರಾಷ್ಟ,ರಾಜ್ಯಸ್ಥಾನ,ಉತ್ತರ ಪ್ರದೇಶ,ಬಿಹಾರ ಮೊದಲಾದ ರಾಜ್ಯಗಳಲ್ಲಿ ಸರ್ವೋದಯ ಕೆಲಸಕ್ಕಾಗಿ ಒಂದು ವರ್ಷಗಳ ಕಾಲ ಸಂಚರಿಸಿದರು.ಗಾಂಧಿ ತತ್ವಗಳ ರಚನಾತ್ಮಕ ಕಾರ್ಯ ಮಾಡಲು ಹೊಸೂರು, ಗುರ್ಲಹೊಸೂರು ,ಗೊಬ್ಬರಗುಂಪಿ, ನರಗುಂದ, ಕಲಹಾಳ, ಶಿಗ್ಲಿ, ಉಗಲವಾಟ, ಮಲಘಾಣ, ಕೃಷ್ಣ ಕಿತ್ತೂರ, ಸುರೇಬಾನ ಮತ್ತು ನರೆನೂರ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡರು. ಇಲ್ಲಿ ಗಾಂಧೀಜಿಯವರ ತತ್ವಗಳಾದ ಸತ್ಯ,ಅಹಿಂಸೆಗಳ ಮೂಲಕ ಖಾದಿ ಗ್ರಾಮೋದ್ಯೋಗ,ಪಾನ ನಿರೋಧ, ಗೋಹತ್ಯಾ ನಿಷೇಧ, ಗ್ರಾಮ ಸುಧಾರಣೆ, ಗ್ರಾಮ ಸ್ವಚ್ಛತೆ, ಗ್ರಾಮ ಸ್ವರಾಜ್ಯ ಮೊದಲಾದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದರು. ಹೊಸೂರು, ಶಿಗ್ಲಿ, ಸುರೇಬಾನ, ಶಿರೋಳ, ಮಲಘಾಣ, ಕೃಷ್ಣ ಕಿತ್ತೂರುಗಳಲ್ಲಿ ಪ್ರೌಢ ಶಾಲೆಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.ಅನೇಕ ಹಳ್ಳಿಗಳಲ್ಲಿ ಇವರು ಇಡೀ ಊರನ್ನೇ ಹಿಂಸಾರಕ್ಕೆ ಇಳಿಸುತ್ತಿದ್ದ ಮನೆತನದ ವಾಜ್ಯಗಳನ್ನು ಶಾಂತಿ ಸಮಾಧಾನಗಳಿಂದ ಬಗೆಹರಿಸಿ ಸೌಹಾರ್ದತೆಯ ವಾತಾವರಣ ಮೂಡಿಸಿದ್ದಾರೆ. ಗಾಂಧಿ ತತ್ವಗಳನ್ನು ಎಲ್ಲ ವಿಧಗಳಿಂದಲೂ ಕಾರ್ಯರೂಪಕ್ಕೆ ತಂದ ಇವರ ಅಪಾರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರವು 1992ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ಮಕ್ಕಳಾದ ಪಂಚಾಕ್ಷರಯ್ಯ ಗಣಾಚಾರಿ, ಗಂಗಯ್ಯಾ ಗಣಾಚಾರಿ ಬಂಧುಗಳಾದ ಡಾ.ರುದ್ರಯ್ಯಾ ಭಂಡಾರಿ ಮೊದಲಾದವರು ನೀಲಕಂಠಜಿಯವರ ತತ್ವಾದರ್ಶಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ನೀಲಕಂಠಜಿ ಗಣಾಚಾರಿಯವರು ತಮ್ಮ 94 ನೇ ವಯಸ್ಸಿನಲ್ಲಿ ಸೇವೆಯಲ್ಲಿರುವಾಗಲೇ ಡಿಸೆಂಬರ್ 14.2010 ರಲ್ಲಿ ತೀರಿಕೊಂಡರು.ಇವರ ಕಾರ್ಯಕ್ಷೇತ್ರವಾದ ಬಾದಾಮಿ ತಾಲೂಕಿನ ನರೆನೂರ ಗ್ರಾಮದಲ್ಲಿ ಸಮಾಧಿಯಿದ್ದು ಸ್ಮಾರಕವಾಗಿ ನಿರ್ಮಾಣವಾಗುತ್ತಿದೆ.ಪ್ರತಿ ವರ್ಷ ಜರುಗುವ ಪುಣ್ಯತಿಥಿ ಕಾರ್ಯಕ್ರಮಕ್ಕೆ ನಾಡಿನೆಲ್ಲೆಡೆಯಿಂದ ಅದರಲ್ಲೂ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು, ಗಾಂಧಿ ಅನುಯಾಯಿಗಳು,ಮಠಾಧೀಶರು ಪಾಲ್ಗೊಳ್ಳುತ್ತಾರೆ. ವಿಜಯಪುರದ ಶ್ರೀ ಸಿದ್ದೇಶ್ವರಸ್ವಾಮಿಜಿ ಮೊದಲಾದವರು ಪಾಲ್ಗೊಳ್ಳುವ ಈ ಬಾರಿಯ ಪುಣ್ಯತಿಥಿ ಕಾರ್ಯಕ್ರಮವು ಡಿಸೆಂಬರ 10 ರಂದು ಬಾದಾಮಿ ತಾಲೂಕಿನ ನರೆನೂರ ಗ್ರಾಮದಲ್ಲಿ ಜರುಗುತ್ತಿದೆ.
ಲೇಖಕರ ವಿಳಾಸ :
ಡಾ.ಪ್ರಕಾಶ ಗ.ಖಾಡೆ.ಶ್ರೀಗುರು,ಮನೆ ನಂ. ಎಸ್.135.ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.-9845500890



Related Tags: Neelakanthaji Ganachari, Karnataka Gandhi, Badami Taluk, Dr. Prakash Khade, kannada Article,

ಮಂಗಳವಾರ, ಮೇ 20, 2014

ಉಮೇಶ ತಿಮ್ಮಾಪುರ ಸಾಹಿತ್ಯಾವಲೋಕನ : ರಾಗಂ ಬರಹ

ಕಾವಲು ನಿಲ್ಲಿಸಿದ್ದೇನೆ ಕಾವ್ಯವನ್ನು


     ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕದಳಿ ಮಹಿಳಾ ವೇದಿಕೆ, ತಾಲೂಕಾ ಶರಣ ಸಾಹಿತ್ಯ ಪರಿಷತ್, ಜಲಮಿತ್ರ ರಂಗ ವೇದಿಕೆ, ಚುಟುಕು ಸಾಹಿತ್ಯ ಪರಿಷತ್, ಮರುಳ ಸಿದ್ಧೇಶ್ವರ ಯುವಕ ಮಂಡಳಗಳ ಸಹಕಾರದೊಂದಿಗೆ ಗೆಳೆಯ ಉಮೇಶ ತಿಮ್ಮಾಪುರ ಅವರ ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜನಲ್ಲಿ ದಿನಾಂಕ 20/04/2014 ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆಗೆ ನನ್ನೊಂದಿಗೆ ಕುಂ.ವೀರಭದ್ರಪ್ಪ, ಮುಖ್ಯ ಅತಿಥಿಯ ಪಾತ್ರಕ್ಕೆ ನಾನು. ಗೋಷ್ಠಿ ಒಂದರಲ್ಲಿ ಗೆಳೆಯರಾದ ಪ್ರಕಾಶ ಖಾಡೆ, ವಿದ್ಯಾ ಕುಂದರಗಿ, ಸಾವಿತ್ರಿ ಮುಜುಂದಾರ ಕವಿಗೋಷ್ಠಿಯಲ್ಲಿ ವಡ್ಡಗೆರೆ ನಾಗರಾಜಯ್ಯ, ರಾಜೇಶ್ವರಿ.ಎನ್ ಹಾಗೂ ಉಳಿದ ಇಪ್ಪತ್ನಾಲ್ಕು ಕವಿಗಳು, ಸಮಾರೋಪಕ್ಕೆ ಗೆಳೆಯರಾದ ಡಾ.ಬಾಳಾಸಾಹೇಬ ಲೋಕಾಪೂರ, ವೆಂಕಟಗಿರಿ ದಳವಾಯಿ, ಡಾ. ನಿಂಗು ಸೊಲಗಿ ಹಾಗೂ ಜೋಳದ ಕೂಡ್ಲಿಗಿ.


     ಚಿಕ್ಕಮಂಗಳೂರು, ಹರಿಹರ, ಹೂವಿನ ಹಡಗಲಿ ಮಾರ್ಗವಾಗಿ ಹಿಂದಿನ ದಿನ ಮುಂಡರಗಿಯನ್ನು ತಲುಪಿದ ನಾನು ಸರಿಯಾಗಿ ಎರಡು ರಾತ್ರಿ ಉತ್ತರ ಕರ್ನಾಟಕದ ಊಟ, ವಿಚಾರ ಹಾಗೂ  ಪ್ರೀತಿಯ ಜಾತ್ರೆಯಲ್ಲಿ ಇದ್ದೆ ಎಂದೇ ಹೇಳಬೇಕು. 
ಕಾವಲು ನಿಲ್ಲಿಸಿದ್ದೇನೆ
ಕಾವ್ಯವನ್ನು, ಸತ್ಯ ಸಂಘರ್ಶಗಳ
ಬೆನ್ನಿಗೆ ಪದ ಗುಚ್ಚಗಳನ್ನೇರಿಸಿ
ಜಾತಿ-ಮತದ ಗಡಿಯಲಿ
ಸಾಲು ಕಟ್ಟಿದ್ದೇನೆ ಸಮಾನತೆಯ
ಅಸಮಾನತೆಯ ಕಟುಸಂಕೋಲೆಯ
ಲಾಂಛನ ಕಿತ್ತೆಸೆದು
        ಹೀಗೆ ಕವಿತೆಗೊಂದು ಕಾಯಕ ಕಟ್ಟಿ ‘ಬಿರಿದ ನೆನಪುಗಳು’, ‘ಮೆಘಧ್ವನಿ’, ‘ತ್ವಯ್ದ ಬದುಕಿನ ಸಾಲು’. ‘ಒರತೆ’, ‘ಕಾಡುದಾರಿಯ ಕಂದಿಲುಗಳು’, ‘ನಡುಹಗಲ ಸಂಜೆ’, ‘ಸಮುಕ್ಷ’, ‘ಕಥಾಲೋಕ’ ಹತ್ತು ಹಲವಾರು ಕೃತಿಗಳನ್ನು ರಚಿಸಿ, ನನ್ನೊಂದಿಗೆ ನಮ್ಮವನಾಗಿ ಎಲ್ಲರನ್ನು ‘ಅಣ್ಣಾ’ ಎನ್ನುವ ಸಂಬೋಧನೆಯಿಂದಲೇ ಬಾಚಿ ತಬ್ಬುವ ಉಮೇಶನ ಸಾಹಿತ್ಯದ ವಿಮರ್ಶೆಗೆ ಇನ್ನೂ ದೀರ್ಘವಾದ ದಾರಿಯಿದೆ, ಸಮಯವೂ ಇದೆ. ಆದರೆ ಬರಹವನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಎತ್ತಿಕೊಂಡಿರುವ ಇಂಥ ಗೆಳೆಯನನ್ನು ಪ್ರೋತ್ಸಾಹಿಸಬೇಕಾದುದು ನಮ್ಮ ಧರ್ಮವಾಗಿದೆ. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಉಮೇಶ ಇದೇ ಮುಂಡರಗಿ ತಾಲೂಕಿನ ಕೆಲುರು ಗ್ರಾಮದವ. 42 ವಯಸ್ಸಿನ ಈ ನನ್ನ ಗೆಳೆಯನಿಗೆ ಸಾವಿರಾರು ಕನಸುಗಳು ಇವೆ. ಅವುಗಳನ್ನು ಕಾಪಾಡಿಕೊಂಡರೆ ಸಾಗಿದಷ್ಟು ದಾರಿಯೂ ಇದೆ. ಅವನ ಕಾವ್ಯ ಕುರಿತು ಮುಂಡರಗಿಯಲ್ಲಿ ಮಾತನಾಡುತ್ತ ನಾನು ಒಂದು ಮಾತನ್ನು ಹೇಳಿದೆ : With the magnanimity of innocence poets take birth, but alas! With individual hypocrisy they die. ಇದೊಂದು ಸ್ಥಳೀಯ ರೋಗ. ಎಷ್ಟೆಲ್ಲ ಪ್ರತಿಭೆ ಇರುವ ಅದೆಷ್ಟೋ ಬರಹಗಾರರು ಇದರಿಂದ ಬಿಡಿಸಿಕೊಳ್ಳುವದಾಗಿಲ್ಲ. ಪರಸ್ಪರ ಕಾಲೆಳೆಯುವದರಲ್ಲಿ ಯೇ ಕಾಲ ಕರಗಿ ಹೋಗಿದೆ. 
     ಸಂತೋಷದ ಸಂಗತಿ ಇದರಿಂದ ಹೊರತಾದವನು ಗೆಳೆಯ ಉಮೇಶ ತಿಮ್ಮಾಪೂರ. ಇವನ ಅನೇಕ ರಚನೆಗಳಲ್ಲಿ ನನಗೆ ಇಷ್ಟವಾದ ಒಂದು ರಚನೆ ನಿಮ್ಮೊಂದಿಗೆ. . . . .

ನೀನೆಂದರೆ
ಮೈಮುರಿದು ಮಲಗಿದ ಬೆಟ್ಟ
ಸುಖ ಸ್ಪರ್ಶ ನೀಡುವ
ತಂಗಾಳಿ
ತಲೆಯ ತೆವಲಿನ ತುರುಬ
ಬತ್ತಿ ಹೆಣೆದ ಜಡೆಗೆ
ತೀಡಿ ಮಾಡಿದ
ಮುತ್ತು ಮಾಲೆ

ನೀನೆಂದರೆ. .
ಕಾಡು ತೋಪಿನ ಮಾವು
ರೆಂಬೆಗಿಳಿದಾ ಗೊಂಚಲು
ಹಸಿದ ಹೊಟ್ಟೆ ತಣಿದ
ರಸಪಾಕ

ನೀನೆಂದರೆ. .
ಹರಿವ ನೀರ್ಝೆರೆ
ತುಳುಕಿ ದಡ ಸೇರುವ
ತೆರೆ
ಸರಿದ ಕತ್ತಲಿನ
ಸೆರಗ ಮುಡಿಯಲಿ ತುಂಬುವ
ಹಗಲ ಬೆಳಕಿನ
ಕಣ್ಣ ಮಂಜು

ನೀನೆಂದರೆ. .
ಒಡಲು ಬಿರಿದ
ನೆಲದೊಡತಿಯ
ಮಳೆಯ ಮುಂಜಾವ
ಎದೆಯೊಳಗ
         ಪುಳಕಗೊಂಡ ಜಲಕನ್ಯ           

ಗುರುವಾರ, ಫೆಬ್ರವರಿ 6, 2014

ಗಜಲ್ : ಹೇಮಲತಾ ವಸ್ತ್ರದ.




ಗಜಲ್ : ಹೇಮಲತಾ ವಸ್ತ್ರದ.


Hemalatha Vastrad
Hemalatha Vastrad

ಹೂವಿಗೆ ರೆಕ್ಕೆ ಬಂದಿರುವುದ ಈ ಜಗವೇನು ಬಲ್ಲದು
ಮನ ಗುಲ್ಮೊಹರ್ ಚಿಗುರಿರುವುದ ಈ ಜಗವೇನು ಬಲ್ಲದು

ಅವನು ಸಂತೆಯೊಳಗಿನ ಸಂತನಂತೆ ಎದ್ದು ಹೋದ
ನಾನು ಅವನಾಗಿ ಉಸಿರಾಡುತಿರುವುದ ಈ ಜಗವೇನು ಬಲ್ಲದು

ಮಾತು ಮಾತು ಮಾತು ಅಹಂ ತಣಿಸಲದೇಸು ಮಾತು
ಮೌನದೊಳಗೂ ಮಾತಿರುವುದ ಈ ಜಗವೇನು ಬಲ್ಲದು

ಚೆಂದುಟಿಗಳ ಮೇಲಣ ಮಂದಹಾಸದ ಮಧು
ಹೇಳಲಾರದೇಸೋ ವೇದನೆಗಳಿರುವುದ ಈ ಜಗವೇನು ಬಲ್ಲದು

ಜಗ ನೀತಿ ನಿಯಮಗಳ ಪೀಠ
ಹೃದಯವನೆ ಬಲಿ ಕೊಟ್ಟಿರುವದ ಈ ಜಗವೇನು ಬಲ್ಲದು

ಹಾಸದೊಳಗಿನ ಹಗೆ ಮತ್ಸರದ ಹೊಗೆ
ಬೆಳಕಿನ ಹೆಣ ತೇಲಿರುವದ ಈ ಜಗವೇನು ಬಲ್ಲದು

ಆಡುವರು ಕಾಡುವರು ನೋವು ನೀಡುವರು
ನೋವುಗಳೆ ಶಿಖರ ಮೆಟ್ಟಿಲಾಗಿರುವುದ ಈ ಜಗವೇನು ಬಲ್ಲದು

ಲುಪ್ತವಾಗದೀ ಅಪವಾದಗಳ ಬೇತಾಳದ
ಚಮ್ಮಾವುಗೆ ಮೆಟ್ಟಿಕೊಂಡಿರುವುದ ಈ ಜಗವೇನು ಬಲ್ಲದು

ದಹಿಸುವ ಬದುಕು ಹಸಿ ಕದಳಿ
ಹೇಮೆಯೊಡಲದು ಜೀವಸೆಲೆಯಾಗಿರುವದ ಈ ಜಗವೇನು ಬಲ್ಲದು.

**************

ಡಾ. ಪ್ರಕಾಶ ಗ. ಖಾಡೆ, ಪರಿಚಯ ಮತ್ತು ಅವರ ಕವನಗಳು-- ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ) ದುಬೈ.

ಡಾ. ಪ್ರಕಾಶ ಗ. ಖಾಡೆ,ಬಾಗಲಕೋಟ ಪರಿಚಯ ಮತ್ತು ಅವರ ಕವನಗಳು

- ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ) ದುಬೈ.
ವಿಭಾಗ ಸಂಪಾದಕರು, ಕಾವ್ಯ ಸಿಂಚನ ವಿಭಾಗ

  ಮೊದಲನುಡಿ:

ಪ್ರೀತಿಯ ಕಾವ್ಯಪ್ರೇಮಿಗಳೇ,
ನಿಮ್ಮೆಲ್ಲರ ಮೆಚ್ಚುಗೆಗೆ ಗಳಿಸುತ್ತಿರುವ "ಕಾವ್ಯ-ಸಿಂಚನ"ವಿಭಾಗಕ್ಕೆ ತಾವು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳು.."ಕವಿ-ಕಾವ್ಯ"ಗಳ ಅನ್ವೇಷಣೆ ಕಷ್ಟಕರವಾದರೂ"ಅನೇಕತೆಯಲ್ಲಿ ಏಕತೆ" ಕಾಣುವ ಭಾಗ್ಯ ನನ್ನದು.

ಆತ್ಮಿಯರೇ,
ಯಾರಾದರೂ ಬಾಲ್ಯದಲ್ಲಿನ ಸವಿ ನೆನಪುಗಳನ್ನು ಮರೆಯಬಹುದೆ? "ಜಾನಪದ" ಅಂದ ತಕ್ಷಣ ಹಳ್ಳಿಗಳ ನೆನಪಾಗುವುದು ಸಹಜ. ಅದರಲ್ಲೂ ಹಳ್ಳಿಗಳ ಸಿರಿ -ಜಾನಪದ ಸೊಗಡು . ಆಹಾ ..?ಎಂಥ ಚಂದಾ....ರೀ? ಅದ್ವಿತೀಯ ಜನಪದ ಗಾಯಕ ಶ್ರೀ ಬಾಳಪ್ಪ ಹುಕ್ಕೇರಿಯವರ "ನಮ್ಮ ಹಳ್ಳಿ ಊರ ನಮಗ ಪಾಡ ....ಯಾತಕ್ಕವ್ವಾ ಹುಬ್ಬಳ್ಳಿ ಧಾರವಾಡ? ಜನಪದ ಕೇಳದ ಜನರೇ ಇಲ್ಲ.

ದಿನ ದಿನಕ್ಕೂ ನಶಿಸಿ ಹೋಗುತ್ತಿದ್ದ ಸತ್ವಯುತ ಜಾನಪದಗಳಿಗಾಗಿ  ಹಳ್ಳಿ-ಹಳ್ಳಿಯಲ್ಲಿಯೂ ಸುತ್ತಾಡಿ ಸತ್ವಯುತ ಜನಪದಗಳನ್ನು ಸಂಗ್ರಹಿಸಿ ಅಳಿದು ಹೋಗಬೇಕಾಗಿದ್ದ ಜನಪದ ಸಾಹಿತ್ಯವನ್ನು "ಹಳ್ಳಿ ಹಬ್ಬಿಸಿದ ಹೂಬಳ್ಳಿ" ,"ಬದುಕೇ ಜಾನಪದ"ಆತ್ಮಕಥೆ ಯನ್ನೂ ಬರೆದು  "ಮುಧೋಳ'ದಲ್ಲಿರುವ "ಜನಪದ ನಿಲಯ"ವೆಂಬ "ಜ್ಞಾನ ಗೃಹ"ದಲ್ಲಿರುವ ಹಿರಿಯ ಜಾನಪದ ಸಾಹಿತಿ ಹಾಗೂ ರಾಜ್ಯದ ಜನಪದ ತಜ್ಞ ರಾದ  ಶ್ರೀ ಗಣಪತಿ ಖಾಡೆಯವರನ್ನು ಅಭಿನಂದಿಸುತ್ತೇನೆ.
ತಂದೆಯವರ ದಾರಿಯಲ್ಲೇ ಸಾಗಿ ಜಾನಪದದ ಸಾಹಿತ್ಯದ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ  ಕವಿ, ಸಾಹಿತಿ, ಸಂದರ್ಶಕ ಹೀಗೆ ಹಲವಾರು ಕನ್ನಡ ಪ್ರಕ್ರಿಯೆಗಳಲ್ಲಿ  ತೊಡಗಿಸಿಕೊಂಡಿರುವ  ಬಾಗಲಕೋಟ ಜಿಲ್ಲೆಯ ಡಾ||ಪ್ರಕಾಶ್ .ಗ.ಖಾಡೆ ಆವರನ್ನು ಈ ವಾರದ ಕವಿಗಳಾಗಿ ಅವರ ಕವಿತೆಗಳೊಂದಿಗೆ ನಿಮ್ಮೆಲ್ಲರಿಗೆ ಪರಿಚಯಿತ್ತಿದ್ದೇನೆ.

ಹಳ್ಳಿಯ ಸೊಗಡು ಆಡು ಮಾತು ಆಳಕ್ಕಿಳಿದು ಜನಮನಕ್ಕೆ ಮುಟ್ಟಿಸುವದು ಮೊದಲಿನಿಂದ ಬಂದ ರೂಢಿ. ಒಟ್ಟಾರೆ ಹೇಳಬೇಕಂದರೆ  "ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಖಾಡೆ ಅವರು ಮುಟ್ಟದ ಜಾನಪದವಿಲ್ಲ". ಅವರ ಬರವಣಿಗೆ "ಬತ್ತದಾ ಒರತೆ". ವಂಶ ಪರಂಪರೆ ಯಾಗಿ ಬಳುವಳಿಯಾಗಿ ಪಡೆದ ಶ್ರೀ ಪ್ರಕಾಶ ಖಾಡೆ ಅವರು ನವೋದಯ ಕಾವ್ಯ ತಮಗೇನೂ ಹೊಸದಲ್ಲವೆಂಬಂತೆ ಕಳಿಸಿದ ಎರಡೂ ಕವನಗಳೂ ತುಂಬಾ ಚನ್ನಾಗಿವೆ.

ನೀವೆಲ್ಲ ಬಾಲ್ಯದಲ್ಲಿನ ಆ ಮಾತೃ ಮಮತೆಯನ್ನು ಅನುಭವಿಸಿದ್ದೀರಿ. ಅದರಂತೆ  ಕವಿ ಶ್ರೀ ಪ್ರಕಾಶ್ ಮೊದಲನೆಯ ಕವಿತೆ "ಮತ್ತೆ ಬಾಲ್ಯಕ್ಕೆ..." ಓದುತ್ತಾ ಹೋದಂತೆ ನಾನು ಭಾವುಕನಾಗಿ ಅತ್ತು ಬಿಟ್ಟೆ. ಹುಟ್ಟಿದ 2 ತಿಂಗಳಿನಲ್ಲಿ ತಾಯಿಯನ್ನು ಕಳೆದುಕೊಂಡ ಎಂಥ ನತದೃಷ್ಟ ನಾನು ಅನ್ನಿಸುತ್ತೆ. ಕವಿ ಪ್ರಕಾಶ್ ತಮ್ಮ  ಬಾಲ್ಯದ ಮಾತೃ ಮಡಿಲಿನ ಮಾತೃಬಂಧದ ಸುಮಧುರ ಅನುಬಂಧವನ್ನೇ ಕಾವ್ಯವನ್ನಾಗಿರಿಸಿಕೊಂಡು ರಚಿಸಿದ ಉತ್ತಮ ಕವಿತೆ ಇದೆಂದರೂ ತಪ್ಪೇನೂ ಇಲ್ಲ.
ಸುಂದರ ಶಬ್ದ, ಸರಳ ಪ್ರಾಸಗಳಿಂದ ಹೆಣೆದ  ಇವರ ನವ್ಯಕಾವ್ಯ ಅಲ್ಲಲ್ಲಿ ಜಾನಪದದ ಸೊಗಡನ್ನು ಬಿಂಬಿಸ್ತಾ ಇದೆ. ಪ್ರಸ್ತುತ ಕವಿತೆಯ  ಮೊದಲ ಎರಡು ಸಾಲುಗಳೇ  ಹೇಳುವಂತೆ "ಅವ್ವನ ನೆನೆಸಿಕೊಂಡಾಗಲೆಲ್ಲ,ಬಾಲ್ಯವೇ ಕಣ್ಣೆದಿರು ಬಿಚ್ಚಿಕೊಳ್ಳುತ್ತದೆ ..." ಎಂಥ ಸುಂದರ ಸವಿ ನೆನಪು. ಮಾತೃ ಮಡಿಲಿನ ಆ ಪ್ರೇಮ, ಅಣ್ಣ-ತಮ್ಮ, ಅಕ್ಕ-ತಂಗಿ, ಆ ಒಡನಾಟ. ಆ ಸಿಟ್ಟು, ನಂತರದ ಮರೆಯಲಾಗದ ಆ ತಾಯಿಯ ಸಾಂತ್ವನ  ಎಲ್ಲವನ್ನೂ ಮನಸಾರೆ ಅನುಭವಿಸಿದ ಕವಿಗೆ ದೊಡ್ದೊರಾಗೋದೇ  ಬೇಡ ಎನ್ನಿಸಿದ್ದು ಸಹಜ. ಅವರಿಗಷ್ಟೇ ಏಕೆ ಹುಟ್ಟಿದ ಪ್ರತಿ ಜೀವಿಯೂ ಬಯಸೋದು ಹಾಗೇನೆ. ಕೊನೆ ಕೊನೆಗೆ ಬಾಲ್ಯದಾಡಿದ, ಆ ಮಾತೃ ಸ್ಪರ್ಶದಲ್ಲಿ ಮರೆತ ಆ ನೋವು ಎಲ್ಲವನ್ನೂ ಅನುಭವಿಸಿದ ಕವಿ ಬೆಳೆದು ದೊಡ್ಡವರಾದ ಮೇಲೆ ನಾವು ಯಾಕೆ ದೊಡ್ಡೋರಾದೆವೋ ?ಛೆ! ನಾವು ದೊಡ್ದೊರಾಗಬಾರದಿತ್ತು? ಎಂದು ಮನದಾಳದ ಅಳಲನ್ನು ತೋಡಿಕೊಂಡಿದ್ದಾರೆ.

ಎರಡನೆಯ "ಅದಕಂದರ ಬದುಕ" ಕವಿತೆಯಲ್ಲಿ ಬಳಸಿದ ಪ್ರಾಸ ಪದಗಳ ಬಳಕೆ ನಿಜಕ್ಕೂ ಚನ್ನಾಗಿದೆ. ಆಡು ನುಡಿಯಲ್ಲಿ ಬೇರೆವಂಥ ಅವರ ಬತ್ತದ "ಒರತೆ" ಜನಪದದಲ್ಲಿ ಪ್ರಾವಿಣ್ಯತೆ ಪಡೆದಿರುವ ಕವಿ ಶ್ರೀ ಪ್ರಕಾಶ್ .ಗ.ಖಾಡೆ ಅವರು ಗ್ರಾಮ್ಯಭಾಷೆಯನ್ನು ಶಿಷ್ಟಪದಗಳ ಜತೆ ಜತೆ ಬೆರೆಸಿದ್ದು ನಾಡಿನ ಜಾನಪದ ಸೊಗಡಿನ ಕಾವ್ಯಕ್ಕೆ ಮೆರಗು ನೀಡಿದೆ.

"ಹರೆಯದ ಹೆಣ್ಣಿನ  ಬದುಕಿನ ಸತ್ಯ"ಮೂಲ ಕಾವ್ಯವಸ್ತು ವನ್ನಾಗಿರಿಸಿದ ಕವಿತೆಗೆ ನೀಡಿದ  ಶೀರ್ಷಿಕೆ ನಿಜಕ್ಕೂ ಅರ್ಥಪೂರ್ಣವಾಗಿದೆ. ಎಷ್ಟೊಂದು ಮಾರ್ಮಿಕ ಈ ಚರಣ-
"ಹೊಸಾ ಚೆಲುವಿಕಿ ಕಂಡವರ ಒಲವಿಕಿ
ಸೇರಿ ಬೆಳೆಸಿತ ಸಂಬಂಧ
ಇರುತನಾ ಎಂಥ ಆನಂದ
ಹೂವಾಗಿ ಅರಳಿದ ವ್ಯಾಳೇಕ ಏಸೋಂದು ದುಂಬಿ ಸಾಲ||"

ಅರಳಿದ ಹೂವಿನ ಮಕರಂದವನರಸುವ ಸುತ್ತ ಹಾರಾಡುತ್ತಿರುವ ದುಂಬಿಗಳ ಹೋಲಿಸುತ್ತ -ಯೌವ್ವನದ ಹೊಸಿಲಲ್ಲಿ ನಿಂತಿರುವ ಹೆಂಗಳೆಯರಿಗೆ  "ಅದಕಂದರ ಬದುಕ" ಕವಿತೆಯ ಕೊನೆಯ ಚರಣದಲ್ಲಿ ಅರಿತೋ ಅರಿಯದೆಯೋ ಮಾಡಿದ ತಪ್ಪಿಗೆ ಫಲ ಅನುಭವಿಸೋಳು ಹೆಣ್ಣೇ ..
" ಬಿದ್ದ ಬೀಜದ ಮೊಳಕಿ
ಮತ್ತು ಹೊಸಾ ಹಾದಿ ಹುಡುಕಿ
ಗಾಳಿದಾಳಿಗಿ ಹಾರಿ ಹಾರ್ಯಾಡಿ
ಉಳಿದ್ಹಾಂಗ ಆತ ಸುಮ್ಮಕ-
ಯಾಕ ಬೇಕ ನೂಕ
ನೊಂದವರ ಹಾಡಿರಲಿ ಬೆಳಕ ಹರಿವತನಕ||

ಮೂಲಕ ಎಚ್ಚರಿಸುವ  ಸಂತೈಸುವ ರೀತಿ ಮೆಚ್ಚುಗೆಯಾಯ್ತು. ಬರೆದ  ಕಾವ್ಯ-ಹಾಡುವ ಹಾಡು  ಜನ ಮನ ತಲುಪುವಂತಾದರೆ, ಸ್ತ್ರೀ ಶೋಷಿತ ಸಮಾಜದ ಪರಿವರ್ತನೆಯಾಗುವಲ್ಲಿ ನೆರವಾದರೆ  ಬರೆದ ಕವಿತೆ ಸಾರ್ಥಕವಾದೀತು ಎಂದು ನನ್ನ ಅನಿಸಿಕೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಅನುಭವಿ, ಕವಿ ಶ್ರೀ ಪ್ರಕಾಶ್ .ಗ. ಖಾಡೆ ಅವರ ಕವಿತೆಗಳು ನಿಮ್ಮೆಲ್ಲರ ಮೆಚ್ಚುಗೆ ಗಳಿಸುವುದರಲ್ಲಿ ಸಂದೇಹವೇ ಇಲ್ಲ. ಆದರೂ ಇದರ ತೀರ್ಪುಗಾರರು ನೀವು  ಓದುಗರು. ನಿಮ್ಮ ಮುಕ್ತ ಪ್ರತಿಕ್ರಿಯೆಯೇ ಕವಿಗಳಿಗೆ ಹೆಚ್ಚಿನ ಸ್ಫೂರ್ತಿ. ಸಾಹಿತಿ, ಕವಿ ಶ್ರೀ ಪ್ರಕಾಶ್ ಗ.ಖಾಡೆ ಅವರ ಮುಂದಿನ ಸಾಹಿತ್ಯ ಪ್ರಕ್ರಿಯೆಗಳಿಗೆ ಯಶಸ್ಸನ್ನು ಕೋರುವೆ.
- ಈರಣ್ಣ ಮೂಲೀಮನಿ (ಕಸ್ತೂರಿಪ್ರಿಯ) ದುಬೈ.
ವಿಭಾಗ ಸಂಪಾದಕರು, ಕಾವ್ಯ ಸಿಂಚನ ವಿಭಾಗ

ಕವಿ ಪರಿಚಯ : 

ಡಾ|| ಪ್ರಕಾಶ ಗ. ಖಾಡೆ,ಬಾಗಲಕೋಟ.
ಡಾ. ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ, ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾಗಿ 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ. ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ, ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರಗೊಂಡಿವೆ.
ಈವರೆಗೆ "ಗೀತ ಚಿಗಿತ", "ಪ್ರೀತಿ ಬಟ್ಟಲು", "ತೂಕದವರು", ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಜಾನಪದ ಹೆಬ್ಬಾಗಿಲು, "ಮುನ್ನುಡಿ ತೋರಣ", ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕೃತಿ, ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ, ಮೌನ ಓದಿನ ಬೆಡಗು ಸೇರಿದಂತೆ 21 ಕೃತಿಗಳು ಪ್ರಕಟ.

ಮುಧೋಳ, ಶಿವಮೊಗ್ಗ ಮತ್ತು ವಿಜಾಪುರಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಉತ್ತಮ ವಾಗ್ಮಿ, ಅಪರೂಪದ ಶಿಕ್ಷಣ ಚಿಂತಕ ಡಾ|| ಪ್ರಕಾಶ ಖಾಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಜಾನಪದ ವಿದ್ವಾಂಸರ ಸಾಲಿನಲ್ಲಿ ಡಾ.ಖಾಡೆ ಅವರದು ಎದ್ದು ತೋರುವ ಹೆಸರು. ಬಾಗಲಕೋಟ ಜಿಲ್ಲಾಡಳಿತವು 2014 ರ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಿದೆ.

ವಿಳಾಸ:  ಡಾ. ಪ್ರಕಾಶ. ಗ. ಖಾಡೆ.
‘ಶ್ರೀಗುರು’ ಸರಸ್ವತಿ ಬಡಾವಣೆ,ಸೆಕ್ಟರ್ ನಂ.63, ನವನಗರ, ಬಾಗಲಕೋಟ.
ಮೊ: 9845500890
e-mail:drprakashkhade@gmail.com



- See more at: http://suddibantwala.com/article/view/20#sthash.1k53oiIJ.dpuf
ಕೃಪೆ :ಸುದ್ದಿ ಬಂಟ್ವಾಳ