ಶನಿವಾರ, ಜುಲೈ 13, 2013

ಹನಿಗವಿತೆ :ಗುರುನಾಥ ಬೋರಗಿ


ಹನಿಗವಿತೆ

ವಿರಹಿ,ನಾನೊಬ್ಬನೇ
ಅಲ್ಲ ಗೆಳತೀ...
ತೀರ ತಬ್ಬಿಕೊಳ್ಳುವ
ಹಂಬಲ,
ಕಡಲ ಅಲೆಗಳಿಗೂ ಇದೆ
-ಗುರುನಾಥ ಬೋರಗಿ

ಕವಿತೆ :ಸುರೇಶ ಎಲ್.ರಾಜಮಾನೆ,ಮುಧೋಳ.

ಮಳೆ ಹಾಡು ಪಾಡು
- ಸುರೇಶ ಎಲ್.ರಾಜಮಾನೆ

ಮಳಿ ಬಂತು ಬಾಳ ಜೋರ
 ನಾನಾವಾಗ
ಹದಿನಾರ ವರ್ಷದ ಪೋರ
 ಶಾಲಿಗಿ ಹೋಗಿದ್ದೆ
ಎಂಟು ಕಿಲೋಮಿಟರ್ ದೂರ
 ಸೈಕಲ್ ಮ್ಯಾಲೆ ನಾ ಸಾಹುಕಾರ


ದಾರಿಯೊಳಗ
ಮುಂದಿನ ಗಾಲಿ ಪಂಚರ್
 ಬರ ಬರ ಬನ್ನಿ
ಅಲ್ಲೊಂದಿತ್ತು ಹುಂಚಿ ಮರ
 ಅಲ್ಲೆ ನಿಂತನಿ ಮತ್ತ ಶುರುವಾತು
ಮಳಿಕಿಂತ
ಗಿಡದ ಮ್ಯಾಲಿನ ಹನಿಗೋಳ ಕಾರಬಾರ

ಬ್ಯಾಡ ಅಂದಾವ್ನ
ಹೊಂಟ್ನಿ ಹಂಗ ಮಳ್ಯಾಗ
 ಮನಿಗಿ ಹೋಗಿ ನೋಡಿದ್ರ ಹೊಳಿ
ನಮ್ ಗುಡಸಲಿನ್ಯಾಗ
ಹಾದ ಹೋದಂಗಾಗಿತ್ತು
 ಅಡಿಗಿ ಮನ್ಯಾಗ ಗಡಿಗೀಲೆ ನೀರ ಎತ್ತಿ ಹಾಕಾಕ
 ತೋಡಿದಂಗಿತ್ತು ಒಂದ ಬಾವಿ

ಅಪ್ಪ
ದನಗೋಳ ಗುಡಸಲಿನ್ಯಾಗ ಜೋತ ಬಿದ್ದರೋ
ಕಟ್ಟಿಗಿ ಕಂಬಕ್ಕೊಂದ
ಕಟ್ಟಿಗಿ ಆಸರ ಕೊಡ್ತಿದ್ದ

ಅವ್ವ
ಅಜ್ಜಿ ಹೊಲದಿದ್ದ ಕೌದಿಯೊಳಗ
 ಕಟ್ಟ ಇಟ್ಟಿದ್ದ ಸ್ವೇಟರ್ ಹಾಕೊಂಡು
 ಕಡ್ಲಿ ಹುರಿತಿದ್ಲು
ಆ ಜಳ ಬಿಸಿ ಪರಿಮಳ

ಹಾಸಿಗಿಯೊಳಗ ನಾ
ನನಗೆರಡು ಅಂಗಿ
 ಮೊಳಕಾಲ್ನ ಮುಖಕ್ಕ ಹತ್ತುವಂಗ ಜಗ್ಗಿ
ಮುಖ ಅಷ್ಟ
 ಹೊರಗ ಹಾಕಿದರ ಸಿಡಿಲಿನ ಶಬ್ದ
ಮತ್ತ ಮಗ್ಗಲ ಮನಿ
 ತಗಡು ಗಡ ಗಡ ಸೌಂಡ ಮಾಡ್ತಿತ್ತು

ಒಳಗೊಳಗ ಖುಷಿ ನಮ್ದು ಬಿಲ್ಡಿಂಗ್ ಇಲ್ಲ
ಬಿದ್ರ ಸಾಯುದಿಲ್ಲ; ಆದರೂ
ಗುಡಿಸಲ ತಟ್ಟಿ ಗಟ್ಟಿಲ್ಲ ಅಂತ
ಮನಸಿಗಿ ಬ್ಯಾಸರ
 ಮನಸಿನ್ಯಾಗ ನೆನೆದ ನೆನಪು
 ಅಯ್ಯೋ! ದೇವ್ರ
ಯಾವಾಗ ಬರತಾನಪ್ಪ ಸೂರ್ಯ ....||

=ಸುರೇಶ್.ಎಲ್.ರಾಜಮಾನೆ(ಸೂರ್ಯ*), ರನ್ನಬೆಳಗಲಿ.
  ತಾ|| ಮುಧೋಳ ಜಿ|| ಬಾಗಲಕೋಟ