ಮಂಗಳವಾರ, ಮೇ 14, 2013

ಕವಿತೆಗಳು :ವಿದ್ಯಾ ಕುಂದರಗಿ















ಬಯಲ  ಬದುಕಿಗೆ ..............

ಬಾಗಿಲೇಕೆ? ಗೋಡೆ ಏಕೆ?
ಛತ್ತಛಾವಣಿ ಮುಚ್ಚು ಏಕೆ?
ಹೊಚ್ಚಲೇಕೇ? ಬಚ್ಚಲೇಕೇ?
ಮುಚ್ಚುಮರೆಯ ತೆರೆಯೇ ಇಲ್ಲ
ಬಯಲ ಆಲಯದಲ್ಲಿ
ಬದುಕು ಬಯಲಿನಂತಿರಲು.

ನಸುಕಿನಲೆದ್ದು ಹೊದ್ದ ಕಲತ್ತಲೆಯ ಕಣ್ಣು ಕಟ್ಟಿ
ಅದೇ ಕಂಟಿ,ಕಂದರ, ಹೆಬ್ಬಂಡೆಗಳಿಗೆ
ಮರೆ,ಆಸರೆಯ ಮೊರೆ.........
ಇಲ್ಲದಿರೆ ಕಾಯಬೇಕು ಕಾರಿರುಳ.
ಭೇದ,ಭವಣೆ,ಸ್ಥಾವರಗಳ ಬಹಿರ್ದೆಶೆ...
ಮೈ ಮನಸ್ಸು ನಿರುಮ್ಮಳ.
ಮತ್ತೇ ಬಟ್ಟೆ ಕಳಚಿ, ಭಾವ ತೊಳೆದು
ಶುದ್ಧಿ ಕೈಂಕರ್ಯದಲ್ಲಿ
ಕಣ್ಣು ಮುಚ್ಚೇ ಕಾರ್ಯವಾಸಿ

ಒಣ ರೊಟ್ಟಿ, ನೆನೆದ ಕಾಳಿಗೆ
ಸವಿ ತರುವ ಎಳೆಗಾಯಿ, ಚಿಗುರೆಲೆ,
ಮಣ್ಣಲ್ಲಿ ಮಣ್ಣಾಗುವ.
ಕೆಸರಲ್ಲಿ ತೇವವಾಗುವ
ಕೈಗಳಿಗಿಲ್ಲ ಮಡಿ,ಮುಚ್ಚಟೆಯ ಸೂತಕ
ತೆನೆಯುತ್ತ,ತೊನೆಯುತ್ತ
ಹಸಿರ ಮಡಿಲೊಳಗೆ
ರಾಶಿ,ರಾಶಿ ಸುರಿದ ಕಾಳು,
ಭೂಮಿಯೊಡಲ ಕಣಜದೊಳಗೆ
ಭದ್ರವಾದ ನಾಳೆ ಬೀಜ.

ಹೊದಿಕೆಯೊಳಗೆ ತಂಬೆರಲರ ಕಚಗುಳಿ
ಕಿಲಿಕಿಲಿಸುವ ಮಿಂಚುಳ್ಳಿ
ಕತ್ತಲೆಯ ಗರ್ಭದೊಳಗೆ
ಬೆಳಕ ಕಿಡಿಯ ಬಿತ್ತಿ
ಮರಿ ಹಾಕುತ್ತದೆ ಪ್ರಕೃತಿ
ಬಯಲ ಬದುಕ ಸಂತತಿ    

       - ವಿದ್ಯಾ ಕುಂದರಗಿ



               
                                       









ಬೆಳಕ ತರುವೆನೆಂದವಗೆ

ಕರಿಮುಗಿಲಿನ ಕೆಳಗೆ
ಬಿಳಿ ಹೆಣ್ಣಿನ ಅಳಲು
ಸಂಗ ನಿಂತೊಮ್ಮೆ ನೋಡು
ಅನುಭವಿಸು,ಅರ್ಥೈಸು

ಬೆಳಕ ತರುವೆನೆಂದು
ಸೂರ್ಯನ ಹಿಂದೆ ಓಡೋಡುವ
ನೀನು ಮುಟ್ಟಬಲ್ಲೆಯಾ
ಪಣತೊಟ್ಟು ನೀನಿಟ್ಟ ಗುರಿ.

ಸೂರ್ಯನಿಗೆ ಸಾವಿಲ್ಲ
ನಿನಗವನಷ್ಟು ಆಯುಷ್ಯವಿಲ್ಲ
ಕತ್ತಲಿಲ್ಲದಿರೆ
ಬೆಳಕಿಗೆ ಬದುಕಿಲ್ಲ

ಯೋಚಿಸು,ಮನಸಾರೆ
ಇಚ್ಛಿಸು ಒಂದೇ ಒಂದು ಸಾರಿ
ನೀನೆ ಇಚ್ಛಿಸು
ದೈವೇಚ್ಛೆಯಲ್ಲೇನಿದೆ?

ಹಣೆಬರಹ ಹಳಿದು
 ಹರಣ ಮಾಡಬೇಡ ಕಾಲ
ಪುಟ್ಟ ಹಣತೆಯಾಗು ಸಾಕು
ದಟ್ಟ ಕತ್ತಲೆಯ ಈ ಬದುಕಿಗೆ.


              -  ವಿದ್ಯಾ.ಕುಂದರಗಿ.





















































ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ