ಶನಿವಾರ, ಜೂನ್ 29, 2013

ಪುಸ್ತಕ ವಿಮರ್ಶೆ :ನೆಲಮೂಲ ಸಂಸ್ಕೃತಿ.

ಪುಸ್ತಕ ವಿಮರ್ಶೆ
ಜನಪದ ಸಂಸ್ಕೃತಿಯ ಕ್ರಿಯಾಶೀಲತೆಯ ಸಂಕಥನ

                               - ಡಾ.ವೀರೇಶ ಬಡಿಗೇರ


‘ನೆಲಮೂಲ ಸಂಸ್ಕೃತಿ'
 (ಜನಪದ ಲೇಖನಗಳು)
ಡಾ.ಪ್ರಕಾಶ ಗ.ಖಾಡೆ ,
ಕಿಟಕಿ ಪ್ರಕಾಶನ,ನಂ.117,2ನೇ ಕ್ರಾಸ್,ದಕ್ಷಿಣ,
ಅನಿಕೇತನ ರಸ್ತೆ, ಮೈಸೂರು -570023
ಪ್ರಕಟಣೆಯ ವರ್ಷ :2010

ಡಾ. ಪ್ರಕಾಶ್ ಖಾಡೆಯವರು ಹಲವು ವರ್ಷಗಳಿಂದ ಉತ್ತರ ಕರ್ನಾಟಕದ ಜಾನಪದ ವಿವಿಧ ಮಜಲುಗಳ ಮೇಲೆ ಕೆಲಸ ಮಾಡುತ್ತ ಅವುಗಳ ಮೇಲೆ ಬೆಳಕು ಚೆಲ್ಲುತ್ತ ಬಂದ ಗಂಭೀರ ಬರಹಗಾರರಲ್ಲೊಬ್ಬರಾಗಿದ್ದಾರೆ. ಅವರು 29 ಲೇಖನಗಳನ್ನೊಳಗೊಂಡ ‘ನೆಲಮೂಲ ಸಂಸ್ಕøತಿ’ ಕೃತಿಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಜನಪದ ಅಧ್ಯಯನಕ್ಕೆ ಹೊಸ ಕೊಡುಗೆ ನೀಡಿದ್ದಾರೆ. ಇದು ಅವರ ಸತತ ಪ್ರಯತ್ನ ಹಾಗೂ ಬದ್ಧತೆಯ ಫಲವೆಂದೇ ನನ್ನ ಭಾವನೆ.
ಖಾಡೆಯವರ ಜನಪದ ಅಧ್ಯಯನದ ಮುಖ್ಯ ಶಕ್ತಿ ಎಂದರೆ ಕ್ಷೇತ್ರಕಾರ್ಯ. ಕ್ಷೇತ್ರಕಾರ್ಯದ ಮೂಲಕ ಅಪರೂಪದ ಕಲಾಪ್ರಕಾರಗಳನ್ನು ಗುರುತಿಸಿ ಪರಿಚಯಿಸುವ ಹಾಗೂ ವಿಶ್ಲೇಷಿಸುವಲ್ಲಿ ಅವರ ವಿಶಿಷ್ಟತೆಯನ್ನು ಕಾಣುತ್ತೇವೆ. ‘ಗರದಿ ಗಮ್ಮತ್ತಿನ ಕೊನೆಯ ಪೆಟ್ಟಿಗೆ’, ‘ಹೊನವಾಡದ ಜೋಗರಾಣಿಗೆ ಸುಡಗಾಡಿನಲ್ಲಿ ಪೂಜೆ’, ಅಪ್ಪಟ ಗ್ರಾಮೀಣ ಕ್ರೀಡೆ ಅಟ್ಟ್ಯಾ ಪಟ್ಟ್ಯಾದಂತಹ ಅಸ್ತಿತ್ವವನ್ನೇ ಕಳೆದುಕೊಂಡಿರುವ ನೋಡಲೂ ಸಿಗಲು ಅಸಾಧ್ಯವಾಗಿರುವ ಕ್ರಿಯಾ ಸಂಪ್ರದಾಯಗಳನ್ನು ದಾಖಲಿಸಿರುವುದು ಮೆಚ್ಚುವಂಥ ಮಾತಾಗಿದೆ.
ಜಾನಪದಕ್ಕೆ ಸಾವಿಲ್ಲ ಅದು ವಿವಿಧ ಆಕಾರದಲ್ಲಿ ಮರುರೂಪ ಪಡೆಯುತ್ತಲೇ ಇರುತ್ತದೆ. ಅಂಥ ಭಿನ್ನರೂಪದ ಪುನರಾವತಾರದ ಹೆಜ್ಜೆಗಳನ್ನು ಇಲ್ಲಿನ ಎಲ್ಲ ಲೇಖನಗಳಲ್ಲಿ ಕಾಣುತ್ತೇವೆ. ‘ಹೊಸಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿದ್ದು  ದಾಖಲಾರ್ಹವಾದುದು.ಕವಿ ಮತ್ತು ಕವಿತೆಯನ್ನು ಒಂದು ಜನಪ್ರಿಯ ನೆಲೆಯಲ್ಲಿ ತಂದು ಜನಸಾಮಾನ್ಯರ ನಾಲಿಗೆಯ ಮೇಲೆ ತಮ್ಮ ರಚನೆಗಳು ಉಳಿಯುವಂತೆ ಮಾಡುವುದರೊಂದಿಗೆ ವಿದ್ವತ್‍ವಲಯವೆಂದು ಹೇಳಿಕೊಂಡು ಬಂದ ವಸಾಹತುಶಾಹಿ ಪ್ರಜ್ಞೆಯ ಮನೋಭಾವದ ಲೇಖಕರನ್ನು ಅಚ್ಚರಿಗೊಳಿಸಿ ನಾದದ ಗುಂಗು ಹಿಡಿಸಿದ ‘ಪರಿಯನ್ನು’ ಖಾಡೆಯವರು ಗುರುತಿಸುವಲ್ಲಿಯೇ ಪುನರಾವತಾರದ ಕಲ್ಪನೆಗಳ ನಿಹಿತಗೊಂಡಿದೆ. ತಮ್ಮ ಪಿಎಚ್.ಡಿ. ಅಧ್ಯಯನದಲ್ಲಿ ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ ಗುರುತಿಸುವಲ್ಲಿ ಅವರ ತೋರಿದ ಹೊಸತನ ಪರಂಪರೆಯನ್ನೇ ಮುರಿದು ಕಟ್ಟುವ ಕ್ರಮವಾಗಿದೆ.
ಸಂಗ್ರಹ ಎನ್ನುವುದು ಸಂರಕ್ಷಣೆ ಹಾಗೂ ಪೋಷಣೆಯ ಸಂಗೋಪನ ರೂಪ. ನವೋದಯ ಕಾಲದಿಂದ ಹಿಡಿದು ಇಂದಿನವರೆಗೂ ವಿದ್ವಾಂಸರು ಸಂಗ್ರಹಿಸಿದ ಕತೆಗಳು, ಗೀತೆಗಳು, ಒಗಟುಗಳು, ಲಾವಣಿಗಳು, ಅಸಂಖ್ಯ. ಖಾಡೆಯವರು ಅಂಥ ಪರಂಪರೆಯನ್ನು ಮುಂದುವರಿಸಿದ್ದಾರೆ. ವಿಶೇಷವಾಗಿ ಜಾನಪದ ಆಕರಗಳ ಸಂಗ್ರಹ ಕಾರ್ಯಕ್ಕೆ ಬುನಾದಿ ಹಾಕಿದವರು ಗುಳೇದಗುಡ್ಡದ ಬಾಳಿ ಇಂಟೆ (1874) ಹಾಗೂ ಬದಾಮಿಯ ಪರಯ್ಯ ವೀರಭದ್ರಯ್ಯ ಗಣಾಚಾರಿ; ನಾರಾಯಣ ಅಯ್ಯಾಜಿಯವರು ಅನ್ನುವುದು ಮತ್ತೊಂದು ಹೊಸ ವಿಚಾರವಾಗಿದೆ. ಐತಿಹಾಸಿಕ ಲಾವಣಿ ಸಂಗ್ರಹದಲ್ಲಿ ಪ್ಲೀಟರಿಗೆ ಹೆಗಲು ಕೊಟ್ಟು ನಿಂತ ಇವರು ಬಾಗಲಕೋಟ ಜಿಲ್ಲೆಯ (ಆಗಿನ ವಿಜಾಪುರ ಜಿಲ್ಲೆ) ಜಾನಪದ ಸಾಹಿತ್ಯ ಮೊದಲಿಗೆ ದಾಖಲೆಯಾಗುವಂತೆ ಮಾಡಿದ್ದಾರೆ. ನಂತರ ಡಾ. ಬಿ.ಎಸ್. ಗದ್ದಗಿಮಠ ಅವರ ಸಂಗ್ರಹಕಾರ್ಯವಲ್ಲದೆ ಸಂಶೋಧನೆಯನ್ನೇ ಮಾಡಿ ಪದವಿ ಪಡೆದಿದ್ದು ಜಾನಪದಕ್ಕೆ ಅಕಾಡೆಮಿಕ್ ವಲಯದಲ್ಲಿ ಪ್ರಾಶಸ್ತ್ಯವೇ ಇರದ ದಿನಮಾನಗಳಲ್ಲಿ ಎನ್ನುವುದು ಮುಖ್ಯ ಅಂಶ. ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯೇ ಮೊದಲು ಹಾಗೂ ನವೋದಯ ಸಾಹಿತ್ಯದ ಮೊದಲ ಬೇರುಗಳು ಹಲಸಂಗಿಯಿಂದಲೇ ಚಿಗುರಿದ್ದು ಎಂದು ಖಾಡೆಯವರು ಸಾಧಿಸಿ ತೋರಿಸಿರುವುದು ಮೆಚ್ಚತಕ್ಕಂತ ಸಂಗತಿಯಾಗಿದೆ.
ಕ್ಷೇತ್ರದಿಂದ ತರುವ ಸಾಮಾನ್ಯ ಮಾಹಿತಿಗಳನ್ನು ಒಪ್ಪವಾಗಿ ಜೋಡಿಸುವಲ್ಲಿ ಖಾಡೆಯವರ ಪರಿಶ್ರಮ ಎದ್ದು ಕಾಣುತ್ತದೆ. ಕ್ಷೇತ್ರದಿಂದ ಪಡೆದ ಅಪೂರ್ವ ಮಾಹಿತಿಗಳು ಈ ಹೊತ್ತಿಗೆಯಲ್ಲಿವೆ. ಲೇಖನಗಳು ತುಂಬಾ ಸಾಂದರ್ಭಿಕವೆನಿಸಿದರೂ ಅವು ಗರ್ಭೀಕರಿಸಿಕೊಂಡಿರುವ ಮಾಹಿತಿ ಕಡೆಗಣಿಸುವಂಥವಲ್ಲ. ಕೃಷ್ಣಾ ತೀರದ ಒಗಟುಗಳು, ಬದಲಾಗುತ್ತಿರುವ ಜನಪದ ಆಚರಣೆ ಓಕುಳಿ, ಜನಪದ ನಾಗರಪಂಚಮಿ, ತತ್ವಪದ, ರಿವಾಯತ ಪದಗಳು, ಕುಂದರಗಿ ಕಂಬಳಿ ಮುಂತಾದ ಕಲಾ ಪ್ರಕಾರಗಳು ಸಂಪ್ರದಾಯ ಆಚರಣೆಗಳು ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿವೆ. ವಿಶೇಷವಾಗಿ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಿರುವ ಊರುಗಳ ಸಹಜ ಸಂಸ್ಕøತಿ ಸಂಬಂಧಗಳು ಇಂದು ಹರಿಗಡಿದಿವೆ. ಜಾನಪದ ಬದುಕು ಎನ್ನುವುದು ಅದೊಂದು ಸಂಯೋಜಿತ ಬದುಕು ಹಾಗೂ ಸಾವಯವ ಸ್ವಭಾವದ್ದು. ಕೂಡಿ ಕಟ್ಟುವ ಅಲ್ಲಿನ ಕ್ರಿಯಾಶೀಲತೆ ಹಲವು ಸಂಕಥನಗಳಿಗೆ ರೂಪಕೊಡುವಂಥದ್ದು. ಕೃಷಿಭೂಮಿ ಇಲ್ಲವಾಗಿ, ಸಹಜ ಉದ್ಯೋಗಗಳು ಕಡಿಮೆಯಾಗಿ, ಸ್ವಾವಲಂಬಿತನ ಎನ್ನುವುದು ಮನುಷ್ಯರಲ್ಲಿ ಮಾಯವಾಗುತ್ತಿದೆ. ಅಂಥ ಹೊತ್ತಲ್ಲಿ ಕಲಾ ಸಂಪ್ರದಾಯಗಳು ಬದುಕಿನ ರೀತಿ ನೀತಿಗಳು ರೂಪಗೊಳ್ಳಲು ಸಾಧ್ಯವಿಲ್ಲ. ಕಳೆದು ಹೋಗುತ್ತಿರುವ ಅಂತಹ ನೂರಾರು ಸಂವೇದನೆಗಳನ್ನು ಖಾಡೆಯವರು ಇಲ್ಲಿ ದೃಶ್ಯೀಕರಿಸಿದ್ದಾರೆ.
ಒಟ್ಟಿನಲ್ಲಿ ಡಾ. ಪ್ರಕಾಶ ಖಾಡೆಯವರ ಇಲ್ಲಿನ ಎಲ್ಲ ಲೇಖನಗಳು ಒಂದು ವಿಸ್ತಾರವಾದ ಜಾನಪದ ಸಂಸ್ಕೃತಿಯನ್ನು ತೆರೆದು ತೋರುತ್ತಿರುತ್ತವೆ. ಇಲ್ಲಿನ ಅಪೂರ್ವ ಮಾಹಿತಿಗಳು ಹೊಸ ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತವೆ. ಇಲ್ಲಿನ ಬರಹದ ಹಿಂದಿರುವ ಉತ್ಸಾಹ, ಬದ್ಧತೆ, ಹಠ ಇಂಥ ಪ್ರೇರಣೆಗೆ ಕಾರಣವಾಗಿದೆ.
                                - ಡಾ.ವೀರೇಶ ಬಡಿಗೇರ

---------------------------------------------------------
ಡಾ. ವೀರೇಶ ಬಡಿಗೇರ, ಮುಖ್ಯಸ್ಥರು, ಹಸ್ತಪ್ರತಿಶಾಸ್ತ್ರ ವಿಭಾಗ, ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾಲಯ, ಹಂಪಿ,ವಿದ್ಯಾರಣ್ಯ,ಕಮಲಾಪುರ
ತಾ.ಹೊಸಪೇಟ ,ಜಿ.ಬಳ್ಳಾರಿ  ಮೊ.9448845789



ಮಂಗಳವಾರ, ಜೂನ್ 25, 2013

ಜಾನಪದ



ಆಧುನಿಕ ಸಾಹಿತ್ಯದ ಜನಮುಖಿಯ ತಳಪಾಯ “ಜಾನಪದ”

                                                       - ಡಾ. ಪ್ರಕಾಶ ಗ. ಖಾಡೆ

ಜನಪದ ಸಾಹಿತ್ಯ ಜನ ಬದುಕಿದ, ಬದುಕುತ್ತಿರುವ ಎಲ್ಲ ಪ್ರದೇಶಗಳಲ್ಲೂ ಎಲ್ಲ ಕಾಲಕ್ಕೂ
ಉಳಿದುಕೊಂಡು ಬಂದಿದೆ. ಯಾವುದೇ ದೇಶದ ಮೊದಲ ಸಾಹಿತ್ಯ ಆ ದೇಶದ ಜನಪದ ಸಾಹಿತ್ಯವೇ ಆಗಿದೆ. ಈ ಕಾರಣವಾಗಿ ಅದರ ಒಡಲೊಳಗೇ ಉದಿಸಿ ಬಂದ ಶಿಷ್ಟ ಸಾಹಿತ್ಯದ ಬೇರುಗಳು ಜಾನಪದವೇ ಆಗಿರುವುದು ಸರ್ವವಿಧಿತ. ಕಾಲ ಕಾಲಕ್ಕೆ ಕಾವ್ಯದ ರೂಪ ಕಟ್ಟುವಿಕೆಯ ಶೈಲಿ ಬದಲಾಗುತ್ತ ಬಂದರೂ ಜಾನಪದರಿಂದಲೇ ಹೊಸತನ ಪಡೆದುಕೊಂಡು ನೆಲೆನಿಂತಿರುವುದು ಕಾಣುತ್ತೇವೆ. ಇವತ್ತು ತನ್ನ ಸತ್ವ ಸೊಗಡು ಕಳೆದುಕೊಂಡಿರುವ ಶಿಷ್ಟ ಸಾಹಿತ್ಯ ಜೀವಂತವಾಗಲು ಜನಪದ ಸಾಹಿತ್ಯದ ಬೇರಿನಿಂದ ನೀರು ಕುಡಿಯಬೇಕಾಗಿದೆ. ಕೇವಲ ಹಳೆಯದರ ಪಳೆಯುಳಿಕೆಯಾಗದಂತೆ ಜನಪದ ಸಾಹಿತ್ಯ ಇವತ್ತು ಆಧುನಿಕತೆಯ ಶಕ್ತಿ, ಸೌಂದರ್ಯ, ವೈಚಾರಿಕತೆ ಮೈಗೂಡಿಸಿಕೊಂಡು ಬೆಳೆದು ನಿಲ್ಲ ಬೇಕಾದ ಕಾಲ ಬಂದಿದೆ. ಹೀಗಾಗಿ ಜನಪದದಿಂದ ಶಿಷ್ಟ ಸಾಹಿತ್ಯ, ಶಿಷ್ಟ ಸಾಹಿತ್ಯದಿಂದ ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಕೊಡಕೊಳ್ಳುವ ಕಾರ್ಯ ನಡೆದೆ ಇದೆ. ಈ ಮೂಲಕ ಹೃದಯದಲ್ಲಿ ನಿಂತ ಜನಪದರು ವೈಚಾರಿಕ ನೆಲೆಗಟ್ಟಿನಲ್ಲಿ, ವೈಚಾರಿಕ ನೆಲೆಗಟ್ಟಿನಲ್ಲಿದ್ದ ಶಿಷ್ಟರು  ಹೃದಯದಲ್ಲಿ ನಿಂತು ಬದುಕುವ ಸಂದರ್ಭ ಸೃಷ್ಠಿಯಾಗಿದೆ. ‘ಆಧುನಿಕತೆಯಿಂದ ಜನಪದವೂ ಜೀವಂತವಾಗುವುದು. ಜನಪದ ಸಾಹಿತ್ಯದ ಸತ್ವ ಸೊಬಗುಗಳಿಂದ ಇಂದಿನ ಹೆಚ್ಚಿನ ಕವಿಗಳು ಶಿಷ್ಟ ಸಾಹಿತ್ಯ ರಚಿಸುತ್ತಿರುವ ಅವರ ಕಾವ್ಯ ಜೀವಂತವಾಗಿರಲು ಕಾರಣವಾಗಿದೆ. ಇಲ್ಲದಿದ್ದರೆ ಅವರ ರಚನೆಗಳೆಲ್ಲ ಕಾಗದದ ಹೂವುಗಳಾಗುವವು’ಎಂಬ ಚೆನ್ನಣ್ಣ ವಾಲೀಕಾರರ ಮಾತುಗಳು ಜಾನಪದವನ್ನು ಅರಗಿಸಿ ಕೊಂಡ ಶಿಷ್ಟತೆಯ ಪ್ರಸ್ತುತತೆಯನ್ನು ಕಂಡರಿಸುತ್ತದೆ.
                ಆದಾವ ನಮ ಜೋಳ
                ಉಳಿದಾವ ನಮ ಹಾಡ
   ಎನ್ನುವಂತೆ ಜನಪದಕ್ಕೆ ಅಂತ್ಯ ಎಂಬುದು ಇಲ್ಲ. ಅದು ಬೇರೆ ಬೇರೆ ರೂಪದಿಂದ ಹೊರ ಹೊಮ್ಮುತ್ತಲೇ ಇರುತ್ತದೆ. ವೈಜ್ಞಾನಿಕ ನಾಗರಿಕತೆಯ ಹಾಗೂ ಅರ್ವಾಚೀನ ಕಲೆಗಳ ತಾಯಿ ಬೇರುಗಳನ್ನು ಪ್ರಾಚೀನ ಜನಪದದಲ್ಲಿ ಗುರುತಿಸುತ್ತೇವೆ.

                           ಖ್ಯಾತ ವಿದ್ವಾಂಸರಾದ ದೇ.ಜವರೇಗೌಡರು ಹೇಳುವಂತೆ:
“ಮುತ್ತಜ್ಜನೆಂತು ಮೊಮ್ಮಗನಿಗೆ ಪೂಜ್ಯನೋ ಅಂತೆಯೇ ಶಿಷ್ಟಪದಕ್ಕೆ ಜಾನಪದ ಆರಾಧ್ಯವಾಗುತ್ತದೆ. ಶಿಷ್ಟ ಸಾಹಿತ್ಯ ಯಾವಾಗಲೂ ಎಂದಿನಿಂದಲೂ ಜನಪದ ಸಾಹಿತ್ಯಕ್ಕೆ ಋಣಿಯಾಗಿದೆ. ಹೋಮರ್, ವಾಲ್ಮೀಕಿ, ವ್ಯಾಸಾದಿ ಕವಿಗಳೆಲ್ಲರೂ ಅಜ್ಞಾತ ಜನಪದ ಕವಿಗಳಿಗೆ ನಾನಾ ರೀತಿಯಲ್ಲಿ ಋಣಿಗಳಾಗಿದ್ದಾರೆನ್ನುವುದು ಸರ್ವವೇದ್ಯ ಸಂಗತಿಯಾಗಿದೆ.” ಶಿಷ್ಟ ಸಾಹಿತ್ಯ ಮಡುಗೊಂಡು ಪಾಚಿ ಬೆಳೆದು ಬಗ್ಗಡಗೊಂಡು ನಾರುವಂತಾದಾಗ ಜನಪದ ಸಾಹಿತ್ಯ  ವಾಹಿನಿ ಅದರ ಮೇಲೆ ಹರಿದು ಪಾಚಿ ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು. ವಡ್ರ್ಸವರ್ತ, ಬರನ್ಸ,  ಸ್ಕಾಟ್, ಪುಸ್ಕಿನ್, ಕುಮಾರವ್ಯಾಸ, ವಚನಕಾರರು ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಅದರಂತೆ ಪಂಪ ತನ್ನ ಕಾವ್ಯದ ಉನ್ನತಿಗೆ ಪ್ರೌಢದ ಜತೆಗೆ ದೇಸೀಯನ್ನು ಸಮೀಕರಿಸಿದ್ದಾನೆ.ಶಿವಶರಣರು ತಮ್ಮ ಹಿಂದಿನ ಚಂಪೂ ಪರಂಪರೆಯನ್ನು ಮುರಿದು ವಚನ ಪರಂಪರೆಯನ್ನು ಪ್ರತಿಷ್ಠಾಪಿಸಲು ಜನಪದ ಸಾಹಿತ್ಯವನ್ನೇ ಆಶ್ರಯಿಸಿದರು. ಜನಪದ ಭಾಷೆ, ಛಂದಸ್ಸು ಶಿಷ್ಟ ಸಾಹಿತ್ಯದ ಹುಟ್ಟಿಗೆ ಮೂಲವಾಗಿದೆ. ಗರತಿಯ  ತ್ರಿಪದಿಯೇ ಶಿಷ್ಟರ ಚೌಪದಿ, ಷಟ್ಪದಿ ಹುಟ್ಟಿಗೆ ಬುನಾದಿಯಾಗಿದೆ. ಜನಪದ ಛಂದಸ್ಸು, ಜೈನರ ಚಂಪೂ, ವೀರಶೈವರ ವಚನ ರಗಳೆ, ಬ್ರಾಹ್ಮಣರ ಷಟ್ಪದಿ, ದಾಸರ ಹಾಡು, ಸರ್ವಜ್ಞನ ತ್ರಿಪದಿಗಳಿಗೆ ಆಶ್ರಯವಾಗಿದೆ.
               ಜನಪದ ಗೀತೆ ಎಲ್ಲವನ್ನು ಒಳಗೊಂಡ ಬಯಲು ಆಲಯ. ಅದು ಉದ್ದೇಶಪೂರ್ವಕವಾಗಿ ಕಲಾತ್ಮಕವಾದುದಲ್ಲ. ಅದರ ಜೀವಂತಿಕೆಯೇ ಅದರ ಕಲಾತ್ಮಕತೆ, ಅನುಭವ ಮತ್ತು ಶಾಸ್ತ್ರರೂಪದ ಇಲ್ಲಿನ ವಸ್ತು ಜನರ ಸಮೂಹ ಕೇಂದ್ರಿತ ಆಸಕ್ತಿ, ಮಾತೃ ನಂಬಿಕೆಗಳ ಮೇಲೆ ನಿಂತಿರುವಂಥದಾಗಿದೆ. ‘ವ್ಯಕ್ತಿ ವ್ಯವಸ್ಥೆಯ ಸಂಬಂಧ, ಸಾಮಾಜಿಕ ರಚನೆ, ಸಂಘರ್ಷ ರೂಪದ ಜೀವನ, ಮಾನವ ಜೀವನದ ಸ್ಥಿತಿಗತಿಗಳ ನೀತಿ, ನಿಯಮ ನಿಷ್ಠೆ, ಸಾರ್ಥಕತೆಗಳು ಆಚಾರ, ವಿಚಾರ, ಸಂಪ್ರದಾಯ ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ’ ಹೀಗೆ ಒಟ್ಟು ಬದುಕಿನ ಪ್ರತಿ ಮಗ್ಗಲುಗಳನ್ನು ಆವರಿಸಿಕೊಂಡಿರುವ ಜನಪದವು ಶಿಷ್ಟ ಪ್ರಕಾರಕ್ಕೆ ತನ್ನ ಕೊಡುಗೆ ನೀಡುತ್ತ ಉಳಿದುಕೊಂಡು ಬಂದಿರುವುದು ಅದರ ಚಲನ ಶೀಲತೆಗೆ ಸಾಕ್ಷಿಯಾಗಿದೆ.    
        ಚಂಪೂ, ವಚನÀ, ಷಟ್ಪದಿ, ನವೋದಯ ಸಾಹಿತ್ಯ ಮುಂತಾಗಿ ಕನ್ನಡ ಕಾವ್ಯ ಪರಂಪರೆಯ ಉದ್ದಕ್ಕೂ ಜಾನಪದದ ಇತಿಹಾಸ ಗುರುತಿಸಬಹುದು.ತ್ರಿಪದಿಗಳು, ಕಥನಕವನಗಳು, ಗೊಂದಲಿಗರ ಹಾಡುಗಳು, ಲಾವಣಿಗಳು, ಕೋಲಾಟದ , ಬಯಲಾಟದ ಪದಗಳು, ಡೊಳ್ಳಿನ ಪದಗಳು.. ಹೀಗೆ ಅನೇಕ ರೀತಿಯ ಪದ್ಯ ರೂಪಗಳು ಬಹುಕಾಲದಿಂದಲೂ ನಡೆದು ಬಂದಿರುವುದು ಇತಿಹಾಸದ ಮುಂದುವರಿಕೆಯಾಗಿದೆ.
ಇಂದಿಗೂ ಜನಪದ ಕಾವ್ಯ ಪರಂಪರೆ ಜೀವಂತವಾಗಿದೆ. ಗೊಂದಲಿಗರು, ಹೆಳವರು ತಾವು ಕಲಿತ ಹಾಡುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ತಾವು ಹೋದೆಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಹಿಮ್ಮೇಳದಲ್ಲಿ ಉಪಯೋಗಿಸಿಕೊಳ್ಳುತ್ತಾರೆ,
                      ಮುಂದೆ ಅವರೂ ಸ್ವತಂತ್ರವಾಗಿ ಹಾಡಬಲ್ಲವರಾಗುತ್ತಾರೆ. ಶಕ್ತರಾದವರು ಹೊಸ ಹಾಡುಗಳನ್ನು ಕಟ್ಟಿಕೊಂಡು ಜೋಡಿಸಿಕೊಳ್ಳುತ್ತಾರೆ. ಕಂಸಾಳೆ ಸಿರಿಯ ದೇವರ ಗುಡ್ಡರು ಗುರುವಿನ ಮೂಲಕ ಹಾಡುಗಳನ್ನು ಕಷ್ಟಪಟ್ಟು ಕಲಿಯುತ್ತಾರೆ ಇದು ಪರಂಪರೆಯಿಂದ ಸಾಗಿ ಬಂದ ಇತಿಹಾಸ ಗುರುತಿಸುತ್ತದೆ.
        ಜಾನಪದಕ್ಕೆ ಪ್ರಭು ಸಂಸ್ಕ್ರತಿಯಲ್ಲಿ ಹುಟ್ಟಿಕೊಂಡ ಸಾಹಿತ್ಯ ತತ್ತ್ವಗಳನ್ನು ಇವತ್ತಿಗೂ ಅನ್ವಯಿಸಿಕೊಳ್ಳುವ ಬಗ್ಗೆ ಹಿ.ಶಿ. ರಾಮಚಂದ್ರೇಗೌಡರ ವಿರೋಧವಿದೆ. ಶ್ರೇಷ್ಠತೆಯ ಮಾನದಂಡಗಳು ವರ್ಗಸಮಾಜ ಮತ್ತು ಬಹುಸಮಾಜದ ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಬೇರೆ ಬೇರೆಯಾಗುತ್ತವೆ. ಕಾವ್ಯ ಧ್ವನಿ-ಸಾಂಸ್ಸøತಿಕ ಧ್ವನಿ ಅದು ಅಲೌಕಿಕ ಧ್ವನಿ ಅಲ್ಲ. ಇದರ ಪರಿಣಾಮವಾಗಿ ಸಂಸ್ಕøತಿ ಹುಟ್ಟಿಕೊಳ್ಳುತ್ತದೆ. ಸಾಹಿತ್ಯ ಸ್ಠೃಷ್ಟಿಯಾಗುತ್ತದೆ. ಇಲ್ಲಿ ಶಿಷ್ಟ ಮತ್ತು ಜನಪದ ಸಾಹಿತ್ಯದ ಸಂದರ್ಭಗಳನ್ನು ಗಮನಿಸಬೇಕು.                                              
     ‘ಶಿಷ್ಟ ಜನಪದವಾದರೆ ಅದಕ್ಕೆ ಚಿರಂತತೆ ಬರುವುದು. ಜನಪದ ಶಿಷ್ಟವಾದರೆ ಅದಕ್ಕೆ ಸಾವುಂಟಾಗುವುದು’ ಎಂಬ ಚೆನ್ನಣ್ಣ ವಾಲೀಕಾರರ ಮಾತನ್ನು ಇಲ್ಲಿ ಗಮನಿಸಬೇಕು. ಶಿಷ್ಟರ ಸಾಹಿತ್ಯ ಶಿಷ್ಟರ ಮಧ್ಯೆಯೇ ಬೆಳೆದು ಅಲ್ಲಿಯೇ ಪರ್ಯಾವಸಾನಗೊಳ್ಳುತ್ತದೆ. ಶಿಷ್ಟ ಸಾಹಿತ್ಯದಲ್ಲಿ ಕವಿ, ಗಮಕಿ, ಕೆಲವೊಮ್ಮೆ ಸಹೃದಯ ಇರುತ್ತಾರೆ. ಶಿಷ್ಟ ಸಾಹಿತ್ಯದ ಪ್ರದರ್ಶನಕ್ಕೆ ಸಂದರ್ಭ ಒದಗಿಸಿಕೊಂಡು ಅದಕ್ಕಾಗಿಯೇ ವೇದಿಕೆ ನಿರ್ಮಿಸಬೇಕು. ಶಿಷ್ಟ ಸಾಹಿತಿ ತಾನೇ ರಚಿಸಿದ ಕವನವನ್ನು ಬಾಯಿಪಾಠ ಮಾಡಿ ಹಾಡಬೇಕಾಗುತ್ತದೆ. ಆದರೆ ಜನಪದದಲ್ಲಿ ಹೀಗಿಲ್ಲ. ಜನಪದ ಗೀತೆಗಳನ್ನು ಹಾಡುವವರು ಅವರದೇ ಆದ ರಾಗ, ಭಾವ, ತಾಳ, ಮೇಳಗಳನ್ನು ಅಳವಡಿಸಿಕೊಂಡು ಹಾಡುತ್ತಾರೆ. ಹಾಗೆ ಹಾಡುವಾಗ ಭಾವಕ್ಕನುಗುಣವಾಗಿ ಸಂದರ್ಭ ತಕ್ಕಂತೆ ಹಿಗ್ಗಿಸುವ ಕುಗ್ಗಿಸುವ ಸಾಮಥ್ರ್ಯವೂ ಅವರದಾಗಿರುತ್ತದೆ. ಆದ್ದರಿಂದ ಸಹೃದಯವೇ ಜನಪದ, ಜಾನಪದವೇ ಸಹೃದಯ. ಜನಪದ ಅದಕ್ಕಾಗಿಯೇ ನಿರ್ಮಿಸಿ ಮತ್ತೆ ಕಿತ್ತೆಸುವ ಅಗತ್ಯವಿಲ್ಲ. ಅದು ಜನಸಾಮಾನ್ಯರ ನಿತ್ಯ ಜೀವನದೊಂದಿಗೆ ಬೆರೆತು ಅವರೊಡನೆಯೇ ಜೀವಿಸುತ್ತದೆ. ಜೊತೆಗೆ ಜನಪದ ಕವಿ ಅನುಭಾವಿಯಾಗಿದ್ದರಿಂದ ಅದನ್ನು ಹೇಳುವ ಚತುರನಾಗಿರುತ್ತಾನೆ. ಹೀಗೆ ಶಿಷ್ಟ ಮತ್ತು ಜನಪದ ಸಾಹಿತ್ಯ ತನ್ನ ನೆಲೆಯಲ್ಲಿ ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತವೆ.
        ‘ಜನಪದ ಕಾವ್ಯದಲ್ಲಿ ಚಿಕ್ಕಪುಟ್ಟ ಪದಗಳೇ ಹೆಚ್ಚು, ಕಾರಣ ದೀರ್ಘ ಕವಿತೆಗಳನ್ನು ಕಟ್ಟುತ್ತ ನೆನಪಿಡುವುದು ಕಠಿಣ’ ಎಂದು ಹೇಳುವ ಮಾತಿದೆ. ಆದರೆ ಇದು ತಪ್ಪು. ಜನಪದ ಕಾವ್ಯಗಳು ಕೇವಲ ತ್ರಿಪದಿ ರೂಪದ ಪುಟ್ಟ ಪುಟ್ಟ ಕೃತಿಗಳಾಗದೆ ಅನೇಕ ಮಹಾಕಾವ್ಯಗಳು ಜಾನಪದದ ವಿಸ್ತಾರವನ್ನು ಸಾರಿವೆ.’ ಈ ಕಾವ್ಯಗಳ ಹಿರಿಮೆಯನ್ನು ದೇ. ಜವರೇಗೌಡರು ಹೀಗೆ ದಾಖಲಿಸುತ್ತಾರೆ:
       ‘ಮಲೆಯ ಮಾದೇಶ್ವರ ಕಾವ್ಯ, ದೇವರ ಗುಡ್ಡದ ಮಹಾಕಾವ್ಯ ಕಂಸಾಳೆ ವಾದ್ಯದೊಡನೆ ಏಳೆಂಟು ರಾತ್ರಿ ಅವಿಚ್ಛಿನ್ನವಾಗಿ ಅದರ ಗಾಯನ ಸಾಗುತ್ತದೆ. ವೈವಿಧ್ಯಮಯವಾದ ಛಂದೋಬಂಧಗಳಲ್ಲಿ ರಚಿತವಾದ ಲಲಿತಕಾವ್ಯವಿದು...
                     
ನೀಲಗಾರರಿಗೆ  ಮೀಸಲಾದ ಮಂಟೇಸ್ವಾಮಿ ಕಾವ್ಯ ಒಂದೇ ಒಂದು ಛಂದದಲ್ಲಿ ತಂಬೂರಿಯೊಡನೆ ನಿರರ್ಗಳವಾಗಿ ಹರಿಯುತ್ತದೆ. ಮೊದಲನೆಯದರಲ್ಲಿ ಮೂವತ್ತೆರಡು ಸಾವಿರ ಸಾಲುಗಳೂ, ಎರಡನೆಯದರಲ್ಲಿ ಇಪ್ಪತ್ನಾಲ್ಕು ಸಾವಿರ ಸಾಲುಗಳಿದ್ದು ಕಲೇವಾಲಕ್ಕಿಂತ ಗಾತ್ರದಲ್ಲಿ ದೊಡ್ಡದೆಂದೇ ಹೇಳಬೇಕು. ನೀಲಗಾರರ ಮಂಟೇಸ್ವಾಮಿ ಕಾವ್ಯವನ್ನು ‘ಧರೆಗೆ ದೊಡ್ಡವರ ವಚನ’ವೆಂದು ಕರೆಯುತ್ತಾರೆ. ಸುಮಾರು ಹದಿನೈದು ಸಾವಿರ ಸಾಲುಗಳು ವಿಸ್ತಾರವುಳ್ಳ, ಹತ್ತು ವಿಭಾಗಗಳಲ್ಲಿ ದೊರೆಯುವ ‘ಜನಪದ ಬಸವ ಪುರಾಣ’ವೊಂದು ಸೊಗಸಾದ ಮಹಾಕಾವ್ಯ. ಚೌಡಿಕೆ ಸಂಪ್ರದಾಯದ ಎಲ್ಲಮ್ಮನ ಕಾವ್ಯ ಮತ್ತು ಕಾಡುಗೊಲ್ಲರ ಸಂಪ್ರದಾಯದ ಜುಂಜಪ್ಪನ ಕಾವ್ಯಗಳು ಮಹಾ ಕಾವ್ಯದ ವಿಸ್ತಾರ ಹೊಂದಿರದಿದ್ದರೂ ಗುಣಲಕ್ಷಣಗಳಿಂದ  ಸಮೃದ್ಧವಾದ ಜನಪ್ರಿಯ ಕೃತಿಗಳು’ ಹೀಗೆ ಕೆರೆಯ ಹೊನ್ನಮ್ಮ, ಕಾಳಿಂಗರಾಯ, ಚೆನ್ನಿಗ ಚೆಲುವಯ್ಯ ಮುಂತಾದ ಮಹಾಕಾವ್ಯಗಳು ಕನ್ನಡ ಜನಪದ ಕಾವ್ಯದ ಗುಣ ಗಾತ್ರಗಳೆರಡರಿಂದಲೂ  ಸಮೃದ್ಧವಾಗಿ, ಬೇರೆ ಕಡೆ ಸಿಗದ ಮೌಲಿಕ ಸಾಹಿತ್ಯ ‘ಜಾಗತಿಕ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗ ಬಲ್ಲವುಗಳಾಗಿವೆ’ ಎಂದಿದ್ದಾರೆ.
        ಶಿಷ್ಟ ಸಾಹಿತ್ಯÀ ಕೇವಲ ಮನಸ್ಸಿನ ಸಾಹಿತ್ಯ, ಜನಪದ ಸಾಹಿತ್ಯ ದೇಹ ಮತ್ತು ಮನಸ್ಸಿನ ಸಾಹಿತ್ಯ ಇದು ಕ್ರಿಯೆಯೊಂದಿಗೆ ಹುಟ್ಟುತ್ತದೆ. ಬೀಸುವಾಗ, ಕುಟ್ಟುವಾಗ, ಅಲೆದಾಡುವಾಗ, ದೋಣಿ ನಡೆಸುವಾಗ ಹೀಗೆ ಒಟ್ಟು ಕ್ರಿಯೆಯಲ್ಲಿಯೇ ರೂಪುಗೊಂಡು ಬಳಕೆಯಾಗುತ್ತದೆ. ಶಿಷ್ಟ ಸಾಹಿತ್ಯವು ಏಕಸೃಷ್ಟಿಗೆ, ಏಕ ಶ್ರೇಷ್ಠತೆಗೆ ಸಂಬಂಧಪಟ್ಟಿದಾದರೆ, ಜನಪದ ಸಾಹಿತ್ಯ ಪುನರ್ ಸೃಷ್ಠಿಯಾಗುವಂಥದು. ಒಂದು ವ್ಯಕ್ತಿ ಸೃಷ್ಠಿ, ಮತ್ತೊಂದು ಸಮೂಹ ಸೃಷ್ಠಿ. ಜನಪದ ಸಾಹಿತ್ಯ ಸಮಾಜನಿಷ್ಠವಾಗಿ, ವಿಷಯನಿಷ್ಠವಾಗಿ ಮಾತನಾಡುತ್ತದೆ. ಅದು ವಸ್ತುನಿಷ್ಠವಾಗಿ ಮಾತನಾಡುವುದಿಲ್ಲ. ಹೀಗೆ ಅದರ ಪ್ರತ್ಯೇಕ ಅಸ್ತಿತ್ವಗಳನ್ನು ಗುರುತಿಸಿದರೂ ಅವು ಒಂದರೊಳಗೊಂದು  ಬೆಸೆದುಕೊಂಡು ಸೃಷ್ಟಿಯಾಗುತ್ತಿರುವುದು ಜನಪದದ ಪುನರ್ ಸೃಷ್ಟಿಯ ದ್ಯೋತಕವಾಗಿದೆ.
          ‘ಜಾನಪದಕ್ಕೆ ಸಾವಿಲ್ಲ; ಅದು ಭಿನ್ನ ರೂಪದಲ್ಲಿ ಮುಂದುವರೆಯುತ್ತದೆ’ ಎಂಬ ಮಾತಿನಂತೆ ‘ಜಾನಪದ ಪಳಿಯುಳಿಕೆ’ ಎಂಬ ಮಾತೂ ಇದೆ. ಪಳೆಯುಳಿಕೆ ಎಂದರೆ ಅಪ್ರಸ್ತುತ ಪಳೆಯುಳಿಕೆ ಎಂದಲ್ಲ, ಪಳೆಯುಳಿಕೆಯ ಪುನಃಸೃಷ್ಟಿ ಅಂದರೆ ಪಳೆಯುಳಿಕೆಯನ್ನು ಪುನಃಸೃಷ್ಟಿಸುತ್ತಾ ಪ್ರಸ್ತುತಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಜಾನಪದ ಎಂಬ ತಿದ್ದುಪಡಿಯೊಂದಿಗೆ ತಿಳಿದುಕೊಳ್ಳಬೇಕು ಎಂಬುದು ಅದರ ನಿರಂತರ ಪುನಃಸೃಷ್ಟಿ ಕ್ರಿಯೆಯನ್ನು ಕಾಣುತ್ತೇವೆ. *

ಡಾ.ಪ್ರಕಾಶ ಗ.ಖಾಡೆ, ,ಮನೆ ನಂ135, ಸೆಕ್ಟರ್ ನಂ63, ನವನಗರ, ಬಾಗಲಕೋಟ -587103.
  ಮೊ; 9845500890 .

ಬಾಗಲಕೋಟ ತಾಲೂಕು ಸಮಕಾಲೀನ ಕಾವ್ಯ


                      ಬಾಗಲಕೋಟೆ ತಾಲೂಕು ಸಮಕಾಲೀನ ಕಾವ್ಯ


                                                               -ಡಾ.ಪ್ರಕಾಶ ಗ.ಖಾಡೆ

    ಬಾಗಲಕೋಟೆ ತಾಲೂಕು ಕಾವ್ಯ ಪರಂಪರೆಯು ತುಂಬಾ ಮೌಲಿಕವಾಗಿ ಒಡಮೂಡಿದೆ.ಜಾನಪದ,ವಚನ,ಸೂಫಿ ಪರಂಪರೆಯಿಂದ ಆಧುನಿಕ ಕಾವ್ಯದ ಅಪರೂಪದ ಮಾದರಿಗಳನ್ನು ಕನ್ನಡಕ್ಕೆ ನೀಡಿದ ಕೊಡುಗೆ ಈ ನೆಲದ್ದು.ಘಟಪ್ರಭೆಯ ಒಳ ಸೆಳವು,ಕೃಷ್ಣೆಯ ಸೀಮಾ ಪ್ರವಹಿಸುವಿಕೆಯ ವಿಶಿಷ್ಟ ನದಿ ಸಂಸ್ಕøತಿಯ ಪ್ರತೀಕವಾಗಿ ಇಲ್ಲಿನ ಕಾವ್ಯ ಮೈದೋರಿದೆ.ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜನಪದ ಗೀತೆಗಳನ್ನು ಹಾಡಿಕೊಂಡು ಬರುವ ಜನಪದರಿದ್ದಾರೆ,ವಚನ ಪರಂಪರೆಗೆ ಸಾಕ್ಷಿಯಾಗಿ ಇಲ್ಲಿಯ ಹಲವು ನೆಲೆಗಳು ಪುನೀತವಾಗಿವೆ. ಶಿರೂರಿನ ಶಾಸನ ಕವಿ ಹಬ್ಬಣ್ಣ ನಾಯಕ ಕೀರ್ತಿವಂತ ಕವಿ.ಕನ್ನಡ ದಾಸ ಪರಂಪರೆಯ ಶ್ರೀಮಂತಿಕೆಗೆ ಪ್ರಸನ್ನ ವೆಂಕಟದಾಸರು ಬಾಗಲಕೋಟೆಯನ್ನು ತಮ್ಮ ನೆಲೆಯಾಗಿಸಿಕೊಂಡಿದ್ದರು. ಅನುಭಾವಿ ವರಕವಿ ಮಧುರಚೆನ್ನರಿಗೆ ಜ್ಞಾನ ದೀಕ್ಷೆಯನ್ನು ನೀಡಿದ್ದು ಬಾಗಲಕೋಟೆ.ಆಧ್ಯಾತ್ಮದ ಕಾವ್ಯ ಸರಳತೆಯ ಪ್ರತೀಕವಾಗಿದ್ದ ಜೀವಣ್ಣ ಮಸಳಿ,ಕನ್ನಡ ನವ್ಯ ಕಾವ್ಯದ ಅಪರೂಪದ ಕೃಷಿಗೈದ ಆನಂದ ಝುಂಜರವಾಡ,ದಲಿತ ಬಂಡಾಯದ ಘಟ್ಟಿ ಧ್ವನಿಯಾದ ಡಾ.ಸತ್ಯಾನಂದ ಪಾತ್ರೋಟ, ಆಧುನಿಕ ಕಾವ್ಯಕ್ಕೆ ದೇಸಿಯತೆ ತುಂಬಿದ ಡಾ.ಪ್ರಕಾಶ ಖಾಡೆ, ಸಹೃದಯ ಸಹಬಾಳ್ವೆಯ ಕವಿ ಡಾ.ಮೈನುದ್ದೀನ ರೇವಡಿಗಾರ,ಪ್ರೀತಿ ಬದುಕಿನ ಕಾವ್ಯ ಕಟ್ಟಿದ ಅಬ್ಬಾಸ ಮೇಲಿನಮನಿ, ಮಾನವೀಯ ಸಂಬಂಧಗಳನ್ನು ಹೆಣೆದ ಬಸವರಾಜ ಹೂಗಾರ,ತ್ರಿಪದಿಗಳ ಕಾವ್ಯ ಸೊಗಸು ಚೆಲ್ಲಿದ ಗುರುಸ್ವಾಮಿ ಗಣಾಚಾರಿ,ಚುಟುಕು ಕಾವ್ಯಕ್ಕೆ ಚುರುಕು ತಂದ ಶ್ಯಾಮ ಹುದ್ದಾರ ಮತ್ತು ಪ್ರಲ್ಹಾದ ಹುದ್ದಾರ ಬಾಗಲಕೋಟೆ ತಾಲೂಕಿಗೆ ಸೇರಿದವರೆಂಬುದು ಹೆಮ್ಮೆಯ ಸಂಗತಿ.
ಘಟ್ಟೆಯ ದಂಡೆಯ ಕಬ್ಬಿನ ರಸವು
ಬೆಲ್ಲದ ಅಚ್ಚು ಬಲು ಮೆಚ್ಚು ಮಾಲಿಂಗೇಶಗೆ
ಹಾಸಿದ ಪಟ್ಟಿ ಝಾಡಿಯಂದವ ನೋಡಿರಯ್ಯ
ಸೋನೆ ಮಳೆ ನಡುಗುವ ಚಳಿಗೆ
ಬೆಚ್ಚನ್ನ ಕುಂದರಗಿ ಕಂಬಳಿ ಹೊದಿಯಿರಯ್ಯ
ತುಳಸಿಗಿರಿಯಗ ನಮಿಸಿ ಕಲಾದಗಿ ಚಿಕ್ಕು ಸವಿಯಿರಯ್ಯ.
 ಕವಿ ಹನಮಂತ ತಾಸಗಾಂವಕರ ಅವರ ಈ ಸಾಲುಗಳು ಬಾಗಲಕೋಟ ಜಿಲ್ಲೆಯ ವೈಶಿಷ್ಟ್ಯವನ್ನು ಚಿತ್ರಿಸುತ್ತವೆ.ದಲಿತ ಬಂಡಾಯ ಮನೋಭಾವದ ಕವಿತೆಗಳಿಂದ ಕನ್ನಡ ಕಾವ್ಯಕ್ಕೆ ಪ್ರೀತಿ ಸ್ಪರ್ಷ ನೀಡಿದ ಡಾ.ಸತ್ಯಾನಂದ ಪಾತ್ರೋಟ ಅವರ ಜಾಜಿ ಮಲ್ಲಿಗೆ ಕವನ ಅತ್ಯಂತ ಜನಪ್ರಿಯವಾಗಿದೆ.


ಡಾ.ಸತ್ಯಾನಂದ ಪಾತ್ರೋಟ

ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ
ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ
ಸತ್ತ ನರಗಳ ಸುತ್ತ ಹಸಿದ ಹಾವುಗಳಿಲ್ಲ
ಟೊಂಗೆ ಟೊಂಗೆಯ ತುಂಬ ಬಿರಿವ ಮೊಗ್ಗು.
ಹೀಗೆ ಅವರ ಕಾವ್ಯ ಧ್ವನಿ ರೂಪಿತವಾಗಿದೆ.ನವ್ಯ ನವೋದಯ ಕಾವ್ಯದ ಬೆರೆಕೆಯಲ್ಲಿ ಬರೆಯುತ್ತಿರುವ ಆನಂದ ಝುಂಜರವಾಡ ಕನ್ನಡದ ಮುಖ್ಯ ಕವಿ.
ನನ್ನ ರಸಿಕನಿಗೆ ತಬ್ಬಲು ಮುಗಿಲಂಗಳಕೆ
ನಿಲುಕದ ಸೂಚೀಪರ್ಣ ತೋಳುಗಳೀರಲಿ
ತನ್ನ ಚಿತೆಯ ಕಾವಿನಲ್ಲೂ ನಲ್ಲೆಯ ಮೊಲೆಗಾವು
ಹುಡುಕುವ ನಲ್ಲನ ಉನ್ಮತ್ತ ವಾಂಛೆ ಇರಲಿ
ತನ್ನೇಲ್ಲ ಶೂನ್ಯ ಏಕಾಂತಗಳನ್ನೂ ನಡು-ಸರೋವರದಲ್ಲಿ
ಅಡಗಿ ಗೆಲ್ಲುವೆನೆಂಬ ಪ್ರಾಕೃತಿಕ ಛಲವಿರಲಿ.
 ಝುಂಜರವಾಡರ ಈ ಕವಿತೆಯ ಸಾಲುಗಳು ಅವರ ಕಾವ್ಯ ಶಕ್ತಿಯನ್ನು ಪ್ರಕಟಪಡಿಸುತ್ತವೆ.ಅವರ ‘ಕವಿತಾನ..ಮರತವ್ರಿಗೆ ಕವೀನ್ನ ಮರೀಲಿಕ್ಕೆಷ್ಟೊತ್ತು.’ಎಂಬ ಕಾವ್ಯ ಧ್ವನಿಯ ಹಿಂದಿನ ನೋವು ಸೃಜನತೆಯ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ.
 ನವೋದಯೋತ್ತರ ಕಾವ್ಯದ ಬಿರುಸಿನಲ್ಲಿ ಬರೆಯಲಾರಂಭಿಸಿದ ಡಾ.ಪ್ರಕಾಶ ಖಾಡೆ ಸಂಕೀರ್ಣ ಕಾವ್ಯದ ವಿಶಿಷ್ಟಾಭಿವ್ಯಕ್ತಿ ರಚನೆಗಳನ್ನು ನೀಡಿದ್ದಾರೆ.

ನಾವೂ ಜೋರು ಮಾಡಬಹುದು
ಸಿಕ್ಕವರ ಮೇಲೆ
ಏನು ಉಳಿಯುತ್ತದೆ ಹೇಳಿ
ಇಲ್ಲಿ ಪ್ರೀತಿ ಇರದ ಮೇಲೆ.
ಪ್ರೀತಿಯ ಅರ್ಥವನ್ನು ವಿಸ್ತರಿಸಿದ ಡಾ.ಖಾಡೆ ಅವರ ಈ ಸಾಲುಗಳು ಮಾನವೀಯತೆಯನ್ನು ಸಾರುತ್ತವೆ.ಆಧುನಿಕ ವಚನಗಳನ್ನು ರಚಿಸಿ ಹೆಸರಾದ ಗುರುಸ್ವಾಮಿ ಗಣಾಚಾರಿ ಅವರು
ಭಾವವಿಲ್ಲದ ಕಾವ್ಯ ಜೀವವಿಲ್ಲದ ದೇಹ
ಹಾವ ಭಾವರಿಯದ ನರ್ತಕಿ ನಟನೆ ಪರಿ
ಕಾವ್ಯ ರಸಹೀನ ಗುರುಲಿಂಗ.
ಎಂದು ಕಾವ್ಯ ಕುರಿತು ಹೇಳುತ್ತರೆ.ಗೇಯತೆ,ಪ್ರಾಸಬದ್ಧತೆ,ಲಾಲಿತ್ಯ,ಸುಂದರ ಪದಪುಂಜಗಳು ಇವರ ಕವಿತೆಗಳ ವಿಶೇಷ.ಕವಿ ಅಬ್ಬಾಸ ಮೇಲಿನಮನಿ ಅವರ ಕವಿತೆಗಳು ಜೀವದ್ರವ್ಯದ ಸೆಳಕುಗಳಾಗಿವೆ.
ಗಿಡದ ಟೊಂಗೆ ಟೊಂಗೆಗೂ
ಕಾಳಿಂಗ ಹರಿದಾಡುತ್ತಿದ್ದರೂ
ಹಕ್ಕಿ ಗೂಡು ಕಟ್ಟದೆ
ಬಿಡುವುದಿಲ್ಲ,ನಿಲ್ಲಿಸುವುದಿಲ್ಲ
ಜೀವದೊಲವಿನ ಹಾಡು.
ಮೂರು ಗಳಿಗೆ ಧಾವಂತದಲ್ಲಿ ಬದುಕು ರೂಪಿಸಿಕೊಳ್ಳುವ ಮನುಷ್ಯನ ತುಡಿತಕ್ಕೆ ನಿತಾಂತ ಸಂಭ್ರಮವಿದೆ.ನಾವೇ ಹುಟ್ಟುಹಾಕಿದ ಜಾತಿ,ಸ್ವಜನ ಪಕ್ಷಪಾತ,ಗುಂಪುಗಾರಿಕೆ,ಸ್ವಾರ್ಥ,ದ್ವೇಷ,ಕೌರ್ಯಗಳ ಗೆಲ್ಲಲು ಎದೆಗಾರಿಕೆಯ ವಿಶ್ವಾಸ ಬೇಕಾಗಿದೆ.ಮುಳ್ಳುಗಳ ನಡುವೆ ಅರಳಿಕೊಳ್ಳುವ ಗುಲಾಬಿಯ ಪ್ರೀತಿಯೇ ಅದಕ್ಕೆ ಸಾಕಾಗಿದೆ ಎನ್ನುತ್ತಾರೆ ಕವಿ ಅಬ್ಬಾಸ ಮೇಲಿನಮನಿ.ನವ್ಯ ಕಾವ್ಯದ ಬರವಣಿಗೆಯನ್ನು ಇಂದಿಗೂ ಉಳಿಸಿಕೊಂಡು ಬಂದ ಕವಿ ಅಂಬಾದಾಸ ವಡೆ ಕಾವ್ಯವನ್ನು ಜನಮುಖಿಯಾಗಿಸಿದ್ದಾರೆ.
ಕಾಗಿ ನಿನ್ನ ಮ್ಯಾಲ ಹಾಡ ಕಟ್ಟೊದು
ಹಾಡ ಕಟ್ಟಿ ಹಾಡೂದಂದ್ರ
ಎಂಥಾ ಹಾಸ್ಯಾಸ್ಪದ ಹೌದಲ್ಲೋ
ನಿನ್ನ ಕರೆ ಬಣ್ಣಕ್ಕ ,ಕೆಟ್ಟ ಸ್ವರಕ್ಕ,
ನಿನ್ನ ಖಾಯಂ ಕತ್ತಲಗವ್ಯಾಗಿಟ್ಟ ನನ್ನ ಹಿರ್ಯಾರು
ನಿನ್ನ ಮ್ಯಾಲಿನ ನನ್ನ ಹಾಡಕ್ಕ ಖೊಳ್ಳಂತ ನಗೋದೆನು
ಆಶ್ಚರ್ಯವಿಲ್ಲ ಬಿಡು..
    ಹೀಗೆ ವಡೆಯವರು ಕಾವ್ಯದ ವಸ್ತು ಆಯ್ಕೆಯಲ್ಲಿ ಹೊಸತನ ಹುಡುಕುತ್ತಾರೆ. ಕವಿಗಳಾದ ಡಾ.ವಿಜಯಕುಮಾರ ಕಟಗಿಹಳ್ಳಿಮಠ,ಡಾ.ಬಿ.ಕೆ.ಹಿರೇಮಠ,ಪಿ.ವೈ.ಗಿರಿಸಾಗರ,ಮಲ್ಲಿಕಾರ್ಜುನ ಯಾಳವಾರ,ಧೃವಾಚಾರ್ ಕಾಖಂಡಕಿ,ಸಂಗು ಕೋಟಿ,ಉಮೇಶ ತಿಮ್ಮಾಪುರ,ಗಂಗಾಧರಯ್ಯ ಜಾಲಿಬೆಂಚಿ,ಎಸ್.ಎಸ್.ಹಳ್ಳೂರ,ಬೀರಪ್ಪ ಹಳಮನಿ,ರಾಜು ಯಾದವ, ನಾರಾಯಣ ಯಳ್ಳಿಗುತ್ತಿ,ಮಹಾಬಳೇಶ್ವರ ಗುಡಗುಂಟಿ,ವೀರೇಶ ಖೋತ,ಎಚ್ಕೆ ಆವಟಿ, ಡಾ.ವೀರೇಶ ಬಡಿಗೇರ, ಶಂಕರ ಲಮಾಣಿ,ಶ್ರೀನಿವಾಸ ಅಧ್ಯಾಪಕ ,ದೊಡ್ಡಣ್ಣ ಗದ್ದನಕೇರಿ,ನಾಗರಾಜ ಪೂಜಾರ,ಕೃಷ್ಣ ಕೋರಾ,ಸುಭಾಸ್ಚಂದ್ರ ಜಾಧವ,ಸಿದ್ದರಾಜ ಸೊನ್ನದ, ಶಂಕರ ಹೂಗಾರ,ಮೊದಲಾದವರು ತಾಲೂಕಿನ ಜನಪ್ರಿಯ ಕವಿಗಳು,ಬಾಗಲಕೋಟ ತಾಲೂಕಿನ ಮಹಿಳಾ ಕಾವ್ಯವು ಚೆಲುವಾಗಿ ಚೆಲ್ಲುವರಿದಿದೆ.ಶಾಂತಾಬಾಯಿ ಸಾಬಾದಿ,ರೇಖಾ ಕಾಖಂಡಕಿ,ವೀಣಾ ಶಾಂತೇಶ್ವರ,ಡಾ,ಶಕುಂತಲಾ ದುರ್ಗಿ,ಡಾ.ಮಲ್ಲಿಕಾ ಘಂಟಿ,ಡಾ.ಸರೋಜಿನಿ ಪಾವಟೆ,ಡಾ.ಶಶಿಕಲಾ ಮರಿಬಾಶೆಟ್ಟಿ,ಸುಮಂಗಲಾ ಬಾದಾಮಿ,ರುದ್ರಮ್ಮ ಕೋರಿ,ಎನ್,ರಾಜೇಶ್ವರಿ,ಮಹೇಶ್ವರಿ ಕೋಟಿ,ಸುನಂದಾ ಕನಮಡಿ,ಜಾಸ್ಮೀನ್ ಕಿಲ್ಲೆದಾರ,ಜಯಶ್ರೀ ದೇಶಪಾಂಡೆ,ಸುರೇಖಾ ದತ್ತಾತ್ರೇಯ,ಹೇಮಾ ದೇಸಾಯಿ,ಮಂಜುಳಾತಾಯಿ ಅಂಗಡಿ,ರಾಜೇಶ್ವರಿ ಕಂಠಿ,ಗೌರಿ ಕಂಠಿ, ಗುರಮ್ಮ ಸಂಕೀನ,ಸಂಗೀತಾ ಸಿಕ್ಕೇರಿ,ಮೀನಾಕ್ಷಿ ಮುಂಡಗನೂರ,ವೀರಮ್ಮ ಪಾಟೀಲ,ಮಹಾದೇವಿ ಹೊಸಮನಿ ಮೊದಲಾದವರು ಕಾವ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.ಒಟ್ಟಾರೆ ಘಟಪ್ರಭೆಯ ತಟದ ಬಾಗಿಲು ಕೋಟೆಗೆ ಸಮಕಾಲೀನ ಕಾವ್ಯ ತೋರಣ ಹಚ್ಚ ಹಸುರಿನಿಂದ ಕೂಡಿದೆ. #


 
       



ಶುಕ್ರವಾರ, ಜೂನ್ 21, 2013


 ಧಾರವಾಡ ಗೆಳೆಯರ ಗುಂಪು :  ಸಾಹಿತ್ಯ ಸಮೃದ್ಧತೆಯ ಸಾಂಸ್ಕೃತಿಕ  ನೆಲೆಗಟ್ಟು


                  - ಡಾ.ಪ್ರಕಾಶ ಗ.ಖಾಡೆ

       
    ಕನ್ನಡ ಸಾಹಿತ್ಯದ ಮುಖ್ಯ ಸಾಂಸ್ಕøತಿಕ ಕೇಂದ್ರಗಳಲ್ಲಿ ಧಾರವಾಡವೂ ಒಂದು. ನವೋದಯದ ನಾಲ್ಕು ಕೇಂದ್ರಗಳಾದ ಧಾರವಾಡ,ಮೈಸೂರು,ಮಂಗಳೂರು ಮತ್ತು ಹಲಸಂಗಿ ಈ ನಾಲ್ಕು ಕೇಂದ್ರಗಳು ರೂಪಿಸಿದ ಸಾಹಿತ್ಯವು ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ ಮತ್ತು ಭೌಗೋಳಿಕ ಕಾರಣಗಳಿಂದಾಗಿ ಬೇರೆ ಬೇರೆಯಾಗಿತ್ತು. ದೇಶದ ಸ್ವಾತಂತ್ರ್ಯ ಚಳವಳಿ, ಗಾಂದಿsೀವಾದ, ಕರ್ನಾಟಕ ಏಕೀಕರಣ, ಭಾಷೆ ಸಂಸ್ಕøತಿಗಳ ಪುರುಜ್ಜೀವನ, ಸುಧಾರಣವಾದ, ಇಂಗ್ಲಿಷ್ ರೊಮ್ಯಾಂಟಿಕ ಕಾವ್ಯದ ಪ್ರಭಾವ ಇತ್ಯಾದಿಗಳು ಆ ಕಾಲದ ಸಾಹಿತ್ಯಕ್ಕೆ ಒಟ್ಟಿನಲ್ಲಿ ವಿಶಾಲವಾದ ಏಕತೆಯನ್ನು ಒದಗಿಸಿದವು. ಆದರೆ ಈ ಉದ್ದೇಶ ಪ್ರಕಟವಾದ ರೀತಿಗಳು ಮಾತ್ರ ಆಯಾ ಭಾಗಗಳಿಗೆ ವಿಶಿಷ್ಟವಾಗಿದ್ದವು. ಆಯಾ ಭಾಗಗಳು ಎದುರಿಸಿದ ಕರ್ಷಣಗಳ ತೀವ್ರತೆಯೂ ಬೇರೆಯಾಗಿತ್ತು. ಹಾಗೆಯೇ ಅಬಿsವ್ಯಕ್ತಿಯ ಪ್ರೇರಣೆಗಳೂ ಬೇರೆಯಾಗಿದ್ದವು. ಈ ಬಿsನ್ನತೆಯಿಂದಾಗಿ ಅವುಗಳ ಕಾವ್ಯಸತ್ವ ಹಾಗೂ ಒಳರಚನೆಗಳೆಲ್ಲ ಸೂಕ್ಷ್ಮವಾದ ಹಲವಾರು ವ್ಯತ್ಯಾಸಗಳು ಕಾಣಿಸಿಕೊಂಡಿವೆ. ಇಂಥ ವ್ಯತ್ಯಾಸಗಳಲ್ಲಿ ಧಾರವಾಡ ಕೇಂದ್ರಕ್ಕೆ ಇರುವ ವಿಶಿಷ್ಟತೆ ಜಾನಪದೀಯ ಹಿನ್ನೆಲೆಯ ಸತ್ವಯುತ ಕಾವ್ಯ ರಚನೆಯ ಪ್ರಧಾನ ಬಿsತ್ತಿಯಾಗಿದೆ.
 ‘ರಾಜಕೀಯವಾಗಿ ಈ ಕಾಲದಲ್ಲಿ ಈ ಭಾಗ ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಈ ಚೌಕಟ್ಟಿನೊಳಗೆ ಹಲವು ಭಾಗಗಳು ಮರಾಠರ ಸಂಸ್ಥಾನಗಳಾಗಿದ್ದವು.ಧಾರವಾಡ ಭಾಗವು  ಮುಂಬಯಿ ರಾಜ್ಯಕ್ಕೆ ಸೇರಿದ್ದರಿಂದಾಗಿ ಇಲ್ಲಿಯ ರಾಜಕೀಯ, ಶೈಕ್ಷಣಿಕ ಸಂಪರ್ಕಗಳು ಮರಾಠಿ ಸಂಸ್ಕøತಿಯ ಪ್ರಾಬಲ್ಯದಲ್ಲಿದ್ದ ಪುಣೆ ಮುಂಬಯಿಗಳಿಗೆ ನಿಕಟವಾಗಿದ್ದವು. ಹೀಗಾಗಿ ಧಾರವಾಡ ಕೇಂದ್ರವು ಬ್ರಿಟಿಷ್ ರಾಜಸತ್ತೆ ಮತ್ತು ಮರಾಠಿ ಸಾಂಸ್ಕøತಿಕ ಸತ್ತೆಗಳೆರಡರ ಜೊತೆಗೂ ಏಕಕಾಲಕ್ಕೆ ಸೆಣಸಿ ತನ್ನ ಅಸ್ತಿತ್ವ ಗುರುತಿಸಿ ಕೊಳ್ಳಬೇಕಾಯಿತು. ಒಂದೆಡೆ ಕನ್ನಡ ಕಟ್ಟುವ ಕೆಲಸ ಮತ್ತೊಂದೆಡೆ ಆ ಕಾಲಕ್ಕೆ ತೀವ್ರವಾಗಿದ್ದ ರಾಷ್ಟ್ರೀಯ ಚಳವಳಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುವ ಕಾರ್ಯ ಎರಡನ್ನೂ ಈ ಕೇಂದ್ರದ ಕವಿಗಳು ಒಟ್ಟಿಗೇ ತೋರಿದರು. ಹೀಗಾಗಿ ಬೇರೆ ಭಾಗದ ಕಾವ್ಯಗಳಿಗಿಂತ ಧಾರವಾಡ ಕೇಂದ್ರದಲ್ಲಿ ರಾಷ್ಟ್ರಪ್ರೇಮದ ಗೀತೆಗಳು, ನಾಡಗೀತೆಗಳು, ಭಾವಗೀತಗಳಾಗಿ, ಲಾವಣಿಗಳಾಗಿ ವ್ಯಾಪಕವಾಗಿ ರಚಿತವಾದವು ಮತ್ತು ಅವುಗಳನ್ನು ಹಾಡಿಕೊಂಡು ಬರಲಾಯಿತು.
    ಅಖಂಡ ಕರ್ನಾಟಕದ ಪರಿಕಲ್ಪನೆಯನ್ನಿಟ್ಟುಕೊಂಡು ಕನ್ನಡಿಗರೆಲ್ಲರೂ ಕೊಡವರು, ತುಳುವರು, ಬಡಗರು, ಸಾರಸ್ವತರು, ಮೈಸೂರವರು, ಉತ್ತರದವರು ಹಾಡಬೇಕಾದ ‘ನನ್ನದು ಈ ಕನ್ನಡ ನಾಡು’ ಸಂಪಾದಿತ ಕವನ ಸಂಕಲನವನ್ನು ಧಾರವಾಡದ ಗೆಳೆಯರ ಗುಂಪಿನ ಕವಿಗಳು 1928ರಲ್ಲಿ ತಂದರು. ಇದು ಶ್ರೀ ಅವರು ಮೈಸೂರು ಭಾಗದಲ್ಲಿ ಸಂಪಾದಿಸಿದ ‘ಕನ್ನಡ ಬಾವುಟ’ (1938) ಬರುವುದಕ್ಕೆ ಹತ್ತು ವರ್ಷ ಮೊದಲೇ ಬಂದಿತ್ತು. ಕರ್ನಾಟಕ ಏಕೀಕರಣಕ್ಕೆ ಮುನ್ನುಡಿಯಾಗಿ ಬಂದ ‘ನನ್ನದು ಈ ಕನ್ನಡ ನಾಡು’ ಸಂಕಲನದಲ್ಲಿ ಚಿಕುಪಾಧ್ಯಾಯ, ನೃಪತುಂಗ, ಬಿ.ಎಂ.ಶ್ರೀ, ಕವಿಶಿಷ್ಯ, ಮಂ. ಕಾಮತ, ಆದಿಪಂಪ, ಸರ್ವಜ್ಞ, ಆಂಡಯ್ಯ ಇವರೊಂದಿಗೆ ಅಂಬಿಕಾತನಯದತ್ತ, ಆನಂದ ಕಂದ, ರಸಿಕ ರಂಗ (ರಂ.ಶ್ರೀ.ಮುಗಳಿ) ಹಾಗೂ ವಿನಾಯಕ ಅವರ ಕವಿತೆಗಳು ಭಾಷಾ ಪ್ರೀತಿಯೊಡನೆ, ಕಾವ್ಯ ಪ್ರೀತಿಯನ್ನು ಹುಟ್ಟು ಹಾಕಿದವು. ಗೆಳೆಯರ ಗುಂಪಿನ ಈ ಸಾಂಘಿಕ ಸಾಹಿತ್ಯಕ ಕಾರ್ಯ ಆ ಕಾಲಕ್ಕೆ ಒಟ್ಟಿಗೆ ಅನೇಕ ಕವಿಗಳನ್ನು ರೂಪಿಸಿತು. 1929ರಲ್ಲಿ ಆಲೂರು ವೆಂಕಟರಾಯರು ‘ಜಯಕರ್ನಾಟಕ’ ಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಗೆಳೆಯರ ಗುಂಪಿಗೆ ವಹಿಸಿದರು. 1930 ರಲ್ಲಿ ‘ಹಕ್ಕಿ ಹಾರುತಿದೆ’ ಎಂಬ ಕವನ ಸಂಕಲನವನ್ನು ಗುಂಪಿನ ಗೆಳೆಯರು ಪ್ರಕಟಿಸಿದರು. ‘ಕನ್ನಡ ನವೋದಯ ಕಾಲದಲ್ಲಿ ಹೊಸ ಕಾವ್ಯದ ಹೊಸ ಸಾಹಿತ್ಯದ ಪ್ರಾರಂಭ ಮಾಡಿದ ಗೆಳೆಯರ ಗುಂಪು ಬೇಂದ್ರೆಯವರ ನೇತೃತ್ವದಲ್ಲಿ ಹಿರಿದಾದ ಕಾರ್ಯ ಮಾಡಿತು. ಈ ಗುಂಪಿನ ಪ್ರೇರಣೆ, ಪ್ರಭಾವ ಸಮಗ್ರ ಕನ್ನಡ ಸಾಹಿತ್ಯ ಪಡೆದದ್ದನ್ನು ಅಲ್ಲಗಳೆಯಲಾಗದು. ಸಾಹಿತ್ಯಿಕವಾಗಿ ಈ ಭಾಗದ ಕಾವ್ಯ ಪಡೆದುಕೊಂಡ ಪ್ರೇರಣೆಗಳು ಮತ್ತು ತಾಳಿದ ರೂಪಗಳು ಕೂಡ ಬಿsನ್ನವಾಗಿವೆ. ಇಂಗ್ಲಿಷ್ ಕಾವ್ಯದ ಪ್ರಭಾವ ಇಲ್ಲಿ ಅಷ್ಟಾಗಿ ಹೇಳಿಕೊಳ್ಳುವಷ್ಟಿರಲಿಲ್ಲ, ಇಲ್ಲಿಯ ಕಾವ್ಯ ಜಾನಪದ ಮೂಲವನ್ನೇ ಅವಲಂಬಿಸಿತು.
                                                                    ದ.ರಾ.ಬೇಂದ್ರೆ
     ‘ಗೆಳೆಯರ ಗುಂಪಿ’ನವರ ಕನ್ನಡ ಕಾಯಕಕ್ಕೆ ಇಲ್ಲಿ ಶಾಂತ ಕವಿಗಳು, ಕಾವ್ಯಾನಂದ ಪುಣೇಕರ, ಶ್ರೀಧರ ಖಾನೋಳಕರ ಮುಂತಾದವರು ಮುಂಬೆಳಗಿನ ಕಾಲದಲ್ಲಿ ಹಳೆಯ ರೀತಿಯಲ್ಲಿಯೇ ಹೊಸತವನ್ನು ತರಲು ಪ್ರಯತ್ನಿಸಿ ಕನ್ನಡ ಮತ್ತು ದೇಸೀ ಮೂಲ ವಾತಾವರಣವನ್ನು ನಿರ್ಮಾಣ ಮಾಡಿದ್ದರು. ಕಾವ್ಯ ಹೊಸತನದ ಕಡೆಗೆ ಮುಖ ಮಾಡಿತು. ಪದ್ಯಗಳಿಗಾಗಿಯೇ ‘ಪ್ರಭಾತ’ ಎಂಬ ಪತ್ರಿಕೆ ಆರಂಭವಾಯಿತು. ಇದು ಎರಡು ವರ್ಷ ನಡೆದು 1920ರಲ್ಲಿ ನಿಂತು ಹೋಯಿತು. ಇದೇ ಕಾಲಕ್ಕೆ “ಮರಾಠಿ, ಹಿಂದೂಸ್ಥಾನಿ ಮುಂತಾದ ಅನ್ಯ ಭಾಷೆಗಳೊಳಗಿನ ಕವಿತೆಗಳನ್ನು ಕನ್ನಡ ಕವಿತೆಗಳನ್ನೂ ಬೆರೆಸಿಕೊಂಡು ಭತ್ತ ಮೊಸರು ಕೂಡಿಸಿ ಕಲಸಿದಂತೆ” ಕೀರ್ತನಗಳನ್ನು ನಡೆಸುವುದನ್ನು ಖಂಡಿಸಲು ಶಾಂತ ಕವಿಗಳು ಅಚ್ಚಗನ್ನಡದಲ್ಲಿ ಬರೆದ ಕೀರ್ತನಗಳು ಜನರ ಮಾತಿನ ಹತ್ತಿರ ಭಾಷೆಯಲ್ಲಿದ್ದು ಜನಪ್ರಿಯವಾದವು. ಒಂದು ರೀತಿಯಲ್ಲಿ ಈ ಭಾಗದಲ್ಲಿ ಜನಪದ ಗೀತೆಗಳಲ್ಲಿ ಆಸಕ್ತಿ ಹೆಚ್ಚಲು ಈ ಕೀರ್ತನೆಗಳ ಪ್ರಕಟಣೆಯೂ ಕಾರಣವಾಯಿತು. ಇಲ್ಲಿ ಮುಖ್ಯವಾಗಿ ಹಲವಾರು ಅನುಭಾವಿಗಳು ಹುಟ್ಟು ಹಾಕಿದ್ದ ಅನುಭಾವ ಕಾವ್ಯ ಪರಂಪರೆ ಇಲ್ಲಿನ ಕವಿಗಳಿಗೆ ದೇಸೀಯತೆಯ ಸಂದರ್ಭವನ್ನು ಕಟ್ಟಿಕೊಟ್ಟಿತ್ತು.
 ಜಾನಪದದ ಸೆಳೆತ  :
    ಗೆಳೆಯರ ಗುಂಪಿನ ಆಶಯಗಳು ಆರಂಭಕ್ಕೆ ಹೊಸ ಕಾವ್ಯ ಕಟ್ಟುವ ಪರಿದಿsಯಲ್ಲಿ ಹಲವಾರು ವಿಷಯಗಳು ಸೇರಿಕೊಂಡಿದ್ದವು. ಪ್ರತಿಯೊಬ್ಬರೂ ಕವನ ರಚನೆಯ ಸಾಧನೆಯನ್ನು ಮಾಡಬೇಕು, ಕವಿತ್ವ ಎಂಬುದು ಕೇವಲ ಮಾನವ ಸೃಷ್ಟಿಯಲ್ಲ. ಅದು ಪರಮಾತ್ಮನ ಅನುಗ್ರಹದ ಅನುಭಾವ ಮಾರ್ಗ ಎಂದು ಒಂದು ಚೌಕಟ್ಟು ಹಾಕಿಕೊಂಡು ಕಾವ್ಯ ಕೃಷಿಗೆ ಇಳಿದಿದ್ದ ಕವಿಗಳ ಗುಂಪಿನಲ್ಲಿ ಹಲಸಂಗಿ ಗೆಳೆಯರ ಗುಂಪಿನ ಮಧುರಚೆನ್ನರು ಮತ್ತು ಅವರ ಗೆಳೆಯರು ಸೇರಿಕೊಳ್ಳುವ ಮೂಲಕ ‘ಜಾನಪದ ಚಿಂತನೆ’ ಆರಂಭವಾಯಿತು. ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಆ ಜಾನಪದ ಮಟ್ಟುಗಳನ್ನು ಸಾಹಿತ್ಯಕ್ಕೆ ಉಪಯೋಗಿಸುವ ಕಾರ್ಯವನ್ನು ಆರಂಬಿsಸಿದರು. ಇದಕ್ಕೆ ಹಿನ್ನೆಲೆಯಾಗಿ ‘ಹಲಸಂಗಿ ಗೆಳೆಯರ’ ಗುಂಪು ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ಬೇರೆ ಬೇರೆ ಭಾಗಗಳಲ್ಲಿ ಸಂಗ್ರಹಿಸಿದ ಜನಪದ ಹಾಡು, ತ್ರಿಪದಿ, ಕಥನ ಕವನ, ಲಾವಣಿಗಳನ್ನು ಪ್ರಕಟಿಸಿದರು. ಮುಂದೆ ಕಾವ್ಯಗುಣದ ದೃಷ್ಟಿಯಿಂದ ಅದ್ವಿತೀಯವೆನಿಸಿದ ‘ಗರತಿಯ ಹಾಡು’, ‘ಜೀವನ ಸಂಗೀತ’, ‘ಮಲ್ಲಿಗೆ ದಂಡೆ’ ಜನಪದ ಗೀತ ಸಂಕಲನಗಳು ಪ್ರಕಟವಾದವು. ಈ ಜನಪದ ಕಾಯಕದ ಪ್ರಭಾವದಿಂದ ಉತ್ತರ ಕರ್ನಾಟಕದ ಯಾವ ಕವಿಯೂ ಜಾನಪದ ಸೆಳೆತದಿಂದ ಪಾರಾಗಲಿಲ್ಲವೆನ್ನುವುದು ಮಹತ್ವದ ಸಂಗತಿಯಾಗಿದೆ.

ಬೇಂದ್ರೆ, ಮಧುರಚೆನ್ನ, ಆನಂದ ಕಂದ, ಶ್ರೀಧರ ಖಾನೋಳ್ಕರ, ವಿನಾಯಕ, ರಂ.ಶ್ರೀ.ಮುಗಳಿ, ಡಿ.ಎಸ್.ಕರ್ಕಿ, ಎಸ್.ಡಿ.ಇಂಚಲ, ಚೆನ್ನವೀರ ಕಣವಿ, ಚಂದ್ರಶೇಖರ ಕಂಬಾರ ಮೊದಲಾದ ಅನೇಕರು ಈ ಜಾನಪದವನ್ನು ತಮ್ಮದೇ ರೀತಿಯಲ್ಲಿ ಬಳಸಿಕೊಂಡರು. “ಬೇಂದ್ರೆ, ಖಾನೋಳ್ಕರ, ಆನಂದ ಕಂದ, ಕಂಬಾರರಂತೂ ಜನಪದ ಕಾವ್ಯ ಛಂದಸ್ಸಿನ ಮೂಲಾಂಶವಾದ ಅಂಶಗಣವನ್ನು ವ್ಯಾಪಕವಾಗಿ, ವೈವಿಧ್ಯಪೂರ್ಣವಾಗಿ ಬಳಸಿಕೊಂಡು ಆಧುನಿಕ ಕಾವ್ಯದ ಲಯಕ್ಕೆ ಹೊಸದೊಂದು ಬೀಸನ್ನು, ಚೆಲುವನ್ನು ತಂದರು. ಆಡುಮಾತಿನ ಬಳಕೆ ಈ ಭಾಗದ ಅನೇಕ ಕವಿಗಳ ಅಂಕಿತವಾಯಿತು. ಉಳಿದ ಭಾಗಗಳ ಕನ್ನಡ ಕವಿಗಳ ಮೇಲೆ ಜನಪದ ಕಾವ್ಯ ಇಂಥ ಪ್ರತ್ಯಕ್ಷ ಮತ್ತು ದಟ್ಟ ಪ್ರಭಾವವನ್ನು ಬೀರಲಿಲ್ಲ” ಎಂಬ ಗಿರಡ್ಡಿ ಗೋವಿಂದರಾಜ ಅವರ ಮಾತು ನಿಚ್ಚಳವಾಗಿದೆ.
                                                                  ಆನಂದ ಕಂದ
     ಧಾರವಾಡ ಕೇಂದ್ರದ ‘ಗೆಳೆಯರ ಗುಂಪು’ ಕಾವ್ಯಕ್ಷೇತ್ರದಲ್ಲಿ ಉಂಟು ಮಾಡಿದ ಶ್ರದ್ಧಾಪೂರ್ಣ ಕಾಯಕ ಕನ್ನಡಕ್ಕೇ ಹೊಸತಾದುದು. 1921-1933ರ ಹನ್ನೆರಡು ವರ್ಷಗಳು ‘ಗೆಳೆಯರ ಗುಂಪಿನ’ ಮಹತ್ವದ ವರ್ಷಗಳು.
ಗೆಳೆತನದ ಹೊಸ ಹೊಳವು, ನನ್ನ ಕನ್ನಡ ಕುಲದ
ಕನಸೊಂದು ಹೊಳೆದಾಡಿ ಸೆಳೆದಾಡಿತು
ಹೊಸ ಗೆಳೆಯನೊಬ್ಬನ ಎಡೆಬಿಡದ ಸಹವಾಸ
ಆ ಕಣಸ ಕನ್ನಡಿ ತೊಳೆದಾಡಿತು
ಎಂದು ಹಾಡಿದ ಬೇಂದ್ರೆ ಅವರು ಸಾಹಿತ್ಯದ ಗುಂಪು ಕಟ್ಟಿ ತಮ್ಮ ಅಯಸ್ಕಾಂತದ ವ್ಯಕ್ತಿತ್ವದಿಂದ ಎಲ್ಲರನ್ನೂ ಸೆಳೆದುಕೊಂಡರು. ಹೊಸ ಸಾಹಿತ್ಯದ ಅರಿವು ಅಗತ್ಯ ಇವುಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಗೆಳೆಯರ ಗುಂಪಿನ ಕವಿಗಳು ಅರಿತುಕೊಂಡರು. “ತಮಗೆ ವ್ಯವಸ್ಥಿತವಾದ ಕನ್ನಡ ಅಭ್ಯಾಸ ನಡೆದುದು ಗುಂಪಿನ ನಡುವೆ” ಎಂದು ಬೆಟಗೇರಿ ಕೃಷ್ಣಶರ್ಮರು ಹೇಳಿದ್ದಾರೆ. “ಗುಂಪಿನ ಮೂಲಕ ಇಂದಿನ ಕನ್ನಡ ಸಾಹಿತ್ಯದ, ಕರ್ನಾಟಕದ ಪರಿಚಯ ನನಗಾಯಿತು” ಎಂದರು ಗೋಕಾಕರು, “ಸ್ಫೂರ್ತಿ ಉತ್ಸಾಹಗಳನ್ನು ತುಂಬಿ ಹೊಸ ದರ್ಶನವನ್ನು ಇನ್ನೊಬ್ಬರಲ್ಲಿ ಸಂಚಾರಗೊಳಿಸುವುದಲ್ಲದೆ ಅದರ ದೌರ್ಬಲ್ಯವನ್ನರಿತು ಯೋಗ್ಯ ವಿಮರ್ಶೆಯಿಂದ ಅದನ್ನು ಕಳೆಯುವ ಅದ್ಭುತ ಶಕ್ತಿ ಬೇಂದ್ರೆಯವರಲ್ಲಿದೆ” ಎಂದು ಮುಗಳಿಯವರು ಹೇಳಿದ್ದಾರೆ. ಗೆಳೆಯರ ಗುಂಪಿನ ಒಡನಾಡಿಯಾಗಿದ್ದ ಸಿಂಪಿ ಲಿಂಗಣ್ಣನವರು “ಕವಿತಾ ವಾಚನದಲ್ಲಿ ಒಂದೇ ಧಾಟಿ, ಬರಹಗಳಲ್ಲಿ ಒಂದೇ ಶೈಲಿ” ಎಂದು ಬಣ್ಣಿಸಿದ್ದಾರೆ. ಈ ಗೆಳೆಯರ ಸವಿ ಅನುಭವಿಸಿದ ಬೇಂದ್ರೆಯವರು “ನಾಡಿನ ಜೀವನವನ್ನು ಹಬ್ಬವನ್ನಾಗಿ ಮಾರ್ಪಡಿಸಿಕೊಳ್ಳುವ ಯೋಗದಲ್ಲಿ ಮೆಟ್ಟುಗಳಾದವು. ಅನೇಕ ಹಿರಿಕಿರಿಯರೊಡನೆ ನನ್ನ ಜೀವ ಸೇರಿಕೊಂಡಿತು. ಗೆಳೆಯರ ಗುಂಪು ಒಂದು ಸ್ವಾಭಾವಿಕ ಬೆಳವಣಿಗೆಯಲ್ಲಿತ್ತು. ಅದು ಹೊರಗಣ್ಣಿಗೆ ಗುಂಪಾಗಿಯೂ ಒಳಗಣ್ಣಿಗೆ ಮೂರ್ತಿಶಿಲ್ಪ ಶಾಲೆಯಾಗಿಯೂ ರೂಪುಗೊಳ್ಳುತ್ತಿತ್ತು” ಎನ್ನುವಲ್ಲಿ ಗೆಳೆಯರ ಗುಂಪಿನ ಸಾರ್ಥಕತೆ ಅರಿವಾಗುತ್ತದೆ.
      ಇದೇ ವೇಳೆಯಲ್ಲಿ 1918-19ರ ಹೊತ್ತಿನಲ್ಲಿ ಮಧುರಚೆನ್ನರು ಹಲಸಂಗಿಯಲ್ಲಿ ಸಾಹಿತ್ಯ ಮಂಡಲ ಸ್ಥಾಪಿಸಿ, ಅದಕ್ಕೆ ‘ಶಾರದಾ ಮಂಡಲ’ ಎಂದು ಹೆಸರಿಟ್ಟಿದ್ದರು. ಆಗ ಬೇಂದ್ರೆ ಮತ್ತು ಮಧುರಚೆನ್ನರ ಪರಿಚಯವಿರಲಿಲ್ಲ. ಇಬ್ಬರೂ ಸ್ಥಾಪಿಸಿದ ಸಾಹಿತ್ಯ ಮಂಡಲಕ್ಕೆ ‘ಶಾರದಾ ಮಂಡಲ’ ಎಂಬ ಒಂದೇ ಹೆಸರು ಇದ್ದದ್ದು ಅಪೂರ್ವಯೋಗಾಯೋಗ. ಇಬ್ಬರಿಗೂ ಭೇಟಿಯಾದದ್ದು 1923ರಲ್ಲಿ. ಇಬ್ಬರ ತಾಯಿಯ ಹೆಸರು ಅಂಬವ್ವ. ಇವರಿರ್ವರು ಗೆಳೆಯರು ‘ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ’ ಎಂಬಂತೆ ಕೊನೆಯವರೆಗೂ ಗೆಳೆಯರಾಗಿದ್ದರು. ಹಲಸಂಗಿ ಗೆಳೆಯರ ಗುಂಪು ಮತ್ತು ಧಾರವಾಡ ಗೆಳೆಯರ ಗುಂಪು ಒಂದೇ ರೀತಿಯಲ್ಲಿ ಒಂದೇ ಕಾಲಕ್ಕೆ ಉದಯವಾಗುವುದರೊಂದಿಗೆ ಗುಂಪಿನ ನಾಯಕರಾದ ಬೇಂದ್ರೆ, ಮಧುರಚೆನ್ನರಲ್ಲಿ ಕಾವ್ಯ, ಅನುಭಾವ ಮತ್ತು ಜಾನಪದದ ಬೆಸುಗೆ ಬಿಡಿಸಲಾರದಷ್ಟು ಗಟ್ಟಿಯಾಗಿತ್ತು.
‘ಮಧುರ ಗೀತ’ವ ಹಾಡಿ, ‘ನನ್ನ ನಲ್ಲ’ನ ಒಲಿಸಿ
ಹಲಸಂಗಿ ನಾಡಿನಲಿ ನೆಲಿಸಿ ನಿಂತ,
ನನ್ನ ‘ಚೆನ್ನ’ನಿಗೆಣೆಯ ಗೆಣೆಯರಾರಾರಿಹರು
ಅವನೆ ಅವನಿಗು ಹೆಚ್ಚು ಅವನಿಗಿಂತ
ಉತ್ತು ನೆಲಹೊಲಗಳನು ಬಿತ್ತಿದನು ಬೀಜಗಳ
ಉತ್ತಮಿಕೆ ಬೆಳೆ ಬರಲಿ ಎಂದು ಬಯಸಿ,
ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು
ಎಡತಾಕಿ ಬೆವರಿಟ್ಟು ಬಯಲ ತೋಯಿಸಿ
ಮಧುರಚೆನ್ನರಗಿಂತ ಮಿಗಿಲಾದ ಗೆಳೆಯರಿಲ್ಲ ಎಂದು ಹೇಳಿದ ಬೇಂದ್ರೆಯವರು “ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು” ಎಂಬಲ್ಲಿ ನಗರ-ಗ್ರಾಮೀಣ, ಶಿಷ್ಟ-ಜಾನಪದವನ್ನು ಬೆಸೆದ ರೂಪ ಸಾದೃಶ್ಯವಿದೆ. ಈ ಕಾರ್ಯದಲ್ಲಿ ಎಡತಾಕಿ ಬೆವರಿಟ್ಟು ಬಯಲ ಬೆಳವಲನಾಡ ತೋಯಿಸಿ ಸಾಧನೆ ಮೆರೆದ ಮಧುರಚೆನ್ನರ ಸಿದ್ಧಿಯನ್ನು ಪ್ರಕಟಪಡಿಸಿದೆ.
        ಧಾರವಾಡದ ‘ಗೆಳೆಯರ ಗುಂಪಿ’ನಲ್ಲಿ ಆರಂಭದಲ್ಲಿ ಬೇಂದ್ರೆಯವರ ವಿದ್ಯಾರ್ಥಿಗಳು, ಸಹಪಾಠಿಗಳು ಇದ್ದರು. ಶ್ರೀಧರ ಖಾನೋಳಕರ, ಚಿದಂಬರ ನಗರ, ಬ್ಯಾಳಿ, ಶಾಂತಗಿರಿ, ಬಾಗಲವಾಡಿ, ತಿವಾರಿ, ರಾಮು ಅಭ್ಯಂಕರ, ಪ್ರಲ್ಹಾದ ನರೇಗಲ್, ಗೋವಿಂದ ಚುಳಕಿ, ವಸಂತರಾವ್ ಹುರಳೀಕೊಪ್ಪಿ, ರಾಯದುರ್ಗ, ಶ್ರೀಮತಿ ರೇವಡಿ ನಾಡಗೌಡ, ಶ್ರೀಮತಿ ಲೀಲಾವತಿ ಮಾಗಡಿ, ಕೃಷ್ಣಕುಮಾರ ಕಲ್ಲೂರ, ನಾರಾಯಣ ಸಂಗಮ, ಶೇ.ಗೋ. ಕುಲಕರ್ಣಿ. ನಂತರ ಈ ಗುಂಪಿಗೆ ವಿನೀತ ರಾಮಚಂದ್ರರಾವ್, ಬೆಟಗೇರಿ ಕೃಷ್ಣಶರ್ಮ, ಶಂ.ಬಾ.ಜೋಶಿ, ಸಾಲಿ ರಾಮಚಂದ್ರರಾಯರು, ಬೇಂದ್ರೆ ಲಕ್ಷ್ಮಣರಾವ್, ಬುರ್ಲಿ ಬಿಂದುಮಾಧವ ಮೊದಲಾದವರ ಸೇರ್ಪಡೆಯಾಯಿತು. ನಂತರ ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಜಿ.ಬಿ. ಜೋಶಿ, ಮಕ್ತಾಲಿ, ಮಳೆಯೆ ಗೋವರ್ಧರಾಯರು, ಎನ್.ಕೆ.ಕುಲಕರ್ಣಿ, ಎಸ್.ಆರ್.ಮಳಗಿ, ಶ್ರೀನಿವಾಸ ಕುಲಕರ್ಣಿ, ಟಿ.ರುಬೆನ್, ಸಿದ್ಧವನಹಳ್ಳಿ ಕೃಷ್ಣಶರ್ಮ ಹಲಸಂಗಿ, ವಿಜಾಪುರ, ಹೈದರಾಬಾದ್,  ಸಂಡೂರು, ಕೊಪ್ಪಳ, ಅಥಣಿ, ಮೈಸೂರು, ಬೆಂಗಳೂರು ಮೊದಲಾದ ಊರುಗಳಿಗೆ ಗೆಳೆಯರ ಗುಂಪಿನವರು ಮಾಡಿದ ಉಪನ್ಯಾಸ, ಕವಿತಾ ವಾಚನ, ಸಾಹಿತ್ಯಿಕ ಚರ್ಚೆಗಳ ಮೂಲಕ ಗೆಳೆಯರ ಗೆಳೆಯರು ಸೇರುತ್ತಾ ಹೋಗಿ ಗುಂಪು ವಿಶಾಲವಾಯಿತು.
      ಹೀಗೆ ಒಂದು ಧ್ಯೇಯವನ್ನಿಟ್ಟುಕೊಂಡು ಹುಟ್ಟಿಕೊಂಡು ಬಂದ ಗೆಳೆಯರ ಗುಂಪು ಧಾರವಾಡ ಕೇಂದ್ರದ ಸಾಂಸ್ಕøತಿಕ ವ್ಯಾಪ್ತಿಯನ್ನು ಭೌಗೋಲಿಕವಾಗಿಯೂ, ಸಾಹಿತ್ಯಿಕವಾಗಿಯೂ ವಿಸ್ತರಿಸಿತು. ಈ ವಿಸ್ತರಣೆಯಲ್ಲಿ ಹೊಸ ಕಾವ್ಯವನ್ನು ಜನಪ್ರಿಯಗೊಳಿಸುವುದರೊಂದಿಗೆ, ಜನಪದ ಸತ್ವದ ಪುನರುಜ್ಜೀವನಕ್ಕೆ ಗೆಳೆಯರ ಗುಂಪು ಕನ್ನಡ ನವೋದಯದ ಸಂದರ್ಭದಲ್ಲಿ ಪ್ರಧಾನವಾದ ಕೆಲಸ ಮಾಡಿತು. ಕಾವ್ಯದಲ್ಲಿ ಆ ಕಾಲಕ್ಕೆ ಕಾಣಿಸಿಕೊಂಡ ಲಾವಣಿ ಮಟ್ಟುಗಳನ್ನು, ತಮ್ಮ ಕವಿತೆಗಳಲ್ಲಿ ಬಳಸಿಕೊಂಡರು.ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಪ್ರಕಟಿಸಲು ಉತ್ತೇಜನ ನೀಡುವ ಮೂಲಕ, ಜನಪದ ಗೀತೆಗಳಲ್ಲಿನ ಲಯ, ಭಾಷೆ, ನುಡಿಗಟ್ಟು ಸಮೃದ್ಧವಾಗಿ ತಮ್ಮ ಕಾವ್ಯಕ್ಕೆ ತಂದರು. ಹೊಸ ಕವಿತೆಗೆ ಬೇಕಾದ ಹೊಸ bsÀಂದೋರೂಪಗಳ ಸಲುವಾಗಿ ಜಾನಪದ ಧಾಟಿಗಳನ್ನು ಅಳವಡಿಸಿಕೊಂಡರು.ಶಂಬಾ ಜೋಶಿ, ರಂ.ಶ್ರೀ. ಮುಗಳಿ ಮೊದಲಾದವರು ಸಂಶೋಧನೆ ಕಡೆಗೆ ದೃಷ್ಟಿಕೊಟ್ಟರೆ, ವಿ.ಕೃ.ಗೋಕಾಕ, ಶ್ರೀಧರ ಖಾನೋಳಕರ ಕಾವ್ಯರಚನೆಗೆ ದೃಷ್ಟಿಕೊಟ್ಟು ಅಭ್ಯಾಸ ನಡೆಸಿದರು.ಬೆಟಗೇರಿ ಕೃಷ್ಣಶರ್ಮ, ಬೇಂದ್ರೆ, ಮಧುರಚೆನ್ನ ಜಾನಪದ ರೀತಿಗಳನ್ನು ಕಲೆಹಾಕಿ ಅವುಗಳ ಸತ್ವವನ್ನು ಅರಿತು ಅವುಗಳನ್ನು ಸಾಹಿತ್ಯ ರೀತಿಯೆಂದು ಗುರುತಿಸಿ ಬಳಸಿದರು.‘ಜಯ ಕರ್ನಾಟಕ’ ಮೂಲಕ ಕನ್ನಡ ಭಾಷೆಗೆ ಸಾಹಿತ್ಯ ಸಂಸ್ಕಾರ ತಂದು ಕೊಡುವುದರ ಜೊತೆಗೆ ಹೊಸ ರೀತಿಯ ಬರವಣಿಗೆ ಈ ಗುಂಪು ಪ್ರಾರಂಬಿsಸಿತು. ಒಟ್ಟಾರೆ ಧಾರವಾಡ ಕೇಂದ್ರವು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಂದು ಬಹು ಮುಖ್ಯವಾದ ಸಾಂಸ್ಕøತಿಕ ಕೇಂದ್ರವಾಗಿ ಗುರುತಿಸಿಕೊಂಡಿತು.
                                                        -ಡಾ.ಪ್ರಕಾಶ ಗ.ಖಾಡೆ

ವಿಳಾಸ : ಡಾ.ಪ್ರಕಾಶ ಗ.ಖಾಡೆ, ‘ಶ್ರೀ ಗುರು’, ಸರಸ್ವತಿ ಬಡಾವಣೆ,ಸಂಖ್ಯೆ 63,ನವನಗರ,ಬಾಗಲಕೋಟ
        ಮೊ. 9845500890

ಭಾನುವಾರ, ಜೂನ್ 2, 2013

ಕನ್ನಡ ಪರಿಸರ ಕಾವ್ಯ -ಡಾ.ಪ್ರಕಾಶ ಗ.ಖಾಡೆ



                                                 ಕನ್ನಡ ಪರಿಸರ ಕಾವ್ಯ

                                          - ಡಾ. ಪ್ರಕಾಶ ಗ. ಖಾಡೆ
         ನಾವು ಆಧುನಿಕ ಯಂತ್ರ ನಾಗರಿಕತೆಯ ಈ ಕಾಲದಲ್ಲಿ ನಾವು ಅಪಾಯಗಳನ್ನು ಆಹ್ವಾನಿಸಿಕೊಂಡು ಬದುಕುತ್ತಿದ್ದೇವೆ.ನಾಳಿಗಾಗಿ ಒಂದು ಸುಂದರ ಪರಿಸರ ಉಳಿಸುವ ನಮ್ಮ ಕನಸುಗಳಗೆ ಕಪ್ಪು ಮೆತ್ತಿಕೊಳ್ಳುತ್ತಿದೆ.ಇಂಥ ಅಪಾಯದ ಹೊತ್ತಿನಲ್ಲಿ ನಮ್ಮ ಕಾಲದ ಯುವ ಕವಿಗಳು ತಮ್ಮ ಕವಿತೆಗಳ ಮೂಲಕ ಗೆಳೆಯ ಪರಿಸರ ಪ್ರೇಮಿ ಪಿ.ಡಿ.ವಾಲೀಕಾರ ಅವರ ಸಂಪಾದನೆಯ ‘ಪರಿಸರ ಕಾವ್ಯ’ ಸಂಕಲನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಾಡಿನ ಹಿರಿಯ ಮತ್ತು ಉದಯೋನ್ಮುಖ ಕವಿಗಳು ರಚಿಸಿಕೊಟ್ಟ ಪರಿಸರ ಪರಿಸರ ಮಾಲಿನ್ಯ ಮತ್ತು ಜಲಸಂಬಂಧಿಯ ಕವಿತೆಗಳಿವೆ. ಪರಿಸರವನ್ನು ವ್ಯಾಪಕವಾಗಿ ಮಲೀನಗೊಳಿಸಿ ಅನಾರೋಗ್ಯಕ್ಕೆ ಪ್ರಾಣಿ,ಪಕ್ಷಿ, ಕೀಟಗಳನ್ನು ದೂಡಿ ಜಾಗತೀಕರಣದ ಆಧ್ವಾನಗಳು ರಾಕ್ಷಸರೂಪ ತಾಳಿ ಮಾನವನ ಆಮೂಲಕ ಭಾರತೀಯ ಪಾರಂಪರಿಕ ಮನಸ್ಸುಗಳನ್ನು ಘಾಸಿಗೊಳಿಸಿವೆ. ಪರಿಸರವಿಲ್ಲದೆ ಬದುಕಿಲ್ಲ. ಹಸಿರುವನ, ಪಕ್ಷಿ, ಪ್ರಾಣಿಗಳ ಒಡನಾಟ ಅದೊಂದು ನೆಮ್ಮದಿಯ ಸಂಕೇತ. ಅದೆಲ್ಲಾ ಇಂದು ಕಾಣದಾಗಿ ಅನೇಕ ಅಮೂಲ್ಯ ಸಸ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಪತ್ತು ಅಳಿದು ಹೋಗಿವೆ,  ಮತ್ತು ಅಳಿಗಾಲದ ಅಂಚಿನಲ್ಲಿವೆ.
ತೀರಾ ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳ ಕೊಳ್ಳ, ಕೆರೆ, ಬಾವಿಗಳು ಮಳೆಗಾಲದಲ್ಲಿ ಮಾತ್ರ ಅಲ್ಲ ಬೇಸಿಗೆಯಲ್ಲೂ ಸದಾ ತುಂಬಿರುತ್ತಿದ್ದ ಸಂದರ್ಭಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಮ್ಮ ನೀರು ಯಾರೊಬ್ಬರ ಆಸ್ತಿಯಾಗಿರಲಿಲ್ಲ. ಆದರಿಂದು ಆಧುನಿಕತೆಯ ಯಂತ್ರ ನಾಗರಿಕತೆ ಪ್ರಾಕೃತಿಕ ಸಂಪತ್ತನ್ನೂ ಕೇಂದ್ರೀಕರಿಸಿಕೊಂಡು ಸಾರ್ವತ್ರಿಕತೆಯ ಹಕ್ಕನ್ನೂ ಮೊಟಕುಗೊಳಿಸಿ ಭೋಗ ಸಂಸ್ಕøತಿಯ ವಸ್ತುವಾಗಿ ಸಂಪತ್ತನ್ನು ಬಾಚಿಕೊಳ್ಳುವ ದುರುಳ ಕ್ರಿಯೆ ಅವ್ಯಾಹತವಾಗಿ ನಡೆದಿದೆ. ಹೀಗಾಗಿ ತನ್ನ ಪಾಡಿಗೆ ತಾನು ಹಳ್ಳ ಬಾವಿ ಕೆರೆ ಕಟ್ಟೆಗಳಿಗೆ ಹೋಗಿ ನಿರ್ಮಲವಾದ ತಿಳಿನೀರು ತುಂಬಿಕೊಂಡು ಬರುತ್ತಿದ್ದ ನಮ್ಮ ಗ್ರಾಮೀಣರು ಇವತ್ತು ಬೋರವೆಲ್ಲು ಹೊಂದಿದ ಧನಿಕರ ಮುಂದೆ ಒಂದು ಕೊಡ ನೀರಿಗಾಗಿ ಭಿಕ್ಷೆಗೆ ನಿಲ್ಲಬೇಕಾದ ಸ್ಥಿತಿ ಬಹುಭಾಗದ ಹಳ್ಳಿಗಳಲ್ಲಿ ಕಾಣುತ್ತೇವೆ.
ಬೋರವೆಲ್ಲುಗಳು ಒಂದು ಕೃಷಿ ಉತ್ಪನ್ನಗಳನ್ನು ಹೆಚ್ಚಿಸುತ್ತಿರುವ ಸಂಗತಿ ಒಂದೆಡೆಯಾದರೂ, ಅಗತ್ಯಕ್ಕಿಂತ ಹೆಚ್ಚಿನ ನೀರಿನ ಬಳಕೆಯಾಗಿ ಅನೇಕ ಜಲಮೂಲಗಳು ಇಂದು ಹೇಳ ಹೆಸರಿಲ್ಲದಂತೆ ನಾಶವಾಗಿ ಹೋಗಿವೆ. ನಾನು ಕಳೆದ 20  ವರ್ಷಗಳ ಹಿಂದೆ  ಮುಧೋಳ ತಾಲೂಕು ಲೋಕಾಪುರದಲ್ಲಿ ನೆಲೆಸಿದ್ದಾಗ ಅಲ್ಲಿನ ಊರ ಬದಿಯ ಹಳ್ಳದ ಸೊಗಸು ನೋಡಬೇಕಿತ್ತು. ಸುಂದರ ಪ್ರಾಕೃತಿಕ ವೈಭವದಿಂದ ಮೆರೆಯುತ್ತಿದ್ದ ಹಳ್ಳ ಸದಾ ಪ್ರವಹಿಸುತ್ತಿತ್ತು. ಮಗ್ಗುಲಲ್ಲಿ ಹಸಿರು ತುಂಬಿದ ಗಿಡ ಮರಗಳು, ಬಾಳೆ, ತೆಂಗು, ಪೇರಲ, ಚಿಕ್ಕು, ದಾಳಿಂಬೆ ಗಿಡಗಳು, ಈ ಹಣ್ಣಸವಿ ಹುಡುಕಿ ಬರುತ್ತಿದ್ದ ಪಕ್ಷಿ ಸಂಕುಲ ಅದೊಂದು ಧರೆಯ ಸ್ವರ್ಗವಾಗಿತ್ತು. ‘ಆ ಹಳ್ಳ ಎಂದಿಗೂ ಬತ್ತಿದ್ದು ನಾವು ಕೇಳಿಯೇ ಇಲ್ಲ’ ಎಂದು ಹಿರಿಯರು ಹೇಳುತ್ತಿದ್ದರು. ಇದಕ್ಕೆ ಕಾರಣ ಅಲ್ಲಿರುವ `ಗುಪ್ತಗಂಗೆ' .ಹೌದು, ಲೋಕಾಪುರದ ಹಳ್ಳದ ಗುಡ್ಡದಲ್ಲಿ  ಸದಾ ಜಿನುಗುತ್ತಿದ್ದ ದೊಡ್ಡದಾದ ಸೆಲೆ ಒಂದು ಇತ್ತು. ಇದಕ್ಕೆ `ಗುಪ್ತಗಂಗೆ' ಎಂದು ಕರೆಯುತ್ತಿದ್ದರು. ಆ ಗುಪ್ತ ಗಂಗೆಯ ತಿಳಿನೀರ ಝರಿ ಕಣ್ಣಾರೆ ಕಂಡು ಆ ಕಾಲಕ್ಕೆ ಎಷ್ಟೊಂದು ಖುಷಿಗೊಂಡಿದ್ದೆವು ಎಂದು ನೆನೆದಾಗ ಈ ದಿನವೂ ರೋಮಾಂಚನವಾಗುತ್ತದೆ. ಆದರಿಂದು  ಲೋಕಾಪುರದ ಹಳ್ಳಕ್ಕೆ ಸ್ಮಶಾನಮೌನ ಆವರಿಸಿದೆ. ಆ ಕಾಲದ ಗಿಡಮರಗಳು ಗುರುತಿಗೂ ಸಿಕ್ಕದಂತೆ ಯಾರು ಯಾರದೊ ಒಲೆ ಸೇರಿ ಸುಟ್ಟು ಬೂದಿಯಾಗಿವೆ. ಅಲ್ಲೀಗ ಹಕ್ಕಿ ಪಕ್ಕಿಗಳ ಕಲರವ ಇಲ್ಲ. ಗುಪ್ತಗಂಗೆ ಒಂದು ಹನಿ ನೀರನ್ನೂ ತೊಟ್ಟಿಕ್ಕದ ಸ್ಥಿತಿಯಲ್ಲಿ ಬತ್ತಿ ಬಾಡಿ ನಿಸ್ತೇಜಗೊಂಡಿದ್ದಾಳೆ. ಹಳ್ಳದ ವೈಭವ ಈಗ ಇತಿಹಾಸ ಮಾತ್ರ. ಭೂಗೋಲವಂತೂ ಭಣಭಣ. ಈ ಹಳ್ಳಕ್ಕೆ ಬ್ರಿಟಿಷರ ಕಾಲಕ್ಕೆ ಗಟ್ಟಿಮುಟ್ಟಾಗಿ ಕಟ್ಟಿದ ದೊಡ್ಡದೊಂದು ಸೇತುವೆ ಇತ್ತು. ಅದು ತೀರಾ ಇತ್ತೀಚಿಗೆ ರಸ್ತೆ ಅಗಲೀಕರಣಮಾಡಿ ಹೊಸ ಸೇತುವೆ ನಿರ್ಮಾಣ ಮಾಡುವ ನೆಪದಲ್ಲಿ ನಿರ್ನಾಮಮಾಡಿ ಒಗೆದರು. ಇಂಥ ಸಂದರ್ಭಗಳು ನಿಮ್ಮ ಊರಲ್ಲೂ ಕಂಡಿದ್ದೀರಿ. ಇದೆಲ್ಲಾ ಆಧುನಿಕತೆಯ ಅವಾಂತರಗಳು. ಆಧುನಿಕತೆಯ ಅವಾಂತರಗಳು ಸೃಷ್ಟಿಸುತ್ತಿರುವ ಇಂಥ ಅಪಾಯಕಾರಿ ಅವಘಡಗಳಿಗೆ ಕೊನೆ ಎಂಬುದಿಲ್ಲ. ಜಾಗತೀಕರಣ ಹಾಗೂ ಯಂತ್ರ ನಾಗರಿಕತೆಯ ರಾಕ್ಷಸಿ ಬಾಹುಗಳ ಅಪ್ಪುಗೆಯಲ್ಲಿ ನಮ್ಮ ನೀರು, ನೆಲ, ಗಿಡ, ಮರ, ಪ್ರಾಣಿ, ಪಕ್ಷಿ ಸಂಕುಲ, ಪ್ರಕೃತಿ ಸಂಪತ್ತು ದೀಪಕ್ಕೆ ಸಿಕ್ಕ ಹುಳಗಳಂತೆ ಪಟಪಟನೆ ಮುರಿದು ಬೀಳುವ ಮುನ್ನ ಜಾಗೃತರಾಗಬೇಕಿದೆ.
ಮನುಕುಲವೆಲ್ಲ ಬೀದಿ ಶವವಾದೀತು.....
‘ಪರಿಸರ ಕಾವ್ಯ’ದ ಕವಿಗಳು ನಾವು ನಮ್ಮ ಪರಿಸರವನ್ನು ಪ್ರಾಕೃತಿಕ, ಜೀವ ವೈವಿಧ್ಯದ ಸಂಪತ್ತಿನೊಂದಿಗೆ ಉಳಿಸಿಕೊಳ್ಳದಿದ್ದರೆ ಆಗುವ ಅಪಾಯದ ಮುನ್ನೆಚ್ಚರಿಕೆ ನೀಡಿದ್ದಾರೆ. ಮನುಷ್ಯನ ಸ್ವಾರ್ಥ ಲಾಲಸೆಯ ಕಾರಣವಾಗಿ ಆಧುನಿಕ ಜಗತ್ತು ತನ್ನ ಅವಸಾನವನ್ನು ತಾನೇ ಕಂಡುಕೊಳ್ಳುವ ಕಾಲ ದೂರವಿಲ್ಲ ಎನ್ನುತ್ತಾರೆ. ಜಗದ, ಜನರ ನೆಮ್ಮದಿಗಾಗಿ ಕಾಡು ಉಳಿಯಬೇಕು. `ಕಾಡು ಅಳಿದರೆ ನಾಡು ಮುಳುಗೀತು' , ನೀರು ಬರೀ ನೀರಲ್ಲ ಜೀವ ಕೋಟಿಗದು ಅಮೃತ  ಎಂಬ ಸತ್ಯವನ್ನು ಸಾರಿದ್ದಾರೆ.
ಹಿರಿಯ ಕವಿ ಬಿ. ಆರ್. ನಾಡಗೌಡ ಅವರು ಹೇಳುವ ಹಾಗೆ-
ಕಾಡಿನಿಂದ ಇಳೆಗೆ ಮಳೆಯು
ಸೃಷ್ಟಿ ಸೊಬಗು ಚೇತನ
ಹಸಿರು ನಮ್ಮ ಜೀವದುಸಿರು
ನಿತ್ಯ ಬದುಕು ನೂತನ
ದಿನವೂ ಬದುಕು ಹೊಸತನದಿಂದ ಕೂಡಿರಬೇಕಾದರೆ ಪ್ರಕೃತಿಯ ಸೊಬಗು ಒಂದು ಕಾರಣ. ಈ ಪ್ರಕೃತಿಯನ್ನು ಕಾಯ್ದುಕೊಳ್ಳೆಬೇಕಾಗಿದೆ. ಪ್ರಕೃತಿ ಎಲ್ಲರ ನೆಮ್ಮದಿಯ ಸಂಕೇತ. ಮಾನವ ಬದುಕಿನ ಪ್ರಾಣಗಂಗೆ. ಜೀವದುಸಿರು, ಅದೇ ಇಲ್ಲದಿದ್ದರೆ ಈ ಜಗಕೆ ಏನು ಅರ್ಥ? ಕವಿ ವೀರೇಶ ಎಂ. ರುದ್ರಸ್ವಾಮಿ ಸಾರುತ್ತಾರೆ-
ಮದುಮಗಳಂತೆ ಕಂಗೊಳಿಸುವ
ಹಚ್ಚಹಸುರಿನಿಂದ ನಿನ್ನ ಮೈ ತೋರು
ನೀ ಸ್ವಾರ್ಥವನು ಬಯಸಿದರೆ
ಮನುಕುಲವೆಲ್ಲ ಬೀದಿ ಶವವಾಗಿ
ಜಗವೆಲ್ಲ ಮೌನ ಆವರಿಸುವುದು
ಪೃಕೃತಿಯ ತರುಲತೆಗಳ ದಟ್ಟೈಸಿರಿಯ ಬದಲಿಗೆ ಇಂದು ಬೃಹತ್ ಕಾರ್ಖಾನೆಗಳು ಉಗುಳುವ, ಸೃಷ್ಟಿಸುವ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮತ್ತದೇ ನೆನಪು ಇಳಕಲ್ಲಿಗೆ ಜಾರುತ್ತಿದೆ. 1980 ರಿಂದ 1988 ರ ವರೆಗೆ ನಾನು  ಬಾಗಲಕೋಟೆ ಜಿಲ್ಲೆಯ ಇಳಕಲ್ಲದಲ್ಲಿ ನೆಲೆಸಿದ್ದೆ. ಅಲ್ಲಿಯ ಸದಾ ಝಳು ಝಳು ಹರಿಯುತ್ತಿದ್ದ ಹಳ್ಳ. ಹಳ್ಳದ ಬದಿಗೆ ಎದ್ದು ನಿಂತಿದ್ದ ಎತ್ತರದ ತೆಂಗಿನ ಮರಗಳು, ಶ್ರೀ ವಿಜಯ ಮಹಾಂತ ಶ್ರೀಗಳ ಗದ್ದುಗೆ, ಗದ್ದುಗೆ ಕಾಣದ ಹಾಗೆ ತಣ್ಣೆಳಲು ನೀಡಿದ್ದ ಎತ್ತರದ ಮರಗಳು... ಇವೆಲ್ಲಾ ಈಗ ನೆನಪಿಸಿಕೊಳ್ಳಲು ಮಾತ್ರ. ಈಗ ಹಳ್ಳದಲ್ಲಿ ತಿಳಿನೀರಿಲ್ಲ. ಕೊಳಚೆ ನೀರು ಹಳ್ಳಕ್ಕೆ ತಂದು ಕಲ್ಲಿನ ಪಾಲೀಶುಮಾಡುವ ಫ್ಯಾಕ್ಟರಿಗಳ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಭೂಮಿಯ ಫಲವತ್ತತೆ ಎಂಬುದು ಬಂಜೆಯಾಗಿ ಈಗ ಅಲ್ಲಿಯ ಭೂಗೋಲವು ರಣರಣವೆನಿಸುತ್ತಿದೆ. ಇಂಥದೇ ಪರಿಸರ ಈಗ ಎಲ್ಲೆಲ್ಲೂ. ಅದಕ್ಕಾಗಿ ಈ ಸಂಕಲನದ ಕವಿ ಲಕ್ಕಸಕೊಪ್ಪದ ಹುಲ್ಯಾಳ ಮಲ್ಲು ಹೇಳುತ್ತಾರೆ-
ಎಲ್ಲೆಂದರಲ್ಲಿ ಕಾಣುತ್ತಿವೆ ಪ್ಲಾಸ್ಟಿಕ್ ಯುಗದ ವಸ್ತುಗಳು
ತಯಾರಾಗುತ್ತಿವೆ ಇದರಿಂದ ವಿಷಪೂರಿತ ಪ್ರದೇಶಗಳು
ಬಾವಿ ಕೆರೆಗಳಲ್ಲಿ ತುಂಬಿಕೊಂಡಿವೆ ವಿಷಪೂರಿತ  ಕಲ್ಮಶಗಳು
ಪರಿಣಾಮದಿಂದ ಸಾಯುತ್ತಿವೆ ಮೀನಿನಂತಹ ಜಲಚರಗಳು

ಮಾನವನ ಜಾಣ್ಮೆ, ಕುಶಲತೆ, ಬುದ್ಧಿಶಕ್ತಿ ಈಗ ಮುಗಿಲು ಮುಟ್ಟಿದೆ. ಆದರೆ ಇದರ ಸದ್ಬಳಕೆಯಾಗಬೇಕಾದುದು ಈಗ ಜಲಮೂಲ ಗಳನ್ನು ಉಳಿಸಿಕೊಳ್ಳುವಲ್ಲಿ. ವಿಪರ್ಯಾಸವೆಂದರೆ ಈ ಬಗೆಯ ಚಿಂತನೆ ಗೌಣವಾಗಿ ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಸರೋಜ ಎನ್. ಪಾಟೀಲ ಅವರ ಸಾಲುಗಳು ಹೇಳುವಂತೆ-
ನಾಗರಿಕ ಮಾನವನ ಪಯಣ
ಮುಟ್ಟಿದೆ ಚಂದ್ರನವರೆಗೂ ಯಾನ
ಎಲ್ಲೆಂದರಲ್ಲಿ ನೀರಿನ ಆಹಾಕಾರ
ತಿಳಿಯದೆ ಮಾನವನಿಗೆ ಇದರ ಸಾರ
ವೈಜ್ಞಾನಿಕವಾಗಿರುವ ಜಾಣ್ಮೆಯನ್ನು ಬಳಸಿ ನೀರಿನ ಈ ಕಾಲದ ಆಹಾಕಾರವನ್ನು ತೊಲಗಿಸಬೇಕೆಂಬುದು ಅವರ ಕಳಕಳಿ. ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಭೂತಾಯಿಯ ಒಡಲು ಸದಾ ಹಸಿರಾಗಿರಲಿ ಎಂಬುದೇ ಎಲ್ಲರ ಹಾರೈಕೆ. ಆದರೆ ಭೂತಾಯಿಯ ಒಡಲು ಬರಿದುಮಾಡುವ ರಾಕ್ಷಸಿ ಕಾರ್ಯಕ್ಕೆ ಭೂಮಿಯೇ ಪ್ರತಿರೋಧ ಒಡ್ಡಿದರೆ ಹೇಗಾದೀತು? ಅದರ ಒಂದು ರುದ್ರನರ್ತನ  ಡಿಸೆಂಬರ್ 2004 ರಲ್ಲಿ ನಡೆದ `ಸುನಾಮಿ' ಯೇ ಸಾಕ್ಷಿ. ಪೂರ್ಣಿಮಾ ಮ. ಪತ್ತಾರ ಅವರ ಕವಿತೆಯಲ್ಲಿ ಭೂತಾಯಿಯು ತನ್ನ ಕರುಳ ಕುಡಿಗಳಿಗೆ ಹೀಗೆ ಹೇಳುತ್ತಾಳೆ-
ನಾನು ನಿಮ್ಮ ತಾಯಿ ಪೃಥ್ವಿ
ಹೆತ್ತವಳನ್ನೆ ಹಿಂಸಿಸುವ
ಹೀನ ಮನುಜರು ನೀವು
ನನ್ನನ್ನೂ ಬಿಡಲಿಲ್ಲವಲ್ಲ
ನನ್ನ ಸಹನೆ ಕಂಡು ನನ್ನನ್ನೂ
ಶಕ್ತಿ ಇಲ್ಲದವಳೆಂದು ಭಾವಿಸಿದಿರಿ
ನಾನು ಮುನಿದರೆ ಸುನಾಮಿ
ಭೂತಾಯಿಯು ಮತ್ತೆ ಮತ್ತೆ ಮುನಿಸಿಕೊಳ್ಳುವ ಮೊದಲು, ಪ್ರಕೃತಿಯ ಮೇಲಿನ ದೌರ್ಜನ್ಯ ನಿಲ್ಲಬೇಕು. ಈ ಆಶಯವೇ ಇಲ್ಲಿನ ಬಹುತೇಕ ಕವಿತೆಗಳಲ್ಲಿದೆ.
ಭುಗಿಲೆದ್ದು ಉರಿಯುತಿದೆ
ಆಂತರಿಕ ದ್ವೇಷಾಸೂಯೆಯ ಜ್ವಾಲೆ
ನಶಿಸಬೇಕು ಬೀಸುತ್ತಿರುವ
ನರಪಾತಕಿ ದುಷ್ಟಶಕ್ತಿಗಳ ಬಲೆ
(ವಾಯ್. ಎಂ. ಜೋಶಿ)
ಗಾಳಿ ಇರಲಿ ಶುಚಿಯಾಗಿ
ನೀರು ಹರಿಯಲಿ ತಿಳಿಯಾಗಿ
(ಶ್ರೀದೇವಿ ಸಿಂಗಾಡಿ)
ನೀರಿಗಾಗಿ ಸಾಲು ಸಾಲು ಪಾಳಿ
ಹರುಕು ಮುರುಕು ಕೊಡಪಾನಗಳು
(ಪಿ.ಡಿ.ವಾಲೀಕಾರ)
ಹರಿದು ಕಡಲ ಸೇರದಂಗೆ
ಜಲಕೊಯಿಲು ಮಾಡುವೆ ಬಾರೇ....
(ಮಂಜುನಾಥ ಹೊಂಬುಜ)
ಎಂಥ ಪಾಪವೇ ಇರಲಿ ಕಪಟವೆ ತೊಳೆದು
ಮತ್ತೆ ಮಡಿಲಿಗೆ ಕರೆವಳು ಈ ತಾಯಿಯು
(ಕಾವೇರಿ ವಿವೇಕಾನಂದ ಗರಸಂಗಿ)
ನಾಕ ಹೋಗಿ ನರಕವಾಯ್ತು
ಪರಿಸರಕೆ ಗಲ್ಲು
(ಕಲ್ಯಾಣರಾವ ದೇಶಪಾಂಡೆ)
ಹೀಗೆ ಇಲ್ಲಿನ ಕವಿತೆಗಳು ಒಂದೊಂದು ಬಗೆಯಲ್ಲಿ ನಮ್ಮ ಪರಿಸರದ ಕಾಳಜಿಯನ್ನು ವ್ಯಕ್ತಪಡಿಸುವುದರ ಜೊತೆಗೆ ಎಚ್ಚರಿಕೆಯನ್ನೂ ಮೂಡಿಸುತ್ತವೆ..  ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ ನಾನು ಹುಟ್ಟಿ ಬೆಳೆದ ನನ್ನೂರು ಜಮಖಂಡಿ ತಾಲೂಕಿನ ತೊದಲಬಾಗಿ. ಇಲ್ಲಿ 1965 ರಿಂದ 1975 ರ ವರೆಗೆ ನೆಲೆಸಿದ್ದೆ. ಇಲ್ಲಿನ ಹಳ್ಳ, ಹಳ್ಳದ ಬದಿಯ ಹಸಿರು, ಮಳೆಗಾಲದಲ್ಲಿ ತುಂಬಿ ಧುಮುಕುತ್ತಿದ್ದ ದಬೆ ದಬೆ ಈಗ ನೋಡಲೂ ಸಿಗುತ್ತಿಲ್ಲ. ಸಮಾಧಾನವೆಂದರೆ ಈ ಹೊತ್ತಿಗೆ ನಮ್ಮೂರ ಹಳ್ಳಕ್ಕೆ ಜೀವ ಬಂದಿದೆ. ಆಲಮಟ್ಟಿ ಆಣೆಕಟ್ಟೆಯ ಹಿನ್ನೀರಿನ ಕೃಷ್ಣಾ ನದಿ ತಟಾಕದಲ್ಲಿ ಪಡಸಲಗಿ ಬಳಿ ನಿರ್ಮಾಣಮಾಡಿದ ಏತ ನೀರಾವರಿಯಿಂದ ಹೊಲಗಳಿಗೆ ನೀರು ಬಿಡುವ ಮೂಲಕ ನನ್ನೂರ ಹಳ್ಳದಿಂದ ಹಾಯ್ದು ಕೆರೆಗೆ ನೀರು ಬಿಡುತ್ತಿದ್ದಾರೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ವೈಭವ ಕಳೆದುಕೊಂಡಿದ್ದ ಹಳ್ಳ ಈಗಷ್ಟೇ ಚಿಗುರಾಗುತ್ತ್ತಿದೆ. ನೈಸರ್ಗಿಕ ಮಳೆಯಿಂದ ಹಸಿರಾಗಿದ್ದ ನನ್ನೂರ ಹಳ್ಳ ಇಂದು ಯಾಂತ್ರಿಕ ಉಪಭೋಗದಿಂದ ಮೈದಡವಿಕೊಂಡು ಏಳುತ್ತಿದೆ. ಈ ಮಾತು ನಾನಿಲ್ಲಿ ಹೇಳುವ ಕಾರಣ ಪ್ರತಿ ಊರಿನ ಕೆರೆಗಳನ್ನು ತುಂಬಿಸಬೇಕಾಗಿದೆ. ಇದಕ್ಕಾಗಿ ವಿಜಾಪುರ,ಬಾಗಲಕೋಟೆ,ದಾವಣಗೆರೆ ಮೊದಲಾದ ಕಡೆಗಳಲ್ಲಿ ಕೆರೆ ತುಂಬಿಸುವ ಕಲಸಗಳು ನಡೆಯುತ್ತಿವೆ .ಇದೊಂದು ಸಮಾಧಾನಕರ ಸಂಗತಿ. ಹೌದು ವ್ಯರ್ಥವಾಗಿ ಹರಿದು ಹೋಗುವ ನದಿಯ ನೀರನ್ನು ಬೃಹತ್ ಆಣೆಕಟ್ಟುಗಳ ಮೂಲಕ ತಡೆದು ನಿಲ್ಲಿಸಿದರಷ್ಟೇ ಸಾಲದು. ಪ್ರತಿ ಹಳ್ಳಿಯ ಕೆರೆಯನ್ನು ತುಂಬಿಸಬೇಕು. ಜೊತೆಗೆ ಅಳಿದು ಹೋಗಿರುವ ಅದೆಷ್ಟೊ ಕೆರೆಗಳಿಗೆ ಮರು ಜೀವ ನೀಡಬೇಕು. ಮತ್ತೆ ನಮ್ಮ ಭೂತಾಯಿ ಹಸಿರ ಉಡುಗೆಯಲ್ಲಿ ನಳ ನಳಿಸುವಂತಾಗಲಿ, ಅವಳ ಒಡಲಲ್ಲಿ ಹಾಡಿ ನಲಿಯುವ ಪ್ರಾಣಿ ಪಕ್ಷಿಗಳು ಒಕ್ಕೊರಲಿನಿಂದ ಪರಿಸರ ಪ್ರೀತಿ ಹೊಂದಿದ ಮಾನವರಿಗೆ `ಕೃತಜ್ಞತೆ' ಹೇಳುವಂತಾಗಲಿ, ಪರಿಸರ ಮಲೀನತೆಯಿಂದ ದೂರಾಗಿ ಸ್ವಚ್ಛಂದದ ‘ಭೂಗೋಲ’ ನಮ್ಮ ಆಶಯವಾಗಲಿ.
ಚಿತ್ರ ಕೃಪೆ : ಅಂರ್ತಜಾಲ.
-----------------------------------------------------------------------------------------------------

ವಿಳಾಸ :
ಡಾ.ಪ್ರಕಾಶ ಗ.ಖಾಡೆ, ‘ಶ್ರೀಗುರು’,
ಸರಸ್ವತಿ ಬಡಾವಣೆ,ಸೆಕ್ಟರ್ ನಂ. 63 ,
ನವನಗರ,ಬಾಗಲಕೋಟ. ಮೊ.9845500890.