ಶುಕ್ರವಾರ, ಜುಲೈ 12, 2013

ಕವಿತೆಗಳು :ವಿದ್ಯಾ ಕುಂದರಗಿ

ಕಡಲ ದಂಡೆಯಲ್ಲಿ

ಭಾವಕಡಲ ದಂಡೆಯಲ್ಲಿ
ಅವಿಶ್ರಾಂತ ಅಲೆಗಳು
ಮರಳ ಹಾಸಿನ ಮೇಲೆ
ಕ್ಷಣ ನಿಲ್ಲದ ಚೆಲ್ಲಾಟ,

ಬಂಧ ಸಂಬಂಧವೇನೋ.....
ಒಂದರಂತಿನ್ನೊಂದು,
ಒಂದರೊಳಗೊಂದು........
ಮತ್ತೊಂದು, ಮಗದೊಂದು.........
ಒಂದAರ್ಹಿಂದೊಂದು ಬೆಂಬಿಡದ
ನಿತ್ಯ ನಿರಂತರ ಓಟ

ಎಲ್ಲಿಯೂ ತಪ್ಪದ ತಾಳ,
ನೀರ ಮುಸುಕಿನ ಒಳಗೆ
ಉಸುಕಿನೊಂದಿಗಿನ ಮೇಳ,

ನೂರು ಮುತ್ತುಗಳ ಒಡಲು
ನದಿಗಳೊಂದಿಗೆ ನಡೆದು ಬಂದ
ಸಾವಿರ ಜೀವಗಳಿಗೆ ಮಡಿಲು,

ದಣಿವಿಲ್ಲ, ದಾವಂತವಿಲ್ಲ......
ಎಂದಿಗೂ ನಿಲ್ಲುವುದಿಲ್ಲ
ಮೈಯನೆಂದೂ ಮರೆಯುವುದಿಲ್ಲ
ಸತತ ಸಂಗ ತೊರೆಯುವುದಿಲ್ಲ,

ಅಂತಸ್ಪುರಣದ ಒಡಲತಂತಿಗೆ
ಸೋಲನರಿಯದ ಮಿಡಿತ........
ಯಾವ ಜನುಮದ ತೀರವೋ
ನಿಲ್ಲಲಾರದ ತುಡಿತ.
                     - ವಿದ್ಯಾ  ಕುಂದರಗಿ.    
          

ಬಿಸಿಲ ಬೆಳಗಿನ ಸಡಗರ

ಇಂದು ಮಳೆಗೆ ರಜೆ 
ಬಿಸಿಲ ಬೆಳಗಿನ ಸಡಗರ 
ಸ್ವಾತಂತ್ರ್ಯ ಸಾರುವ 
ಗುಬ್ಬಚ್ಚಿ ಹಿಂಡು 
ಬೆಳಗಿನ ಬೆಡಗು 
ಹೊತ್ತು ತಂದಂತೆ

      ಇಬ್ಬನಿ

ಮುಸುಕು ಹಾಕಿದ ಪುಷ್ಪ 
ಮುಖ ತೆರೆದು, ನಸುನಾಚಿ 
ಕೈ ಮಾಡಿ ಕರೆದಂತೆ   
ನವೀರು ಬಣ್ಣಗಳ ಬೀರಿ 
ಹಾರಿ ಬರುವ ದುಂಬಿಪತಂಗ
ಪ್ರಣಯ ಪಯಣಕ್ಕೆ ಸಿದ್ದವಾದಂತೆ

. ಹೂ ಪತ್ರದ ಕೆಳಗೆ ....
 ಕ್ರೀಮಿಕೀಟಗಳ ಕಿಟಲೆ .................. 
ಮೆಲ್ಲನೆ ಸೂಯುವ ಗಾಳಿ
ಕಿವಿಯಲ್ಲಿ ಕಿಲಕಿಲ ನಕ್ಕಂತೆ......
ತಲೆದೂಗುತ್ತವೆ ಗಿಡ ಬಳ್ಳಿಗಳು 
ನೆರೆಹೊರೆಯು ಮಾತನಾಡಿಕೊಂಡಂತೆ............
ಬಿಸಿಲ ಬೆಳಗಿನ ಹೊಳೆತಕ್ಕೆ
ಟೊಂಗೆಟಿಸಿಲುಗಳು ತೂಗಿ
ಸಂದುಸಂದುಗಳು ಚಿಗುರೊಡೆದಂತೆ
ನಿನ್ನೆವರೆಗೆ ಜಡಿದ ಮಳೆಯಲ್ಲಿ
ತೊಪ್ಪೆಯಾದ ಭಾವಗಳು
ಹಸಿಯನುಂಡು ಹಚ್ಚಗಾದಂತೆ
ಬೆಚ್ಚಗಿನ ಬಂಧದಲಿ 
ಉಸಿರ ಬಿಸಿ ತಣ್ಣಗಾದಂತೆ
ಮತ್ತೆ ಮಳೆಯನ್ನು 
ಒತ್ತಾಯದಿಂದ ಕರೆತಂದು
ದಂದುಗಕ್ಕೆ ಹಾಜರಾದಂತೆ.

•ವಿದ್ಯಾ ಕುಂದರಗಿ

ಗುರುವಾರ, ಜುಲೈ 11, 2013

ವಿದ್ಯಾ ಕುಂದರಗಿಯವರ ಕವಿತೆಗಳು

 ಬೆಳೆಯುವ ಭೂಮಿಯಾದವರು
  -ವಿದ್ಯಾ ಕುಂದರಗಿ

ಈ ಭುವಿಯಲ್ಲಿ
ಹಸಿರೊಂದೇ ಬೆಳೆಯುವುದಿಲ್ಲ.....
ಹಸಿವೂ ಬೆಳೆಯುತ್ತದೆ.
ಮಾವೋಂದೆ ಚಿಗುರುವುದಿಲ್ಲ.....
ಬೇವೂ ಚಿಗುರುತ್ತದೆ.
ಕೋಗಿಲೆಯೊಂದೇ ಕೂಗುವುದಿಲ್ಲ......
ಕಾಗೆ ಗೂಬೆಗಳು ಆಲಾಪಿಸುತ್ತವೆ.
ಬೆಳದಿಂಗಳಷ್ಟೇ ಬೀರುವುದಿಲ್ಲ......
ಬಿಸಿಲೂ ರಣಗುಡುತ್ತದೆ.

ಜಡಿ ಮಳೆ ಇಂಗಿ ಹೋಗಿ
ತಂಪು ಮಾತ್ರ ಉಳಿಯುವುದಿಲ್ಲ......
ಊರಿದ ಹೆಜ್ಜೆ ಕಿತ್ತೆಳಿಸಲು
ಕಸರತ್ತು ಬಯಸುವ
ಕೆಸರೂ ಉಳಿಯುತ್ತದೆ.

ಸಹಿಸಿ ಬದುಕುವ ಜನರಿದ್ದಾರೆ
ಬಿಸಿಲ ಚರ್ಮದಲೂ
ಶುಭ್ರ ಹೃದಯವಿದ್ದವರು .......
ಮಣ್ಣ ಹುಡಿಯಲ್ಲಿ ಹುಡಿಯಾಗಿ
ದುಡಿದು, ಧಣಿಕರಿಗೆ ಸರಕಾಗಿ,
ಅವರ ಗೋಣಿಗಳ ತುಂಬಿ,
ಹೊಟ್ಟೆ ಬಿರಿಯೆ ಸುರಿದು
ತಾವ್ಹಸಿದು,ನೋವಿನಲೂ ನಕ್ಕವರು.

ಮಳೆ ಇಲ್ಲದೆ ಬೆಳೆದು
ಕೈಕೆಸರಾಗದೆ ಮೊಸರುಂಡವರ
ಅಕ್ಷರದ ಅಟ್ಟಹಾಸಕೆ ಹೆದರಿ
ಹಿಂಜರಿದವರು.
ಬೇವಿನಂತೆ ಚಿಗುರುತ್ತಾರೆ.
ಕಾಗೆಗೂಬೆಗಳೊಡನೆ ಹಾಡುತ್ತಾರೆ.
ಕೆಸರಿನೊಂದಿಗೆ ತಂಪಾಗುತ್ತಾರೆ.
ಬಿಸಿಲಿನೊಂದಿಗೆ ಒಣಗುತ್ತಾರೆ.
ವ್ಯತಿರಿಕ್ತವಾದ ಎಲ್ಲವನ್ನೂ ಸಹಿಸಿ
ಬದುಕ ಸಾಗಿಸುತ್ತಾರೆ.

ಸಿಮೆಂಟ್ ಕಾಡಿನವರ ಗುರಿಗಳು
ಇವರಿಗೆ ಗೋರಿಗಳಾದರೂ,
ದುಡಿಯುವ ಕೈಗಳಲ್ಲದೆ
ಬಿತ್ತುವ ಬೀಜವೂ ಆದವರು.
ಕಾಳು ತುಂಬುವ ಕಣಜವಲ್ಲದೆ
ಬೆಳೆಯುವ ಭೂಮಿ ಆದವರು
ಇವರು
ಬೆಳೆಯುವ ಭೂಮಿಯೂ ಆದವರು.
         *
                                                                                       
  ಆದ್ಯಂತಗಳ ನಡುವಿನ ಅರ್ಧಸತ್ಯ


ನಿನ್ನ ಹಾಗೇಯೇ.......
ಮತೇರಿಸುವ ಕಂಗಳಲ್ಲಿ
ಬೆಸೆಯಬೇಕಿತ್ತೇ ಭಾವಗಳ?
ಹೊಗೆಸುತ್ತಿದ ತುಟಿಗಳ
ಚುಂಬಿಸಬೇಕಿತ್ತೇ?
ಪಾಪದ ಪಿಂಡಗಳ ಹೆರಲು
ತಿಟೆ ತೀರಿಸಲೇ ಬೇಕೆ?

ನಿನ್ನ ಹಾಗೆಯೇ......
ಘಮ್ಮೇನ್ನುವ ಗಬ್ಬು ನಾತಕ್ಕೆ
ಮೂಗು ಕಟ್ಟಿದರೂ
ಇಕ್ಕಟ್ಟಿನಲ್ಲೂ ಉಸಿರಬೇಕಿತ್ತೇನೆ?
ಗೆಳತಿ............................
ವಿಕೃತವಾದರೂ ಬದುಕ
ತಬ್ಬಿಕೊಳ್ಳಬೇಕಿತ್ತೇ?
ಅಂಧಕ್ಕಾರದಲ್ಲೂ ಹೃದಯ
ಬಿಚ್ಚಬೇಕಿತ್ತೇನೇ?
ಸಂಪ್ರದಾಯಕೆ
ಬಲಿಯಾಗಲೇಬೇಕೆ ಜೀವ?

ಒಂಟಿಯಾಗಿ ಸುರಿಸಿದ್ದು
ಬೆವರಲ್ಲವೇ?
ಏಕಾಂಗಿಯಾಗಿ ನೆರಳಿದ್ದು
ನೋವಲ್ಲವೆ?
ಒಂಟಿ ಹಕ್ಕಿಯ ಹಾಡಿಗೆ
ಎಲ್ಲವೂ ಕಿವುಡೆ?

ಅತಂತ್ರ ದಂಡೆಯ ಮೇಲೆ
ಪರತಂತ್ರ ಬದುಕಿನ
ತನನ ತಾಣಗಳಿಗೆ
ಹೆಜ್ಜೆ ಹೊಂದಿಸಿದ್ದರೆ......
ದುಡಿದ ದುಡಿತಗಳು
ನೊಂದ ನೋವುಗಳು
ಬೇಡುವ ಬಯಕೆಗಳು
ನಿನ್ನ, ನಿನ್ನಂಥವರ
ಅರ್ಥಹೀನ ದೃಷ್ಟಿಯಲ್ಲಿ
ನಿಜವಾಗುತ್ತಿದ್ದುವೇನೋ?
ಅವಕ್ಕೆ ಮೌಲ್ಯವಿರುತ್ತಿತ್ತು.
ಹೌದೇನೇ?

ಹಾಗಿದ್ದರೆ ಹೇಳೇ...........
ಹಾಗಿದ್ದರೆ ಹೇಳೇ
ಕಣ್ಣಿದ್ದು ಕುರುಡಾಗಿ
ಕಿವಿಯಿದ್ದು ಕಿವುಡಾಗಿ
ವಿಚಾರ ಶೂನ್ಯಳಾಗಿ
ಅಖಂಡ ಸತ್ಯದ ಆದ್ಯಂತಗಳ ನಡುವಿನ
ಪಂಚೇಂದ್ರೀಯ ರಹಿತ ಮುತ್ತೈದೆ.........
ಬದುಕು ಬಳಲಿತೇಕೇ
ಹೀಗೇ ಏಕಾಂಗಿಯಾಗಿ...............?
ಬಲಿಯಾಯಿತೇಕೇ
ಒಬ್ಬಂಟಿಯಾಗಿ................?
ಹೇಳೇ.................
ಅದು ತುಂಬು ಬದುಕೇ ?
ಹೇಳೇ.................
ಅದು ತುಂಬು ಬದುಕೇ                            
           *




*
ವಿದ್ಯಾ ಕುಂದರಗಿ,
ಉಪನ್ಯಾಸಕರು,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,
ಧಾರವಾಡ
ಮೊ. - 9900221367

ಸೋಮವಾರ, ಜುಲೈ 8, 2013

ಮಕ್ಕಳ ಸಾಹಿತ್ಯ ಹೀಗಿರಲಿ..-ಡಾ.ಪ್ರಕಾಶ ಗ.ಖಾಡೆ

                    ಮಕ್ಕಳ ಸಾಹಿತ್ಯ ಹೀಗಿರಲಿ..
                                                          -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

         ಕನ್ನಡವೂ ಒಂದು ಶಿಕ್ಷಣ ಮಾಧ್ಯಮವಾಗಿ ಗುರುತಿಸಿಕೊಂಡಾಗ ಕನ್ನಡ ಬೋಧಿಸುವ ಅಧ್ಯಾಪಕರಿಗೆ ಕನ್ನಡ ಪಠ್ಯದ ಅಗತ್ಯವಿತ್ತು. ಕನ್ನಡದ ಸರಳ ರಚನೆಗಳನ್ನು ಕಟ್ಟಿಕೊಡುವ ಕೆಲಸ ಆ ಕಾಲದಲ್ಲಿ ಬೆಳಗಾವಿ ಮತ್ತು ಧಾರವಾಡಗಳಲ್ಲಿದ್ದ ಶಿಕ್ಷಕರ ತರಬೇತಿ ಕೇಂದ್ರಗಳಿಂದ ನಡೆಯಿತು.ಹೀಗೆ ನಡೆದ ಪ್ರಕ್ರಿಯೆಯು ಮಕ್ಕಳ ಸಾಹಿತ್ಯದ ರಚನೆಗಳಿಗೆ ಸಾರ್ವತ್ರಿಕತೆಯನ್ನು ಒದಗಿಸಿಕೊಟ್ಟಿತು.ಸಾಹಿತ್ಯದ ಎಲ್ಲ ಪ್ರಕಾರಗಳಿಗಿರುವಷ್ಟೇ ಮೌಲ್ಯಯುತವಾದ ಸ್ಥಾನ ಮಕ್ಕಳ ಸಾಹಿತ್ಯಕ್ಕೆ ಇದೆ.ಸರಳವಾದ ಶಬ್ದ,ಪದಗಳ ಪುನರುಕ್ತಿ,ಲಯಗಾರಿಕೆ,ಪ್ರಾಸ,ನಾಟಕೀಯ ಸಂಭಾಷಣೆ ಮುಂತಾದ ಲಕ್ಷಣಗಳನ್ನು ಪಡೆದುಕೊಂಡಿರುವ ಮಕ್ಕಳ ಸಾಹಿತ್ಯ ಪ್ರಧಾನವಾಗಿ ಮಕ್ಕಳಲ್ಲಿ ಜ್ಞಾನದಾಹವನ್ನು ತಣಿಸಿ ಸೃಜನಾತ್ಮಕತೆಯನ್ನು ,ಕಲ್ಪನಾಶಕ್ತಿಯನ್ನು ಉದ್ಧೀಪನಗೊಳಿಸುತ್ತದೆ.
ಮಕ್ಕಳ ಸಾಹಿತ್ಯವನ್ನು ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಹಂತಗಳಲ್ಲಿ ವಿಂಗಡಿಸಬಹುದು.
1.ಶಿಶು ಪ್ರಾಸದ ರಚನೆಗಳು : ಮೂರರಿಂದ ಆರು ವರ್ಷದ ವಯಸ್ಸಿನ ಮಕ್ಕಳಲ್ಲಿ ಪ್ರಾಣಿ ,ಪಕ್ಷಿಗಳ ಬಗ್ಗೆ ಕುತೂಹಲವಿರುತ್ತದೆ.ಮಗು ತನ್ನ ಪುಟ್ಟ ಕಂಗಳಲ್ಲಿ ಜಗತ್ತನ್ನು ಪರಿಚಯಿಸಿಕೊಳ್ಳುವ ಪರಿಯೇ ಬೆರಗು ಹುಟ್ಟಿಸುತ್ತದೆ.ಇಂಥಲ್ಲಿ ನಮ್ಮ ರಚನೆಗಳು ಪುಟ್ಟ ಪುಟ್ಟ ಸಾಲುಗಳ ಮೂಲಕ ಮಗುವಿನ ಮನಸ್ಸನ್ನು ಸೆಳೆದುಕೊಳ್ಳುವಂತೆ ಇರಬೇಕಾಗುತ್ತದೆ. ‘ಒಂದು ಎರಡು ಬಾಳೆಲೆ ಹರಡು.’, ‘ನನ್ನಪಾಟಿ ಕರಿಯದು ಸುತ್ತು ಕಟ್ಟು ಬಿಳಿಯದು’,‘ಬೇಬಿ ಬೇಬಿ ಸಣ್ಣಾಕಿ’,’ಬಸ್ಸು ಬಂತು ಬಸ್ಸು’..ಇಂಥ ಮೊದಲಾದ ರಚನೆಗಳನ್ನು ಮಕ್ಕಳು ಅಭಿನಯದ ಮೂಲಕ ಕಲಿಯುವ ಪರಿ ಚೈತನ್ಯದಾಯಕವಾಗಿದೆ.ಇಂಥಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸುವುದು ಕೇವಲ ಗಿಳಿ ಪಾಠ ಮಾತ್ರವಾಗಿ ಬಿಡುತ್ತದೆ.ಈ ಅಪಾಯವನ್ನು ಮೀರಿ ನಮ್ಮ ಸಾಹಿತಿಗಳು ಬರೆಯಬೇಕಾಗಿದೆ.
  2. ಅತಿಮಾನುಷ ಕಥೆಗಳು : ಆರರಿಂದ ಒಂಬತ್ತು ವರ್ಷದ ಎಳೆಯ ಮಕ್ಕಳು ಸಾಹಸ,ಚಮತ್ಕಾರಿಕ ಮತ್ತು ನೀತಿದಾಯಕ ಕಥನ ಗೀತೆ,ಕಥೆಗಳಿಗೆ ಮಾರುಹೊಗುತ್ತಾರೆ.ಇಂಥ ರಚನೆಗಳಿಗೆ ಆಕರ್ಷಿತರಾಗುತ್ತಾರೆ.ಅಜ್ಜಿಯ ಕಥೆಗಳು,ಕುತೂಹಲ ತಣಿಸುವ ರಂಜನೀಯ ಕಥೆಗಳು,ಅತಿಮಾನುಷ ಕಥೆಗಳು ಈ ಬಗೆಯ ರಚನೆಗಳ ಮೂಲಕ ಮಕ್ಕಳು ಹೊಸದೊಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ.ಪ್ರಾಣಿ ,ಪಕ್ಷಿಗಳ ಸಾಹಸ ಕಥೆಗಳು,ಕಣ್ಣಿಗೆ ಕಾಣದ ಲೋಕದ ಜನರ ಚಮತ್ಕಾರಗಳು ಈ ವಯಸ್ಸಿನ ಮಕ್ಕಳಿಗೆ ಬೇಕು.ರೋಚಕ ರಚನೆಯ ಸಾಹಿತ್ಯ ನಮ್ಮ ಮಕ್ಕಳ ಸಾಹಿತಿಗಳಿಂದ ಹೆಚ್ಚಾಗಿ ಬರಬೇಕಾಗಿದೆ.
3.ಮೌಲ್ಯಾಧಾರಿತ ರಚನೆಗಳು : ಒಂಬತ್ತರಿಂದ ಹದಿಮೂರು ವರ್ಷ ವಯಸ್ಸಿನ ಮಕ್ಕಳು ಅಕ್ಷರ ಬಲ್ಲವರು ಹಾಗೂ ಒಂದಿಷ್ಟು ತಿಳುವಳಿಕೆ ಉಳ್ಳವರೂ ಆಗಿರುತ್ತಾರೆ.ಇಂಥ ಮಕ್ಕಳಿಗೆ ಸ್ನೇಹ,ಸಹಕಾರ,ರಾಷ್ಟ್ರಪ್ರೇಮ,ಗೌರವ, ಪ್ರಾಮಾಣಿಕತೆ ಮೊದಲಾದ ಮೌಲ್ಯ ಬಿತ್ತುವ ರಚನೆಗಳು ಬೇಕು.ಜೊತೆಗೆ ಚಾರಿತ್ರಿಕ.ಪೌರಾಣಿಕ,ಮಹಾಪುರುಷರ ಕಥೆಗಳು ,ವೈಜ್ಞಾನಿಕ ಅದ್ಭುತಗಳು,ಸಮಕಾಲೀನರ ಸಾಹಸಗಳು ಮೊದಲಾದ ಸಂಗತಿಗಳ ಕಡೆ ಈ ವಯೊಮಾನದ ಮಕ್ಕಳು ಆಕರ್ಷಿತರಾಗುತ್ತಾರೆ.
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದು ಸುಂದರ.
ಇಂಥ ಮೊದಲಾದ ರಚನೆಗಳು ಈ ವಯೋಮಾನದ ಮಕ್ಕಳಿಗೆ ಅರ್ಥವಾಗುವುದರೊಂದಿಗೆ,ತುಂಬಾ ರುಚಿಸುತ್ತವೆ.ಬೇರೆ ಬೇರೆ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಆಸಕ್ತಿಗಳು ಇರುವುದರಿಂದ ಅವರ ಗ್ರಹಣ ಶಕ್ತಿ ಬೇರೆ ಬೇರೆಯಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಬರೆಯಬೇಕಾದ ಅನಿವಾರ್ಯತೆ ಮಕ್ಕಳ ಸಾಹಿತಿಗಳದ್ದಾಗಿರುತ್ತದೆ. ಮಕ್ಕಳ ಮನಸ್ಸು ಬಾಯಿ ತೆರೆದ ಖಾಲಿ ಬುಟ್ಟಿ ಅದರಲ್ಲಿ ಕಸ ತುಂಬದೇ ರಸ ತುಂಬುವ ಕೆಲಸ ಮಾಡಬೇಕಾದ ಜವಾಬ್ದಾರಿ ಮಕ್ಕಳ ಸಾಹಿತಿಗಳಲ್ಲಿದೆ.
ಮಕ್ಕಳ ಸಾಹಿತ್ಯದಲ್ಲಿ ಇವತ್ತು ಹೊಸ ನೀರು ಕಾಣಿಸಿಕೊಳ್ಳಬೇಕಾಗಿದೆ.ಹೊಸ ಭಾವ ಹೊಸ ವಸ್ತು ಹಾಗೂ ವೈವಿಧ್ಯಮಯವಾದ ಛಂದಸ್ಸು ಬಳಸಿ ಬರೆಯುವ ಸಾಹಿತಿಗಳ ಹೊಸ ದಂಡು ಕನ್ನಡದಲ್ಲಿ ಕಾಣಿಸಿಕೊಳ್ಳಬೇಕಾಗಿದೆ, ವಿಜ್ಞಾನ, ವೈದ್ಯಕೀಯ ,ಪರಿಸರ, ಆಕಾಶ ,ಗ್ರಹಣಗಳು, ಕಂಪ್ಯೂಟರ ಮೊದಲಾದ ವಿಷಯ ವಸ್ತುಗಳು ಮಕ್ಕಳ ಸಾಹಿತ್ಯವನ್ನು ಪ್ರವೇಶ ಮಾಡಿವೆ. ಮಕ್ಕಳ ಕುತೂಹಲವನ್ನು ತಣಿಸುತ್ತಿವೆ. ಯಾವುದೇ ಮಗು ಅರ್ಧ ಬೆಳೆದ ಮನುಷ್ಯನಲ್ಲ ಮಕ್ಕಳು ಅವರಷ್ಟಕ್ಕೆ ಪರಿಪೂರ್ಣ ವ್ಯಕ್ತಿಗಳು. ಕಾರಣ ಮಕ್ಕಳ ಮನಸ್ಸನ್ನು ಅರಳಿಸಿ ಕುತೂಹಲ ಕೆರಳಿಸಿ ಅವರದೇ ಬೌದ್ಧಿಕ ಮಟ್ಟದಲ್ಲಿ ಚಿಂತನ ಶೀಲರಾಗುವಂತೆ ಮಾಡುವ ಮತ್ತು ತಮ್ಮ ಸುತ್ತಲ ಪ್ರಪಂಚವನ್ನು ಅರಿಯುವಂತೆ ಮಾಡುವ ಯಾವುದೇ ಬರವಣಿಗೆಯೂ ಮಕ್ಕಳ ಸಾಹಿತ್ಯವೆನಿಸಿಕೊಳ್ಳುತ್ತದೆ.ನಾವು ಬಿಟ್ಟು ಹೋಗುವ ಸಮಾಜದ, ದೇಶದ ಹೊರೆಯನ್ನು ಭಾವಿ ನಾಗರಿಕರಾಗಿರುವ ಮಕ್ಕಳು ತಾನೇ ಹೊರಬೇಕು.ಅದಕ್ಕೆ ಸಜ್ಜುಗೊಳಿಸುವ ಸಾಹಿತ್ಯ ಮಕ್ಕಳ ಸಾಹಿತ್ಯವಾಗಿರುವುದು ಅತ್ಯಂತ ಮುಖ್ಯವಾಗಿದೆ.ಆದರೆ ಒಂದು ಅನುಮಾನ ಇನ್ನು ಮುಂದಿನ ದಿನಮಾನಗಳಲ್ಲಿ  ಬರಬಹುದಾದ ಬದಲಾವಣೆಗಳು ನಮ್ಮ ಉಹೆಗೂ ನಿಲುಕದಿರುವದರಿಂದ ನಾವು ನಮ್ಮ ಮಕ್ಕಳನ್ನು ಯಾವ ಭವಿಷ್ಯತ್ತಿಗೆ ತಯಾರು ಮಾಡಬಹುದು? ಎಂಬ ಪ್ರಶ್ನೆ ಮಕ್ಕಳ ಸಾಹಿತಿಗಳನ್ನು ಕಾಡದೇ ಇರಲಾರದು.
=====================================================================
-
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ
            ಮೊ.9845500890

ಶನಿವಾರ, ಜುಲೈ 6, 2013

ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ-ಡಾ.ಖಾಡೆ

 ವಿಶೇಷ ಲೇಖನ :
                                                   
                              ಕನ್ನಡ ಚುಟುಕು ಸಾಹಿತ್ಯ ಮತ್ತು ಜನಪದ 

                                                                 -ಡಾ.ಪ್ರಕಾಶ ಗ.ಖಾಡೆ
( ಜನತೆಯ ಸಂಸ್ಕೃತಿಯ ಶಿಲಾಶಾಸನಗಳಾಗಿರುವ ಜನಪದರ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.)

       ಕನ್ನಡದಲ್ಲಿ ಈಗ ಚುಟುಕು ಸಾಹಿತ್ಯ ರಚನೆಯ ಭರಾಟೆ ನಡೆಯುತ್ತಿದೆ. ಹಿರಿಯ ತಲೆಮಾರಿನ ಕವಿಗಳೊಂದಿಗೆ ಇವತ್ತು ಹೊಸ ತಲೆಮಾರಿನ ಯುವ ಜನಾಂಗ ಈ ಬಗೆಯ ರಚನೆಯಲ್ಲಿ ತೊಡಗಿರುವುದು ಈ ಪ್ರಕಾರದ ಜನಪ್ರಿಯತೆ ಸಾರುತ್ತದೆ. ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತವಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
      ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಿಕವಾಗಿ ಮನಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯ. ಈ ಬಗೆಯ ರಚನೆಗಳಿಗೆ ಸೀಮೆ-ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನಾಧರಿಸಿ ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲ ಹೊತ್ತು ಚಿಂತನೆಗೆ ತೊಡಗಿಸಬೇಕು.
    ಚುಟುಕು ರಚನೆ ನಮ್ಮ ಅಕ್ಷರಸ್ಥ ಕವಿಗಳ ಕೈಯಲ್ಲಿ ಮಾತ್ರ ರಚನೆ ಆಗುವಂಥದು ಅಲ್ಲ. ಅದು ಅನೇಕ ಬಾರಿ ಅನಕ್ಷರಸ್ಥ ಜನರಾಡುವ ಮಾತಿನಲ್ಲಿ ಹೊರಹೊಮ್ಮುತ್ತದೆ. ಅನುಭವಸ್ಥ ಜನ ಸೃಷ್ಟಿಸುವ ಅನೇಕ ನಾಣ್ನುಡಿ ಗಾದೆಮಾತುಗಳು ಒಂದು ಬಗೆಯಲ್ಲಿ ನಮ್ಮ ಇಂದಿನ ಚುಟುಕು ರಚನೆಗಳನ್ನು ಹೋಲುತ್ತವೆ. ಒಂದು ಉದಾಹರಣೆಯ ಮೂಲಕ ಈ ಮಾತನ್ನು ಸ್ಪಷ್ಟಪಡಿಸಿಕೊಳ್ಳೋಣ. ಹಳ್ಳಿಗಳಲ್ಲಿ ಅನೇಕ ಬಗೆಯ ಜನರನ್ನು ಕಾಣುತ್ತೇವೆ. ಅವರ ವೃತ್ತಿ ಮನೋಭಾವದ ಮೂಲಕ ಅವರನ್ನು ಗುರುತಿಸುತ್ತೇವೆ. ಇಲ್ಲಿ ಒಂದು ಕಲ್ಲು ಎರಡು ಕುಟುಂಬಗಳ ಬದುಕಿಗೆ ಆಧಾರವಾದ ಬಗೆಗೆ ನಮ್ಮ ಜನಪದರಲ್ಲಿ ಒಂದು ನಾಣ್ನುಡಿ ಹೀಗೆ ಹೇಳುತ್ತದೆ.
    ಬಿದ್ದ ಕಲ್ಲ ಅಗಸಗ
    ಎದ್ದ ಕಲ್ಲ ಪೂಜಾರಿಗೆ
    ಇಲ್ಲಿ ಬರುವ ಕಲ್ಲು ಪಡೆದುಕೊಳ್ಳುವ ಕ್ರಿಯಾ ಮೌಲ್ಯವನ್ನು ಗಮನಿಸಿ, ಅಗಸನು ಬಟ್ಟೆ ತೊಳೆಯುವ ಕಾಯಕಕ್ಕೆ ಕಲ್ಲು ಬಳಸಿಕೊಂಡರೆ, ಪೂಜಾರಿ ಅದನ್ನು  ದೇವರು ಮಾಡಿ ಪೂಜೆ ಪುನಸ್ಕಾರಗಳೊಂದಿಗೆ, ಭಕ್ತರಿಂದ ಬರುವ ಪ್ರಸಾದದಿಂದ ತನ್ನ ಮನೆಯನ್ನು ನಿರ್ವಹಿಸಬಲ್ಲವನಾಗುತ್ತಾನೆ. ಇಂಥ ಸಂಗತಿಗಳನ್ನು ಚುಟುಕಾಗಿ ಕಟ್ಟಿಕೊಡುವ ಅನೇಕ ರಚನೆಗಳನ್ನು ನಮ್ಮ ಜಾನಪದ ಭಂಡಾರದಲ್ಲಿ ಸಿಕ್ಕುತ್ತವೆ. ಜಾನಪದವನ್ನೇ ಉಸಿರಾಗಿಸಿಕೊಂಡಿದ್ದ ನಮ್ಮ ಪೂರ್ವಜರು ಬದುಕಿನ ಅನುಭವಾಮೃತವನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರು ಸಣ್ಣ ಸಣ್ಣ ವಾಕ್ಯಗಳಲ್ಲಿ ಹಿಡಿದಿರುವ ಪದಗಳು ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಆಗಿದೆ. ಯಾವುದೇ ಒಂದು ವ್ಯವಸ್ಥೆ ಸರಿ ದಾರಿಯಲ್ಲಿ ನಡೆಯಬೇಕಾದರೆ ಆ ವ್ಯವಸ್ಥೆಗೆ ಒಂದು ನಿರ್ದಿಷ್ಟ ಗುರಿ ಇರಬೇಕು. ಈ ಮಾತನ್ನು ಜನಪದರು ಹೇಳುವುದು ಹೀಗೆ;
         ಹಿರೇರಿಲ್ಲದ ಮನಿ ಅಲ್ಲ,
          ಗುರು ಇಲ್ಲದ ಮಠ ಅಲ್ಲ.

         ವ್ಯವಸ್ಥೆಯನ್ನು ಸರಿದಾರಿಗೆ ತರುವುದು ಅನಿವಾರ್ಯವಾಗಿರುವ ಮುಖಂಡತ್ವವನ್ನು ಈ ರಚನೆ ಸಾರುತ್ತದೆ. ಮನೆ ಮತ್ತು ಮಠಕ್ಕೆ ಒಂದು ಪರಿಪೂರ್ಣತೆ ಬರಬೇಕಾದರೆ ಅದನ್ನು ನಿರ್ವಹಿಸುವ ಕೇಂದ್ರಿಕೃತ ಬದುಕನ್ನು ಇಲ್ಲಿ ಕಾಣುತ್ತೇವೆ. ಇಂದು ರಚನೆಯಾಗುತ್ತಿರುವ ಅನೇಕ ಚುಟುಕುಗಳು ನಮ್ಮ ಬದುಕನ್ನು ಪ್ರತಿನಿಧಿಸುತ್ತಿವೆ. ಇಂದು ಬಾಲ್ಯವಿವಾಹ, ವರದಕ್ಷಿಣೆ, ಮೂಢನಂಬಿಕೆ ಮೊದಲಾದ ಪಿಡುಗುಗಳ ಬಗ್ಗೆ ಅನೇಕರು ಬರೆದಿದ್ದಾರೆ. ಈ ಬಗೆಯ ರಚನೆಗಳನ್ನು ಜಾನಪದರಲ್ಲೂ ಕಾಣಬಹುದು.
        ಅಮ್ಮನವರು
         ಪಟ್ಟಕ್ಕೆ ಬರುವಾಗ,
         ಅಯ್ಯನವರು
         ಚಟ್ಟಕ್ಕೆ ಏರಿದರು.
         ಇದು ಬಾಲ್ಯವಿವಾಹವನ್ನು ಮತ್ತು ಅದರ ದಾರುಣತೆಯ ದುಷ್ಪರಿಣಾಮ ಸೂಚಿಸುವ ರಚನೆ. ವಯಸ್ಸಿನ ಅಂತರ ಅರಿಯದೇ ಬಾಲ್ಯವಿವಾಹ ಮಾಡಿ ಕೈ ತೊಳೆದುಕೊಳ್ಳುವ ಜನರ ಮುಖಕ್ಕೆ ರಾಚುವಂತೆ ಇಂಥ ರಚನೆಗಳನ್ನು ಜಾನಪದರು ಕೊಟ್ಟಿದ್ದಾರೆ.  ಇಂಥದೇ ಇನ್ನೊಂದು ರಚನೆ.
          ಆಡುವ  ಹುಡುಗಿಗೆ,
          ಕಾಡುವ ಕೂಸು.
          ಆಡಿ ನಲಿದಾಡಬೇಕಾದ ವಯಸ್ಸಿನಲ್ಲಿ ಹೆಣ್ಣುಮಗು ಸಂಸಾರದ ಭಾರ ಹೊರುವ ಮತ್ತು ಮಕ್ಕಳ ಪಾಲನೆಯಲ್ಲಿ ತನ್ನ ಬದುಕನ್ನು ಕಳೆದುಕೊಳ್ಳುವ ಚಿತ್ರಣ ಈ ರಚನೆಯಲ್ಲಿದೆ. ಗಾದೆಗಳು ವೇದಕ್ಕೆ ಸಮ ಎಂಬ ಮಾತಿದೆ. ವೇದದಷ್ಟೇ ಮೌಲ್ಯವನ್ನು ನಾವು ನಮ್ಮ ಗಾದೆಗಳಲ್ಲಿ ಗುರುತಿಸಿದ್ದೇವೆ. ಗಾದೆಗಳ ರಚನೆಯ ಹಿಂದೆ ಅನೇಕರ ಬದುಕು ಕೆಲಸ ಮಾಡಿರುತ್ತದೆ. ಈ ಗಾದೆಗಳು ಜಗತ್ತಿನ ಎಲ್ಲ ಜನಾಂಗಗಳಲ್ಲೂ ಬಳಕೆಯಲ್ಲಿವೆ. ಭಾಷೆಯಿರುವ ಕಡೆಯಲ್ಲೆಲ್ಲ ಗಾದೆಗಳಿವೆ. ಗಾದೆ ಇಲ್ಲದ ಭಾಷೆ ಇಲ್ಲ. ಭಾಷೆ ಇಲ್ಲದ ಜನಾಂಗವಿಲ್ಲ. ಗಾದೆಗಳು ಇಂದಿನ ಚುಟುಕು ಸಾಹಿತ್ಯ ರಚನೆಯನ್ನೇ ಹೋಲುತ್ತವೆ.  ಪುರಾಣ ಇತಿಹಾಸಗಳೊಂದಿಗೆ ಅವರ ಜ್ಞಾನಕ್ಷೇತ್ರ ವಿಸ್ತರಿಸುತ್ತದೆ.ಪೂರ್ವಜರ ಅನುಭಾವದ ನುಡಿಗಳು ಯಾವುದಕ್ಕೂ ಹೊರತಾಗಿಲ್ಲ.
        ಹೆಣ್ಣಿನಿಂದ ರಾವಣ ಕೆಟ್ಟ
        ಮಣ್ಣಿನಿಂದ ಕೌರವ ಕೆಟ್ಟ  
ಎಂಬ ಮಾತು ದುರುಳ ಸಂಸ್ಕøತಿಯ ಅವನತಿಯನ್ನು ಬಯಲು ಮಾಡುತ್ತದೆ.ತವರು ಸಂಸ್ಕøತಿಯನ್ನು ಬಣ್ಣಿಸುವ ಮತ್ತು ಪರಿಚಯಿಸುವ ಅನೇಕ ರಚನೆಗಳು ನಮ್ಮ ಜಾನಪದಲ್ಲಿವೆ.ತವರಿನಲ್ಲಿ ಹೆಣ್ಣು ಪ್ರಧಾನ ಮತ್ತು ಕೇಂದ್ರ ಸ್ಥಾನ.ಹೆಣ್ಣಿನ ಸುತ್ತ ಸುತ್ತುವ ಅನೇಕ ಜನಪದ ರಚನೆಗಳು ಅವಳ ಬದುಕನ್ನು ಪರಿಚಯಿಸುವ ವಿಶ್ವಕೋಶಗಳಾಗಿವೆ.
       ಗಂಜಿಯ ಕುಡಿದರೂ
       ಗಂಡನ ಮನಿಲೇಸು
ಎಂಬಲ್ಲಿ ತವರು ಮನೆಯಲ್ಲಿ ಎಷ್ಟು ಆಸ್ತಿ ಇದ್ದರೂ ಅದು ಹೆಣ್ಣಿಗೆ ಕೊನೆಯ ತನP ಜೊತೆ ಇರುವುದಿಲ್ಲ.ಯಾರ ಹಂಗಿಲ್ಲದೇ ಉಣ್ಣುವ ತನ್ನ ಮನೆಯ ಗಂಜೀಯೇ ಶ್ರೇಷ್ಠವಾದುದು ಎಂಬುದು ಜನಪದರ ನೀತಿ ವಾಕ್ಯ.ಉಪಕಾರ ಸ್ಮರಣೆಗೆ ಒಂದು ರಚನೆ ಹೀಗಿದೆ.
       ಕಲ್ಲಲ್ಲಿ ಇಟ್ಟವನ
       ಬೆಲ್ಲದಲ್ಲಿ ಇಡಬೇಕು.
ಎಂಬಲ್ಲಿ ಅಪಕಾರ ಮಾಡಿದರೂ ಉಪಕಾರ ಮಾಡು ಎಂಬ ನೀತಿ ಇದೆ.ವ್ಯಂಗ್ಯ,ವಿಡಂಬನೆಗಳಿಂದಲೂ ಜನಪದರ ರಚನೆಗಳು ಹೊರತಾಗಿಲ್ಲ.ಚುಟುಕು ಕವಿತೆಗಳ ಲಕ್ಷಣಗಳಲ್ಲಿ ವಿಡಂಬನೆ,ಕಟಕಿ,ವ್ಯಂಗ್ಯವು ಪ್ರಧಾನವಾದುದು.
      ಅಂಗಡ್ಯಾಗ ಇರೋದು ಕಪಾಟ
      ನಮ್ಮ ರಾಯರ ತೆಲಿ ಸಪಾಟ
ಎಂಬಲ್ಲಿ ವಿಡಂಬನೆ ಇದೆ.ಜನಪದರ ಕಲ್ಪನೆಯ ಸೊಗಸು ಹೃದಯಪೂರ್ಣವಾದುದು.ತನ್ನ ಗಂಡನ ಹೆಸರು ಹೇಳುವ ಒಡಪಿನ ಒಂದು ರಚನೆ ಹೀಗಿದೆ.
      ಬೆಳದಿಂಗಳ ಬೆಳಕ
      ಕಲ್ಲ ಸಕ್ಕರಿ ಹಳಕ
      ನಕ್ಷತ್ರ ಮ್ಯಾಲ ಕುಂತ
      ಅಕ್ಷರ ಬರೀತಾನ
ಇಂದು ರಚನೆಯಾಗುತ್ತಿರುವ ಚುಟುಕುಗಳು ಒಳಗೊಳ್ಳುವ ಎಲ್ಲ ಲಕ್ಷಣಗಳನ್ನು ಅವಕ್ಕೂ ಮಿಗಿಲಾಗಿ ಜನಪದರ ರಚನೆಗಳಲ್ಲಿ ಕಾಣುತ್ತೇವೆ.ಜನತೆಯ ಸಂಸ್ಕøತಿಯ ಶಿಲಾಶಾಸನಗಳಾಗಿರುವ ಈ ಬಗೆಯ ರಚನೆಗಳು ಯಾವಾಗಲೂ ನಡೆಯುವ ನಾಣ್ಯಗಳು.ಸಂಕೀರ್ಣತೆಯತ್ತ ವಾಲುತ್ತಿರುವ ಇಂದಿನ ಚುಟುಕುಗಳು,ಹನಿಗವನಗಳು ಪ್ರಧಾನವಾಗಿ ಸಮಾಜಮುಖಿಯಾದರೂ ಅವು ಬಯಸುವ ಲಯಗಾರಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಜನಪದರ ಭಂಡಾರದಲ್ಲಿರುವ ಅಪಾರ ಪದಕಟ್ಟುಗಳನ್ನು ಬಿಚ್ಚಿಟ್ಟರೆ ಸಿಗುವ ಮುತ್ತು ರತ್ನಗಳ ರಾಶಿ ಅಚ್ಚರಿ ಹುಟ್ಟಿಸುತ್ತದೆ.ನಮ್ಮ ಯುವ ಪೀಳಿಗೆಯ ಬರಹಗಾರರು ಹನಿಗವನ ರಚನೆಗೆ ತೊಡಗುವ ಮೊದಲು ಜನಪದರ ಆಡುನುಡಿಯ ಸೊಗಸಿನಲ್ಲಿ ಬೆರೆತು ಅವರ ನುಡಿಗಟ್ಟುಗಳನ್ನು ಅರಗಿಸಿಕೊಳ್ಳಬೇಕು.ಅಂದಾಗ ಅಪರೂಪದ ರಚನೆಗಳು ಚುಟುಕು ಸಾಹಿತ್ಯ ಪ್ರಕಾರದಲ್ಲಿ ದಕ್ಕುತ್ತವೆ.ವಿಶಾಲ ಜೀವನಾನುಭವದ ಚುಟುಕು ಸಾಹಿತ್ಯಕ್ಕೆ ಜನಪದವೇ ಮೂಲ ಮತ್ತು ಅನಿವಾರ್ಯವಾಗಿದೆ.
                                                                                            - ಡಾ.ಪ್ರಕಾಶ ಗ.ಖಾಡೆ.
==============================================
ವಿಳಾಸ ; ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ-587103,ಮೊ.-9845500890
           

ಶನಿವಾರ, ಜೂನ್ 29, 2013

ಪುಸ್ತಕ ವಿಮರ್ಶೆ :ನೆಲಮೂಲ ಸಂಸ್ಕೃತಿ.

ಪುಸ್ತಕ ವಿಮರ್ಶೆ
ಜನಪದ ಸಂಸ್ಕೃತಿಯ ಕ್ರಿಯಾಶೀಲತೆಯ ಸಂಕಥನ

                               - ಡಾ.ವೀರೇಶ ಬಡಿಗೇರ


‘ನೆಲಮೂಲ ಸಂಸ್ಕೃತಿ'
 (ಜನಪದ ಲೇಖನಗಳು)
ಡಾ.ಪ್ರಕಾಶ ಗ.ಖಾಡೆ ,
ಕಿಟಕಿ ಪ್ರಕಾಶನ,ನಂ.117,2ನೇ ಕ್ರಾಸ್,ದಕ್ಷಿಣ,
ಅನಿಕೇತನ ರಸ್ತೆ, ಮೈಸೂರು -570023
ಪ್ರಕಟಣೆಯ ವರ್ಷ :2010

ಡಾ. ಪ್ರಕಾಶ್ ಖಾಡೆಯವರು ಹಲವು ವರ್ಷಗಳಿಂದ ಉತ್ತರ ಕರ್ನಾಟಕದ ಜಾನಪದ ವಿವಿಧ ಮಜಲುಗಳ ಮೇಲೆ ಕೆಲಸ ಮಾಡುತ್ತ ಅವುಗಳ ಮೇಲೆ ಬೆಳಕು ಚೆಲ್ಲುತ್ತ ಬಂದ ಗಂಭೀರ ಬರಹಗಾರರಲ್ಲೊಬ್ಬರಾಗಿದ್ದಾರೆ. ಅವರು 29 ಲೇಖನಗಳನ್ನೊಳಗೊಂಡ ‘ನೆಲಮೂಲ ಸಂಸ್ಕøತಿ’ ಕೃತಿಯನ್ನು ಪ್ರಕಟಿಸುವ ಮೂಲಕ ಕರ್ನಾಟಕ ಜನಪದ ಅಧ್ಯಯನಕ್ಕೆ ಹೊಸ ಕೊಡುಗೆ ನೀಡಿದ್ದಾರೆ. ಇದು ಅವರ ಸತತ ಪ್ರಯತ್ನ ಹಾಗೂ ಬದ್ಧತೆಯ ಫಲವೆಂದೇ ನನ್ನ ಭಾವನೆ.
ಖಾಡೆಯವರ ಜನಪದ ಅಧ್ಯಯನದ ಮುಖ್ಯ ಶಕ್ತಿ ಎಂದರೆ ಕ್ಷೇತ್ರಕಾರ್ಯ. ಕ್ಷೇತ್ರಕಾರ್ಯದ ಮೂಲಕ ಅಪರೂಪದ ಕಲಾಪ್ರಕಾರಗಳನ್ನು ಗುರುತಿಸಿ ಪರಿಚಯಿಸುವ ಹಾಗೂ ವಿಶ್ಲೇಷಿಸುವಲ್ಲಿ ಅವರ ವಿಶಿಷ್ಟತೆಯನ್ನು ಕಾಣುತ್ತೇವೆ. ‘ಗರದಿ ಗಮ್ಮತ್ತಿನ ಕೊನೆಯ ಪೆಟ್ಟಿಗೆ’, ‘ಹೊನವಾಡದ ಜೋಗರಾಣಿಗೆ ಸುಡಗಾಡಿನಲ್ಲಿ ಪೂಜೆ’, ಅಪ್ಪಟ ಗ್ರಾಮೀಣ ಕ್ರೀಡೆ ಅಟ್ಟ್ಯಾ ಪಟ್ಟ್ಯಾದಂತಹ ಅಸ್ತಿತ್ವವನ್ನೇ ಕಳೆದುಕೊಂಡಿರುವ ನೋಡಲೂ ಸಿಗಲು ಅಸಾಧ್ಯವಾಗಿರುವ ಕ್ರಿಯಾ ಸಂಪ್ರದಾಯಗಳನ್ನು ದಾಖಲಿಸಿರುವುದು ಮೆಚ್ಚುವಂಥ ಮಾತಾಗಿದೆ.
ಜಾನಪದಕ್ಕೆ ಸಾವಿಲ್ಲ ಅದು ವಿವಿಧ ಆಕಾರದಲ್ಲಿ ಮರುರೂಪ ಪಡೆಯುತ್ತಲೇ ಇರುತ್ತದೆ. ಅಂಥ ಭಿನ್ನರೂಪದ ಪುನರಾವತಾರದ ಹೆಜ್ಜೆಗಳನ್ನು ಇಲ್ಲಿನ ಎಲ್ಲ ಲೇಖನಗಳಲ್ಲಿ ಕಾಣುತ್ತೇವೆ. ‘ಹೊಸಕಾವ್ಯದ ಹುಟ್ಟಿಗೆ ಕಾರಣವಾದ ಲಾವಣಿ ಸಾಹಿತ್ಯ ಜನಸಾಮಾನ್ಯರ ನೆಲೆಯಿಂದ ಹೊರಟು ಕನ್ನಡ ಕಾವ್ಯ ಕ್ಷೇತ್ರವನ್ನು ಹೊಸ ಸಾಧ್ಯತೆಗಳೊಂದಿಗೆ ವಿಸ್ತರಿಸಿದ್ದು  ದಾಖಲಾರ್ಹವಾದುದು.ಕವಿ ಮತ್ತು ಕವಿತೆಯನ್ನು ಒಂದು ಜನಪ್ರಿಯ ನೆಲೆಯಲ್ಲಿ ತಂದು ಜನಸಾಮಾನ್ಯರ ನಾಲಿಗೆಯ ಮೇಲೆ ತಮ್ಮ ರಚನೆಗಳು ಉಳಿಯುವಂತೆ ಮಾಡುವುದರೊಂದಿಗೆ ವಿದ್ವತ್‍ವಲಯವೆಂದು ಹೇಳಿಕೊಂಡು ಬಂದ ವಸಾಹತುಶಾಹಿ ಪ್ರಜ್ಞೆಯ ಮನೋಭಾವದ ಲೇಖಕರನ್ನು ಅಚ್ಚರಿಗೊಳಿಸಿ ನಾದದ ಗುಂಗು ಹಿಡಿಸಿದ ‘ಪರಿಯನ್ನು’ ಖಾಡೆಯವರು ಗುರುತಿಸುವಲ್ಲಿಯೇ ಪುನರಾವತಾರದ ಕಲ್ಪನೆಗಳ ನಿಹಿತಗೊಂಡಿದೆ. ತಮ್ಮ ಪಿಎಚ್.ಡಿ. ಅಧ್ಯಯನದಲ್ಲಿ ನವೋದಯ ಕಾವ್ಯದ ಮೇಲೆ ಜಾನಪದ ಪ್ರಭಾವ ಗುರುತಿಸುವಲ್ಲಿ ಅವರ ತೋರಿದ ಹೊಸತನ ಪರಂಪರೆಯನ್ನೇ ಮುರಿದು ಕಟ್ಟುವ ಕ್ರಮವಾಗಿದೆ.
ಸಂಗ್ರಹ ಎನ್ನುವುದು ಸಂರಕ್ಷಣೆ ಹಾಗೂ ಪೋಷಣೆಯ ಸಂಗೋಪನ ರೂಪ. ನವೋದಯ ಕಾಲದಿಂದ ಹಿಡಿದು ಇಂದಿನವರೆಗೂ ವಿದ್ವಾಂಸರು ಸಂಗ್ರಹಿಸಿದ ಕತೆಗಳು, ಗೀತೆಗಳು, ಒಗಟುಗಳು, ಲಾವಣಿಗಳು, ಅಸಂಖ್ಯ. ಖಾಡೆಯವರು ಅಂಥ ಪರಂಪರೆಯನ್ನು ಮುಂದುವರಿಸಿದ್ದಾರೆ. ವಿಶೇಷವಾಗಿ ಜಾನಪದ ಆಕರಗಳ ಸಂಗ್ರಹ ಕಾರ್ಯಕ್ಕೆ ಬುನಾದಿ ಹಾಕಿದವರು ಗುಳೇದಗುಡ್ಡದ ಬಾಳಿ ಇಂಟೆ (1874) ಹಾಗೂ ಬದಾಮಿಯ ಪರಯ್ಯ ವೀರಭದ್ರಯ್ಯ ಗಣಾಚಾರಿ; ನಾರಾಯಣ ಅಯ್ಯಾಜಿಯವರು ಅನ್ನುವುದು ಮತ್ತೊಂದು ಹೊಸ ವಿಚಾರವಾಗಿದೆ. ಐತಿಹಾಸಿಕ ಲಾವಣಿ ಸಂಗ್ರಹದಲ್ಲಿ ಪ್ಲೀಟರಿಗೆ ಹೆಗಲು ಕೊಟ್ಟು ನಿಂತ ಇವರು ಬಾಗಲಕೋಟ ಜಿಲ್ಲೆಯ (ಆಗಿನ ವಿಜಾಪುರ ಜಿಲ್ಲೆ) ಜಾನಪದ ಸಾಹಿತ್ಯ ಮೊದಲಿಗೆ ದಾಖಲೆಯಾಗುವಂತೆ ಮಾಡಿದ್ದಾರೆ. ನಂತರ ಡಾ. ಬಿ.ಎಸ್. ಗದ್ದಗಿಮಠ ಅವರ ಸಂಗ್ರಹಕಾರ್ಯವಲ್ಲದೆ ಸಂಶೋಧನೆಯನ್ನೇ ಮಾಡಿ ಪದವಿ ಪಡೆದಿದ್ದು ಜಾನಪದಕ್ಕೆ ಅಕಾಡೆಮಿಕ್ ವಲಯದಲ್ಲಿ ಪ್ರಾಶಸ್ತ್ಯವೇ ಇರದ ದಿನಮಾನಗಳಲ್ಲಿ ಎನ್ನುವುದು ಮುಖ್ಯ ಅಂಶ. ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯೇ ಮೊದಲು ಹಾಗೂ ನವೋದಯ ಸಾಹಿತ್ಯದ ಮೊದಲ ಬೇರುಗಳು ಹಲಸಂಗಿಯಿಂದಲೇ ಚಿಗುರಿದ್ದು ಎಂದು ಖಾಡೆಯವರು ಸಾಧಿಸಿ ತೋರಿಸಿರುವುದು ಮೆಚ್ಚತಕ್ಕಂತ ಸಂಗತಿಯಾಗಿದೆ.
ಕ್ಷೇತ್ರದಿಂದ ತರುವ ಸಾಮಾನ್ಯ ಮಾಹಿತಿಗಳನ್ನು ಒಪ್ಪವಾಗಿ ಜೋಡಿಸುವಲ್ಲಿ ಖಾಡೆಯವರ ಪರಿಶ್ರಮ ಎದ್ದು ಕಾಣುತ್ತದೆ. ಕ್ಷೇತ್ರದಿಂದ ಪಡೆದ ಅಪೂರ್ವ ಮಾಹಿತಿಗಳು ಈ ಹೊತ್ತಿಗೆಯಲ್ಲಿವೆ. ಲೇಖನಗಳು ತುಂಬಾ ಸಾಂದರ್ಭಿಕವೆನಿಸಿದರೂ ಅವು ಗರ್ಭೀಕರಿಸಿಕೊಂಡಿರುವ ಮಾಹಿತಿ ಕಡೆಗಣಿಸುವಂಥವಲ್ಲ. ಕೃಷ್ಣಾ ತೀರದ ಒಗಟುಗಳು, ಬದಲಾಗುತ್ತಿರುವ ಜನಪದ ಆಚರಣೆ ಓಕುಳಿ, ಜನಪದ ನಾಗರಪಂಚಮಿ, ತತ್ವಪದ, ರಿವಾಯತ ಪದಗಳು, ಕುಂದರಗಿ ಕಂಬಳಿ ಮುಂತಾದ ಕಲಾ ಪ್ರಕಾರಗಳು ಸಂಪ್ರದಾಯ ಆಚರಣೆಗಳು ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿವೆ. ವಿಶೇಷವಾಗಿ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಿರುವ ಊರುಗಳ ಸಹಜ ಸಂಸ್ಕøತಿ ಸಂಬಂಧಗಳು ಇಂದು ಹರಿಗಡಿದಿವೆ. ಜಾನಪದ ಬದುಕು ಎನ್ನುವುದು ಅದೊಂದು ಸಂಯೋಜಿತ ಬದುಕು ಹಾಗೂ ಸಾವಯವ ಸ್ವಭಾವದ್ದು. ಕೂಡಿ ಕಟ್ಟುವ ಅಲ್ಲಿನ ಕ್ರಿಯಾಶೀಲತೆ ಹಲವು ಸಂಕಥನಗಳಿಗೆ ರೂಪಕೊಡುವಂಥದ್ದು. ಕೃಷಿಭೂಮಿ ಇಲ್ಲವಾಗಿ, ಸಹಜ ಉದ್ಯೋಗಗಳು ಕಡಿಮೆಯಾಗಿ, ಸ್ವಾವಲಂಬಿತನ ಎನ್ನುವುದು ಮನುಷ್ಯರಲ್ಲಿ ಮಾಯವಾಗುತ್ತಿದೆ. ಅಂಥ ಹೊತ್ತಲ್ಲಿ ಕಲಾ ಸಂಪ್ರದಾಯಗಳು ಬದುಕಿನ ರೀತಿ ನೀತಿಗಳು ರೂಪಗೊಳ್ಳಲು ಸಾಧ್ಯವಿಲ್ಲ. ಕಳೆದು ಹೋಗುತ್ತಿರುವ ಅಂತಹ ನೂರಾರು ಸಂವೇದನೆಗಳನ್ನು ಖಾಡೆಯವರು ಇಲ್ಲಿ ದೃಶ್ಯೀಕರಿಸಿದ್ದಾರೆ.
ಒಟ್ಟಿನಲ್ಲಿ ಡಾ. ಪ್ರಕಾಶ ಖಾಡೆಯವರ ಇಲ್ಲಿನ ಎಲ್ಲ ಲೇಖನಗಳು ಒಂದು ವಿಸ್ತಾರವಾದ ಜಾನಪದ ಸಂಸ್ಕೃತಿಯನ್ನು ತೆರೆದು ತೋರುತ್ತಿರುತ್ತವೆ. ಇಲ್ಲಿನ ಅಪೂರ್ವ ಮಾಹಿತಿಗಳು ಹೊಸ ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತವೆ. ಇಲ್ಲಿನ ಬರಹದ ಹಿಂದಿರುವ ಉತ್ಸಾಹ, ಬದ್ಧತೆ, ಹಠ ಇಂಥ ಪ್ರೇರಣೆಗೆ ಕಾರಣವಾಗಿದೆ.
                                - ಡಾ.ವೀರೇಶ ಬಡಿಗೇರ

---------------------------------------------------------
ಡಾ. ವೀರೇಶ ಬಡಿಗೇರ, ಮುಖ್ಯಸ್ಥರು, ಹಸ್ತಪ್ರತಿಶಾಸ್ತ್ರ ವಿಭಾಗ, ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾಲಯ, ಹಂಪಿ,ವಿದ್ಯಾರಣ್ಯ,ಕಮಲಾಪುರ
ತಾ.ಹೊಸಪೇಟ ,ಜಿ.ಬಳ್ಳಾರಿ  ಮೊ.9448845789



ಮಂಗಳವಾರ, ಜೂನ್ 25, 2013

ಜಾನಪದ



ಆಧುನಿಕ ಸಾಹಿತ್ಯದ ಜನಮುಖಿಯ ತಳಪಾಯ “ಜಾನಪದ”

                                                       - ಡಾ. ಪ್ರಕಾಶ ಗ. ಖಾಡೆ

ಜನಪದ ಸಾಹಿತ್ಯ ಜನ ಬದುಕಿದ, ಬದುಕುತ್ತಿರುವ ಎಲ್ಲ ಪ್ರದೇಶಗಳಲ್ಲೂ ಎಲ್ಲ ಕಾಲಕ್ಕೂ
ಉಳಿದುಕೊಂಡು ಬಂದಿದೆ. ಯಾವುದೇ ದೇಶದ ಮೊದಲ ಸಾಹಿತ್ಯ ಆ ದೇಶದ ಜನಪದ ಸಾಹಿತ್ಯವೇ ಆಗಿದೆ. ಈ ಕಾರಣವಾಗಿ ಅದರ ಒಡಲೊಳಗೇ ಉದಿಸಿ ಬಂದ ಶಿಷ್ಟ ಸಾಹಿತ್ಯದ ಬೇರುಗಳು ಜಾನಪದವೇ ಆಗಿರುವುದು ಸರ್ವವಿಧಿತ. ಕಾಲ ಕಾಲಕ್ಕೆ ಕಾವ್ಯದ ರೂಪ ಕಟ್ಟುವಿಕೆಯ ಶೈಲಿ ಬದಲಾಗುತ್ತ ಬಂದರೂ ಜಾನಪದರಿಂದಲೇ ಹೊಸತನ ಪಡೆದುಕೊಂಡು ನೆಲೆನಿಂತಿರುವುದು ಕಾಣುತ್ತೇವೆ. ಇವತ್ತು ತನ್ನ ಸತ್ವ ಸೊಗಡು ಕಳೆದುಕೊಂಡಿರುವ ಶಿಷ್ಟ ಸಾಹಿತ್ಯ ಜೀವಂತವಾಗಲು ಜನಪದ ಸಾಹಿತ್ಯದ ಬೇರಿನಿಂದ ನೀರು ಕುಡಿಯಬೇಕಾಗಿದೆ. ಕೇವಲ ಹಳೆಯದರ ಪಳೆಯುಳಿಕೆಯಾಗದಂತೆ ಜನಪದ ಸಾಹಿತ್ಯ ಇವತ್ತು ಆಧುನಿಕತೆಯ ಶಕ್ತಿ, ಸೌಂದರ್ಯ, ವೈಚಾರಿಕತೆ ಮೈಗೂಡಿಸಿಕೊಂಡು ಬೆಳೆದು ನಿಲ್ಲ ಬೇಕಾದ ಕಾಲ ಬಂದಿದೆ. ಹೀಗಾಗಿ ಜನಪದದಿಂದ ಶಿಷ್ಟ ಸಾಹಿತ್ಯ, ಶಿಷ್ಟ ಸಾಹಿತ್ಯದಿಂದ ಜನಪದ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ ಕೊಡಕೊಳ್ಳುವ ಕಾರ್ಯ ನಡೆದೆ ಇದೆ. ಈ ಮೂಲಕ ಹೃದಯದಲ್ಲಿ ನಿಂತ ಜನಪದರು ವೈಚಾರಿಕ ನೆಲೆಗಟ್ಟಿನಲ್ಲಿ, ವೈಚಾರಿಕ ನೆಲೆಗಟ್ಟಿನಲ್ಲಿದ್ದ ಶಿಷ್ಟರು  ಹೃದಯದಲ್ಲಿ ನಿಂತು ಬದುಕುವ ಸಂದರ್ಭ ಸೃಷ್ಠಿಯಾಗಿದೆ. ‘ಆಧುನಿಕತೆಯಿಂದ ಜನಪದವೂ ಜೀವಂತವಾಗುವುದು. ಜನಪದ ಸಾಹಿತ್ಯದ ಸತ್ವ ಸೊಬಗುಗಳಿಂದ ಇಂದಿನ ಹೆಚ್ಚಿನ ಕವಿಗಳು ಶಿಷ್ಟ ಸಾಹಿತ್ಯ ರಚಿಸುತ್ತಿರುವ ಅವರ ಕಾವ್ಯ ಜೀವಂತವಾಗಿರಲು ಕಾರಣವಾಗಿದೆ. ಇಲ್ಲದಿದ್ದರೆ ಅವರ ರಚನೆಗಳೆಲ್ಲ ಕಾಗದದ ಹೂವುಗಳಾಗುವವು’ಎಂಬ ಚೆನ್ನಣ್ಣ ವಾಲೀಕಾರರ ಮಾತುಗಳು ಜಾನಪದವನ್ನು ಅರಗಿಸಿ ಕೊಂಡ ಶಿಷ್ಟತೆಯ ಪ್ರಸ್ತುತತೆಯನ್ನು ಕಂಡರಿಸುತ್ತದೆ.
                ಆದಾವ ನಮ ಜೋಳ
                ಉಳಿದಾವ ನಮ ಹಾಡ
   ಎನ್ನುವಂತೆ ಜನಪದಕ್ಕೆ ಅಂತ್ಯ ಎಂಬುದು ಇಲ್ಲ. ಅದು ಬೇರೆ ಬೇರೆ ರೂಪದಿಂದ ಹೊರ ಹೊಮ್ಮುತ್ತಲೇ ಇರುತ್ತದೆ. ವೈಜ್ಞಾನಿಕ ನಾಗರಿಕತೆಯ ಹಾಗೂ ಅರ್ವಾಚೀನ ಕಲೆಗಳ ತಾಯಿ ಬೇರುಗಳನ್ನು ಪ್ರಾಚೀನ ಜನಪದದಲ್ಲಿ ಗುರುತಿಸುತ್ತೇವೆ.

                           ಖ್ಯಾತ ವಿದ್ವಾಂಸರಾದ ದೇ.ಜವರೇಗೌಡರು ಹೇಳುವಂತೆ:
“ಮುತ್ತಜ್ಜನೆಂತು ಮೊಮ್ಮಗನಿಗೆ ಪೂಜ್ಯನೋ ಅಂತೆಯೇ ಶಿಷ್ಟಪದಕ್ಕೆ ಜಾನಪದ ಆರಾಧ್ಯವಾಗುತ್ತದೆ. ಶಿಷ್ಟ ಸಾಹಿತ್ಯ ಯಾವಾಗಲೂ ಎಂದಿನಿಂದಲೂ ಜನಪದ ಸಾಹಿತ್ಯಕ್ಕೆ ಋಣಿಯಾಗಿದೆ. ಹೋಮರ್, ವಾಲ್ಮೀಕಿ, ವ್ಯಾಸಾದಿ ಕವಿಗಳೆಲ್ಲರೂ ಅಜ್ಞಾತ ಜನಪದ ಕವಿಗಳಿಗೆ ನಾನಾ ರೀತಿಯಲ್ಲಿ ಋಣಿಗಳಾಗಿದ್ದಾರೆನ್ನುವುದು ಸರ್ವವೇದ್ಯ ಸಂಗತಿಯಾಗಿದೆ.” ಶಿಷ್ಟ ಸಾಹಿತ್ಯ ಮಡುಗೊಂಡು ಪಾಚಿ ಬೆಳೆದು ಬಗ್ಗಡಗೊಂಡು ನಾರುವಂತಾದಾಗ ಜನಪದ ಸಾಹಿತ್ಯ  ವಾಹಿನಿ ಅದರ ಮೇಲೆ ಹರಿದು ಪಾಚಿ ಕೊಳಕುಗಳನ್ನು ಕೊಚ್ಚಿ ನೂತನ ಜೀವನವನ್ನು ನೀಡಿದ್ದುಂಟು. ವಡ್ರ್ಸವರ್ತ, ಬರನ್ಸ,  ಸ್ಕಾಟ್, ಪುಸ್ಕಿನ್, ಕುಮಾರವ್ಯಾಸ, ವಚನಕಾರರು ಈ ಮಾತಿಗೆ ಸಾಕ್ಷಿಯಾಗಿದ್ದಾರೆ. ಅದರಂತೆ ಪಂಪ ತನ್ನ ಕಾವ್ಯದ ಉನ್ನತಿಗೆ ಪ್ರೌಢದ ಜತೆಗೆ ದೇಸೀಯನ್ನು ಸಮೀಕರಿಸಿದ್ದಾನೆ.ಶಿವಶರಣರು ತಮ್ಮ ಹಿಂದಿನ ಚಂಪೂ ಪರಂಪರೆಯನ್ನು ಮುರಿದು ವಚನ ಪರಂಪರೆಯನ್ನು ಪ್ರತಿಷ್ಠಾಪಿಸಲು ಜನಪದ ಸಾಹಿತ್ಯವನ್ನೇ ಆಶ್ರಯಿಸಿದರು. ಜನಪದ ಭಾಷೆ, ಛಂದಸ್ಸು ಶಿಷ್ಟ ಸಾಹಿತ್ಯದ ಹುಟ್ಟಿಗೆ ಮೂಲವಾಗಿದೆ. ಗರತಿಯ  ತ್ರಿಪದಿಯೇ ಶಿಷ್ಟರ ಚೌಪದಿ, ಷಟ್ಪದಿ ಹುಟ್ಟಿಗೆ ಬುನಾದಿಯಾಗಿದೆ. ಜನಪದ ಛಂದಸ್ಸು, ಜೈನರ ಚಂಪೂ, ವೀರಶೈವರ ವಚನ ರಗಳೆ, ಬ್ರಾಹ್ಮಣರ ಷಟ್ಪದಿ, ದಾಸರ ಹಾಡು, ಸರ್ವಜ್ಞನ ತ್ರಿಪದಿಗಳಿಗೆ ಆಶ್ರಯವಾಗಿದೆ.
               ಜನಪದ ಗೀತೆ ಎಲ್ಲವನ್ನು ಒಳಗೊಂಡ ಬಯಲು ಆಲಯ. ಅದು ಉದ್ದೇಶಪೂರ್ವಕವಾಗಿ ಕಲಾತ್ಮಕವಾದುದಲ್ಲ. ಅದರ ಜೀವಂತಿಕೆಯೇ ಅದರ ಕಲಾತ್ಮಕತೆ, ಅನುಭವ ಮತ್ತು ಶಾಸ್ತ್ರರೂಪದ ಇಲ್ಲಿನ ವಸ್ತು ಜನರ ಸಮೂಹ ಕೇಂದ್ರಿತ ಆಸಕ್ತಿ, ಮಾತೃ ನಂಬಿಕೆಗಳ ಮೇಲೆ ನಿಂತಿರುವಂಥದಾಗಿದೆ. ‘ವ್ಯಕ್ತಿ ವ್ಯವಸ್ಥೆಯ ಸಂಬಂಧ, ಸಾಮಾಜಿಕ ರಚನೆ, ಸಂಘರ್ಷ ರೂಪದ ಜೀವನ, ಮಾನವ ಜೀವನದ ಸ್ಥಿತಿಗತಿಗಳ ನೀತಿ, ನಿಯಮ ನಿಷ್ಠೆ, ಸಾರ್ಥಕತೆಗಳು ಆಚಾರ, ವಿಚಾರ, ಸಂಪ್ರದಾಯ ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ’ ಹೀಗೆ ಒಟ್ಟು ಬದುಕಿನ ಪ್ರತಿ ಮಗ್ಗಲುಗಳನ್ನು ಆವರಿಸಿಕೊಂಡಿರುವ ಜನಪದವು ಶಿಷ್ಟ ಪ್ರಕಾರಕ್ಕೆ ತನ್ನ ಕೊಡುಗೆ ನೀಡುತ್ತ ಉಳಿದುಕೊಂಡು ಬಂದಿರುವುದು ಅದರ ಚಲನ ಶೀಲತೆಗೆ ಸಾಕ್ಷಿಯಾಗಿದೆ.    
        ಚಂಪೂ, ವಚನÀ, ಷಟ್ಪದಿ, ನವೋದಯ ಸಾಹಿತ್ಯ ಮುಂತಾಗಿ ಕನ್ನಡ ಕಾವ್ಯ ಪರಂಪರೆಯ ಉದ್ದಕ್ಕೂ ಜಾನಪದದ ಇತಿಹಾಸ ಗುರುತಿಸಬಹುದು.ತ್ರಿಪದಿಗಳು, ಕಥನಕವನಗಳು, ಗೊಂದಲಿಗರ ಹಾಡುಗಳು, ಲಾವಣಿಗಳು, ಕೋಲಾಟದ , ಬಯಲಾಟದ ಪದಗಳು, ಡೊಳ್ಳಿನ ಪದಗಳು.. ಹೀಗೆ ಅನೇಕ ರೀತಿಯ ಪದ್ಯ ರೂಪಗಳು ಬಹುಕಾಲದಿಂದಲೂ ನಡೆದು ಬಂದಿರುವುದು ಇತಿಹಾಸದ ಮುಂದುವರಿಕೆಯಾಗಿದೆ.
ಇಂದಿಗೂ ಜನಪದ ಕಾವ್ಯ ಪರಂಪರೆ ಜೀವಂತವಾಗಿದೆ. ಗೊಂದಲಿಗರು, ಹೆಳವರು ತಾವು ಕಲಿತ ಹಾಡುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ತಾವು ಹೋದೆಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ. ಹಿಮ್ಮೇಳದಲ್ಲಿ ಉಪಯೋಗಿಸಿಕೊಳ್ಳುತ್ತಾರೆ,
                      ಮುಂದೆ ಅವರೂ ಸ್ವತಂತ್ರವಾಗಿ ಹಾಡಬಲ್ಲವರಾಗುತ್ತಾರೆ. ಶಕ್ತರಾದವರು ಹೊಸ ಹಾಡುಗಳನ್ನು ಕಟ್ಟಿಕೊಂಡು ಜೋಡಿಸಿಕೊಳ್ಳುತ್ತಾರೆ. ಕಂಸಾಳೆ ಸಿರಿಯ ದೇವರ ಗುಡ್ಡರು ಗುರುವಿನ ಮೂಲಕ ಹಾಡುಗಳನ್ನು ಕಷ್ಟಪಟ್ಟು ಕಲಿಯುತ್ತಾರೆ ಇದು ಪರಂಪರೆಯಿಂದ ಸಾಗಿ ಬಂದ ಇತಿಹಾಸ ಗುರುತಿಸುತ್ತದೆ.
        ಜಾನಪದಕ್ಕೆ ಪ್ರಭು ಸಂಸ್ಕ್ರತಿಯಲ್ಲಿ ಹುಟ್ಟಿಕೊಂಡ ಸಾಹಿತ್ಯ ತತ್ತ್ವಗಳನ್ನು ಇವತ್ತಿಗೂ ಅನ್ವಯಿಸಿಕೊಳ್ಳುವ ಬಗ್ಗೆ ಹಿ.ಶಿ. ರಾಮಚಂದ್ರೇಗೌಡರ ವಿರೋಧವಿದೆ. ಶ್ರೇಷ್ಠತೆಯ ಮಾನದಂಡಗಳು ವರ್ಗಸಮಾಜ ಮತ್ತು ಬಹುಸಮಾಜದ ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಬೇರೆ ಬೇರೆಯಾಗುತ್ತವೆ. ಕಾವ್ಯ ಧ್ವನಿ-ಸಾಂಸ್ಸøತಿಕ ಧ್ವನಿ ಅದು ಅಲೌಕಿಕ ಧ್ವನಿ ಅಲ್ಲ. ಇದರ ಪರಿಣಾಮವಾಗಿ ಸಂಸ್ಕøತಿ ಹುಟ್ಟಿಕೊಳ್ಳುತ್ತದೆ. ಸಾಹಿತ್ಯ ಸ್ಠೃಷ್ಟಿಯಾಗುತ್ತದೆ. ಇಲ್ಲಿ ಶಿಷ್ಟ ಮತ್ತು ಜನಪದ ಸಾಹಿತ್ಯದ ಸಂದರ್ಭಗಳನ್ನು ಗಮನಿಸಬೇಕು.                                              
     ‘ಶಿಷ್ಟ ಜನಪದವಾದರೆ ಅದಕ್ಕೆ ಚಿರಂತತೆ ಬರುವುದು. ಜನಪದ ಶಿಷ್ಟವಾದರೆ ಅದಕ್ಕೆ ಸಾವುಂಟಾಗುವುದು’ ಎಂಬ ಚೆನ್ನಣ್ಣ ವಾಲೀಕಾರರ ಮಾತನ್ನು ಇಲ್ಲಿ ಗಮನಿಸಬೇಕು. ಶಿಷ್ಟರ ಸಾಹಿತ್ಯ ಶಿಷ್ಟರ ಮಧ್ಯೆಯೇ ಬೆಳೆದು ಅಲ್ಲಿಯೇ ಪರ್ಯಾವಸಾನಗೊಳ್ಳುತ್ತದೆ. ಶಿಷ್ಟ ಸಾಹಿತ್ಯದಲ್ಲಿ ಕವಿ, ಗಮಕಿ, ಕೆಲವೊಮ್ಮೆ ಸಹೃದಯ ಇರುತ್ತಾರೆ. ಶಿಷ್ಟ ಸಾಹಿತ್ಯದ ಪ್ರದರ್ಶನಕ್ಕೆ ಸಂದರ್ಭ ಒದಗಿಸಿಕೊಂಡು ಅದಕ್ಕಾಗಿಯೇ ವೇದಿಕೆ ನಿರ್ಮಿಸಬೇಕು. ಶಿಷ್ಟ ಸಾಹಿತಿ ತಾನೇ ರಚಿಸಿದ ಕವನವನ್ನು ಬಾಯಿಪಾಠ ಮಾಡಿ ಹಾಡಬೇಕಾಗುತ್ತದೆ. ಆದರೆ ಜನಪದದಲ್ಲಿ ಹೀಗಿಲ್ಲ. ಜನಪದ ಗೀತೆಗಳನ್ನು ಹಾಡುವವರು ಅವರದೇ ಆದ ರಾಗ, ಭಾವ, ತಾಳ, ಮೇಳಗಳನ್ನು ಅಳವಡಿಸಿಕೊಂಡು ಹಾಡುತ್ತಾರೆ. ಹಾಗೆ ಹಾಡುವಾಗ ಭಾವಕ್ಕನುಗುಣವಾಗಿ ಸಂದರ್ಭ ತಕ್ಕಂತೆ ಹಿಗ್ಗಿಸುವ ಕುಗ್ಗಿಸುವ ಸಾಮಥ್ರ್ಯವೂ ಅವರದಾಗಿರುತ್ತದೆ. ಆದ್ದರಿಂದ ಸಹೃದಯವೇ ಜನಪದ, ಜಾನಪದವೇ ಸಹೃದಯ. ಜನಪದ ಅದಕ್ಕಾಗಿಯೇ ನಿರ್ಮಿಸಿ ಮತ್ತೆ ಕಿತ್ತೆಸುವ ಅಗತ್ಯವಿಲ್ಲ. ಅದು ಜನಸಾಮಾನ್ಯರ ನಿತ್ಯ ಜೀವನದೊಂದಿಗೆ ಬೆರೆತು ಅವರೊಡನೆಯೇ ಜೀವಿಸುತ್ತದೆ. ಜೊತೆಗೆ ಜನಪದ ಕವಿ ಅನುಭಾವಿಯಾಗಿದ್ದರಿಂದ ಅದನ್ನು ಹೇಳುವ ಚತುರನಾಗಿರುತ್ತಾನೆ. ಹೀಗೆ ಶಿಷ್ಟ ಮತ್ತು ಜನಪದ ಸಾಹಿತ್ಯ ತನ್ನ ನೆಲೆಯಲ್ಲಿ ಸ್ವತಂತ್ರವಾಗಿ ಗುರುತಿಸಿಕೊಳ್ಳುತ್ತವೆ.
        ‘ಜನಪದ ಕಾವ್ಯದಲ್ಲಿ ಚಿಕ್ಕಪುಟ್ಟ ಪದಗಳೇ ಹೆಚ್ಚು, ಕಾರಣ ದೀರ್ಘ ಕವಿತೆಗಳನ್ನು ಕಟ್ಟುತ್ತ ನೆನಪಿಡುವುದು ಕಠಿಣ’ ಎಂದು ಹೇಳುವ ಮಾತಿದೆ. ಆದರೆ ಇದು ತಪ್ಪು. ಜನಪದ ಕಾವ್ಯಗಳು ಕೇವಲ ತ್ರಿಪದಿ ರೂಪದ ಪುಟ್ಟ ಪುಟ್ಟ ಕೃತಿಗಳಾಗದೆ ಅನೇಕ ಮಹಾಕಾವ್ಯಗಳು ಜಾನಪದದ ವಿಸ್ತಾರವನ್ನು ಸಾರಿವೆ.’ ಈ ಕಾವ್ಯಗಳ ಹಿರಿಮೆಯನ್ನು ದೇ. ಜವರೇಗೌಡರು ಹೀಗೆ ದಾಖಲಿಸುತ್ತಾರೆ:
       ‘ಮಲೆಯ ಮಾದೇಶ್ವರ ಕಾವ್ಯ, ದೇವರ ಗುಡ್ಡದ ಮಹಾಕಾವ್ಯ ಕಂಸಾಳೆ ವಾದ್ಯದೊಡನೆ ಏಳೆಂಟು ರಾತ್ರಿ ಅವಿಚ್ಛಿನ್ನವಾಗಿ ಅದರ ಗಾಯನ ಸಾಗುತ್ತದೆ. ವೈವಿಧ್ಯಮಯವಾದ ಛಂದೋಬಂಧಗಳಲ್ಲಿ ರಚಿತವಾದ ಲಲಿತಕಾವ್ಯವಿದು...
                     
ನೀಲಗಾರರಿಗೆ  ಮೀಸಲಾದ ಮಂಟೇಸ್ವಾಮಿ ಕಾವ್ಯ ಒಂದೇ ಒಂದು ಛಂದದಲ್ಲಿ ತಂಬೂರಿಯೊಡನೆ ನಿರರ್ಗಳವಾಗಿ ಹರಿಯುತ್ತದೆ. ಮೊದಲನೆಯದರಲ್ಲಿ ಮೂವತ್ತೆರಡು ಸಾವಿರ ಸಾಲುಗಳೂ, ಎರಡನೆಯದರಲ್ಲಿ ಇಪ್ಪತ್ನಾಲ್ಕು ಸಾವಿರ ಸಾಲುಗಳಿದ್ದು ಕಲೇವಾಲಕ್ಕಿಂತ ಗಾತ್ರದಲ್ಲಿ ದೊಡ್ಡದೆಂದೇ ಹೇಳಬೇಕು. ನೀಲಗಾರರ ಮಂಟೇಸ್ವಾಮಿ ಕಾವ್ಯವನ್ನು ‘ಧರೆಗೆ ದೊಡ್ಡವರ ವಚನ’ವೆಂದು ಕರೆಯುತ್ತಾರೆ. ಸುಮಾರು ಹದಿನೈದು ಸಾವಿರ ಸಾಲುಗಳು ವಿಸ್ತಾರವುಳ್ಳ, ಹತ್ತು ವಿಭಾಗಗಳಲ್ಲಿ ದೊರೆಯುವ ‘ಜನಪದ ಬಸವ ಪುರಾಣ’ವೊಂದು ಸೊಗಸಾದ ಮಹಾಕಾವ್ಯ. ಚೌಡಿಕೆ ಸಂಪ್ರದಾಯದ ಎಲ್ಲಮ್ಮನ ಕಾವ್ಯ ಮತ್ತು ಕಾಡುಗೊಲ್ಲರ ಸಂಪ್ರದಾಯದ ಜುಂಜಪ್ಪನ ಕಾವ್ಯಗಳು ಮಹಾ ಕಾವ್ಯದ ವಿಸ್ತಾರ ಹೊಂದಿರದಿದ್ದರೂ ಗುಣಲಕ್ಷಣಗಳಿಂದ  ಸಮೃದ್ಧವಾದ ಜನಪ್ರಿಯ ಕೃತಿಗಳು’ ಹೀಗೆ ಕೆರೆಯ ಹೊನ್ನಮ್ಮ, ಕಾಳಿಂಗರಾಯ, ಚೆನ್ನಿಗ ಚೆಲುವಯ್ಯ ಮುಂತಾದ ಮಹಾಕಾವ್ಯಗಳು ಕನ್ನಡ ಜನಪದ ಕಾವ್ಯದ ಗುಣ ಗಾತ್ರಗಳೆರಡರಿಂದಲೂ  ಸಮೃದ್ಧವಾಗಿ, ಬೇರೆ ಕಡೆ ಸಿಗದ ಮೌಲಿಕ ಸಾಹಿತ್ಯ ‘ಜಾಗತಿಕ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗ ಬಲ್ಲವುಗಳಾಗಿವೆ’ ಎಂದಿದ್ದಾರೆ.
        ಶಿಷ್ಟ ಸಾಹಿತ್ಯÀ ಕೇವಲ ಮನಸ್ಸಿನ ಸಾಹಿತ್ಯ, ಜನಪದ ಸಾಹಿತ್ಯ ದೇಹ ಮತ್ತು ಮನಸ್ಸಿನ ಸಾಹಿತ್ಯ ಇದು ಕ್ರಿಯೆಯೊಂದಿಗೆ ಹುಟ್ಟುತ್ತದೆ. ಬೀಸುವಾಗ, ಕುಟ್ಟುವಾಗ, ಅಲೆದಾಡುವಾಗ, ದೋಣಿ ನಡೆಸುವಾಗ ಹೀಗೆ ಒಟ್ಟು ಕ್ರಿಯೆಯಲ್ಲಿಯೇ ರೂಪುಗೊಂಡು ಬಳಕೆಯಾಗುತ್ತದೆ. ಶಿಷ್ಟ ಸಾಹಿತ್ಯವು ಏಕಸೃಷ್ಟಿಗೆ, ಏಕ ಶ್ರೇಷ್ಠತೆಗೆ ಸಂಬಂಧಪಟ್ಟಿದಾದರೆ, ಜನಪದ ಸಾಹಿತ್ಯ ಪುನರ್ ಸೃಷ್ಠಿಯಾಗುವಂಥದು. ಒಂದು ವ್ಯಕ್ತಿ ಸೃಷ್ಠಿ, ಮತ್ತೊಂದು ಸಮೂಹ ಸೃಷ್ಠಿ. ಜನಪದ ಸಾಹಿತ್ಯ ಸಮಾಜನಿಷ್ಠವಾಗಿ, ವಿಷಯನಿಷ್ಠವಾಗಿ ಮಾತನಾಡುತ್ತದೆ. ಅದು ವಸ್ತುನಿಷ್ಠವಾಗಿ ಮಾತನಾಡುವುದಿಲ್ಲ. ಹೀಗೆ ಅದರ ಪ್ರತ್ಯೇಕ ಅಸ್ತಿತ್ವಗಳನ್ನು ಗುರುತಿಸಿದರೂ ಅವು ಒಂದರೊಳಗೊಂದು  ಬೆಸೆದುಕೊಂಡು ಸೃಷ್ಟಿಯಾಗುತ್ತಿರುವುದು ಜನಪದದ ಪುನರ್ ಸೃಷ್ಟಿಯ ದ್ಯೋತಕವಾಗಿದೆ.
          ‘ಜಾನಪದಕ್ಕೆ ಸಾವಿಲ್ಲ; ಅದು ಭಿನ್ನ ರೂಪದಲ್ಲಿ ಮುಂದುವರೆಯುತ್ತದೆ’ ಎಂಬ ಮಾತಿನಂತೆ ‘ಜಾನಪದ ಪಳಿಯುಳಿಕೆ’ ಎಂಬ ಮಾತೂ ಇದೆ. ಪಳೆಯುಳಿಕೆ ಎಂದರೆ ಅಪ್ರಸ್ತುತ ಪಳೆಯುಳಿಕೆ ಎಂದಲ್ಲ, ಪಳೆಯುಳಿಕೆಯ ಪುನಃಸೃಷ್ಟಿ ಅಂದರೆ ಪಳೆಯುಳಿಕೆಯನ್ನು ಪುನಃಸೃಷ್ಟಿಸುತ್ತಾ ಪ್ರಸ್ತುತಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಜಾನಪದ ಎಂಬ ತಿದ್ದುಪಡಿಯೊಂದಿಗೆ ತಿಳಿದುಕೊಳ್ಳಬೇಕು ಎಂಬುದು ಅದರ ನಿರಂತರ ಪುನಃಸೃಷ್ಟಿ ಕ್ರಿಯೆಯನ್ನು ಕಾಣುತ್ತೇವೆ. *

ಡಾ.ಪ್ರಕಾಶ ಗ.ಖಾಡೆ, ,ಮನೆ ನಂ135, ಸೆಕ್ಟರ್ ನಂ63, ನವನಗರ, ಬಾಗಲಕೋಟ -587103.
  ಮೊ; 9845500890 .

ಬಾಗಲಕೋಟ ತಾಲೂಕು ಸಮಕಾಲೀನ ಕಾವ್ಯ


                      ಬಾಗಲಕೋಟೆ ತಾಲೂಕು ಸಮಕಾಲೀನ ಕಾವ್ಯ


                                                               -ಡಾ.ಪ್ರಕಾಶ ಗ.ಖಾಡೆ

    ಬಾಗಲಕೋಟೆ ತಾಲೂಕು ಕಾವ್ಯ ಪರಂಪರೆಯು ತುಂಬಾ ಮೌಲಿಕವಾಗಿ ಒಡಮೂಡಿದೆ.ಜಾನಪದ,ವಚನ,ಸೂಫಿ ಪರಂಪರೆಯಿಂದ ಆಧುನಿಕ ಕಾವ್ಯದ ಅಪರೂಪದ ಮಾದರಿಗಳನ್ನು ಕನ್ನಡಕ್ಕೆ ನೀಡಿದ ಕೊಡುಗೆ ಈ ನೆಲದ್ದು.ಘಟಪ್ರಭೆಯ ಒಳ ಸೆಳವು,ಕೃಷ್ಣೆಯ ಸೀಮಾ ಪ್ರವಹಿಸುವಿಕೆಯ ವಿಶಿಷ್ಟ ನದಿ ಸಂಸ್ಕøತಿಯ ಪ್ರತೀಕವಾಗಿ ಇಲ್ಲಿನ ಕಾವ್ಯ ಮೈದೋರಿದೆ.ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜನಪದ ಗೀತೆಗಳನ್ನು ಹಾಡಿಕೊಂಡು ಬರುವ ಜನಪದರಿದ್ದಾರೆ,ವಚನ ಪರಂಪರೆಗೆ ಸಾಕ್ಷಿಯಾಗಿ ಇಲ್ಲಿಯ ಹಲವು ನೆಲೆಗಳು ಪುನೀತವಾಗಿವೆ. ಶಿರೂರಿನ ಶಾಸನ ಕವಿ ಹಬ್ಬಣ್ಣ ನಾಯಕ ಕೀರ್ತಿವಂತ ಕವಿ.ಕನ್ನಡ ದಾಸ ಪರಂಪರೆಯ ಶ್ರೀಮಂತಿಕೆಗೆ ಪ್ರಸನ್ನ ವೆಂಕಟದಾಸರು ಬಾಗಲಕೋಟೆಯನ್ನು ತಮ್ಮ ನೆಲೆಯಾಗಿಸಿಕೊಂಡಿದ್ದರು. ಅನುಭಾವಿ ವರಕವಿ ಮಧುರಚೆನ್ನರಿಗೆ ಜ್ಞಾನ ದೀಕ್ಷೆಯನ್ನು ನೀಡಿದ್ದು ಬಾಗಲಕೋಟೆ.ಆಧ್ಯಾತ್ಮದ ಕಾವ್ಯ ಸರಳತೆಯ ಪ್ರತೀಕವಾಗಿದ್ದ ಜೀವಣ್ಣ ಮಸಳಿ,ಕನ್ನಡ ನವ್ಯ ಕಾವ್ಯದ ಅಪರೂಪದ ಕೃಷಿಗೈದ ಆನಂದ ಝುಂಜರವಾಡ,ದಲಿತ ಬಂಡಾಯದ ಘಟ್ಟಿ ಧ್ವನಿಯಾದ ಡಾ.ಸತ್ಯಾನಂದ ಪಾತ್ರೋಟ, ಆಧುನಿಕ ಕಾವ್ಯಕ್ಕೆ ದೇಸಿಯತೆ ತುಂಬಿದ ಡಾ.ಪ್ರಕಾಶ ಖಾಡೆ, ಸಹೃದಯ ಸಹಬಾಳ್ವೆಯ ಕವಿ ಡಾ.ಮೈನುದ್ದೀನ ರೇವಡಿಗಾರ,ಪ್ರೀತಿ ಬದುಕಿನ ಕಾವ್ಯ ಕಟ್ಟಿದ ಅಬ್ಬಾಸ ಮೇಲಿನಮನಿ, ಮಾನವೀಯ ಸಂಬಂಧಗಳನ್ನು ಹೆಣೆದ ಬಸವರಾಜ ಹೂಗಾರ,ತ್ರಿಪದಿಗಳ ಕಾವ್ಯ ಸೊಗಸು ಚೆಲ್ಲಿದ ಗುರುಸ್ವಾಮಿ ಗಣಾಚಾರಿ,ಚುಟುಕು ಕಾವ್ಯಕ್ಕೆ ಚುರುಕು ತಂದ ಶ್ಯಾಮ ಹುದ್ದಾರ ಮತ್ತು ಪ್ರಲ್ಹಾದ ಹುದ್ದಾರ ಬಾಗಲಕೋಟೆ ತಾಲೂಕಿಗೆ ಸೇರಿದವರೆಂಬುದು ಹೆಮ್ಮೆಯ ಸಂಗತಿ.
ಘಟ್ಟೆಯ ದಂಡೆಯ ಕಬ್ಬಿನ ರಸವು
ಬೆಲ್ಲದ ಅಚ್ಚು ಬಲು ಮೆಚ್ಚು ಮಾಲಿಂಗೇಶಗೆ
ಹಾಸಿದ ಪಟ್ಟಿ ಝಾಡಿಯಂದವ ನೋಡಿರಯ್ಯ
ಸೋನೆ ಮಳೆ ನಡುಗುವ ಚಳಿಗೆ
ಬೆಚ್ಚನ್ನ ಕುಂದರಗಿ ಕಂಬಳಿ ಹೊದಿಯಿರಯ್ಯ
ತುಳಸಿಗಿರಿಯಗ ನಮಿಸಿ ಕಲಾದಗಿ ಚಿಕ್ಕು ಸವಿಯಿರಯ್ಯ.
 ಕವಿ ಹನಮಂತ ತಾಸಗಾಂವಕರ ಅವರ ಈ ಸಾಲುಗಳು ಬಾಗಲಕೋಟ ಜಿಲ್ಲೆಯ ವೈಶಿಷ್ಟ್ಯವನ್ನು ಚಿತ್ರಿಸುತ್ತವೆ.ದಲಿತ ಬಂಡಾಯ ಮನೋಭಾವದ ಕವಿತೆಗಳಿಂದ ಕನ್ನಡ ಕಾವ್ಯಕ್ಕೆ ಪ್ರೀತಿ ಸ್ಪರ್ಷ ನೀಡಿದ ಡಾ.ಸತ್ಯಾನಂದ ಪಾತ್ರೋಟ ಅವರ ಜಾಜಿ ಮಲ್ಲಿಗೆ ಕವನ ಅತ್ಯಂತ ಜನಪ್ರಿಯವಾಗಿದೆ.


ಡಾ.ಸತ್ಯಾನಂದ ಪಾತ್ರೋಟ

ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ
ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ
ಸತ್ತ ನರಗಳ ಸುತ್ತ ಹಸಿದ ಹಾವುಗಳಿಲ್ಲ
ಟೊಂಗೆ ಟೊಂಗೆಯ ತುಂಬ ಬಿರಿವ ಮೊಗ್ಗು.
ಹೀಗೆ ಅವರ ಕಾವ್ಯ ಧ್ವನಿ ರೂಪಿತವಾಗಿದೆ.ನವ್ಯ ನವೋದಯ ಕಾವ್ಯದ ಬೆರೆಕೆಯಲ್ಲಿ ಬರೆಯುತ್ತಿರುವ ಆನಂದ ಝುಂಜರವಾಡ ಕನ್ನಡದ ಮುಖ್ಯ ಕವಿ.
ನನ್ನ ರಸಿಕನಿಗೆ ತಬ್ಬಲು ಮುಗಿಲಂಗಳಕೆ
ನಿಲುಕದ ಸೂಚೀಪರ್ಣ ತೋಳುಗಳೀರಲಿ
ತನ್ನ ಚಿತೆಯ ಕಾವಿನಲ್ಲೂ ನಲ್ಲೆಯ ಮೊಲೆಗಾವು
ಹುಡುಕುವ ನಲ್ಲನ ಉನ್ಮತ್ತ ವಾಂಛೆ ಇರಲಿ
ತನ್ನೇಲ್ಲ ಶೂನ್ಯ ಏಕಾಂತಗಳನ್ನೂ ನಡು-ಸರೋವರದಲ್ಲಿ
ಅಡಗಿ ಗೆಲ್ಲುವೆನೆಂಬ ಪ್ರಾಕೃತಿಕ ಛಲವಿರಲಿ.
 ಝುಂಜರವಾಡರ ಈ ಕವಿತೆಯ ಸಾಲುಗಳು ಅವರ ಕಾವ್ಯ ಶಕ್ತಿಯನ್ನು ಪ್ರಕಟಪಡಿಸುತ್ತವೆ.ಅವರ ‘ಕವಿತಾನ..ಮರತವ್ರಿಗೆ ಕವೀನ್ನ ಮರೀಲಿಕ್ಕೆಷ್ಟೊತ್ತು.’ಎಂಬ ಕಾವ್ಯ ಧ್ವನಿಯ ಹಿಂದಿನ ನೋವು ಸೃಜನತೆಯ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ.
 ನವೋದಯೋತ್ತರ ಕಾವ್ಯದ ಬಿರುಸಿನಲ್ಲಿ ಬರೆಯಲಾರಂಭಿಸಿದ ಡಾ.ಪ್ರಕಾಶ ಖಾಡೆ ಸಂಕೀರ್ಣ ಕಾವ್ಯದ ವಿಶಿಷ್ಟಾಭಿವ್ಯಕ್ತಿ ರಚನೆಗಳನ್ನು ನೀಡಿದ್ದಾರೆ.

ನಾವೂ ಜೋರು ಮಾಡಬಹುದು
ಸಿಕ್ಕವರ ಮೇಲೆ
ಏನು ಉಳಿಯುತ್ತದೆ ಹೇಳಿ
ಇಲ್ಲಿ ಪ್ರೀತಿ ಇರದ ಮೇಲೆ.
ಪ್ರೀತಿಯ ಅರ್ಥವನ್ನು ವಿಸ್ತರಿಸಿದ ಡಾ.ಖಾಡೆ ಅವರ ಈ ಸಾಲುಗಳು ಮಾನವೀಯತೆಯನ್ನು ಸಾರುತ್ತವೆ.ಆಧುನಿಕ ವಚನಗಳನ್ನು ರಚಿಸಿ ಹೆಸರಾದ ಗುರುಸ್ವಾಮಿ ಗಣಾಚಾರಿ ಅವರು
ಭಾವವಿಲ್ಲದ ಕಾವ್ಯ ಜೀವವಿಲ್ಲದ ದೇಹ
ಹಾವ ಭಾವರಿಯದ ನರ್ತಕಿ ನಟನೆ ಪರಿ
ಕಾವ್ಯ ರಸಹೀನ ಗುರುಲಿಂಗ.
ಎಂದು ಕಾವ್ಯ ಕುರಿತು ಹೇಳುತ್ತರೆ.ಗೇಯತೆ,ಪ್ರಾಸಬದ್ಧತೆ,ಲಾಲಿತ್ಯ,ಸುಂದರ ಪದಪುಂಜಗಳು ಇವರ ಕವಿತೆಗಳ ವಿಶೇಷ.ಕವಿ ಅಬ್ಬಾಸ ಮೇಲಿನಮನಿ ಅವರ ಕವಿತೆಗಳು ಜೀವದ್ರವ್ಯದ ಸೆಳಕುಗಳಾಗಿವೆ.
ಗಿಡದ ಟೊಂಗೆ ಟೊಂಗೆಗೂ
ಕಾಳಿಂಗ ಹರಿದಾಡುತ್ತಿದ್ದರೂ
ಹಕ್ಕಿ ಗೂಡು ಕಟ್ಟದೆ
ಬಿಡುವುದಿಲ್ಲ,ನಿಲ್ಲಿಸುವುದಿಲ್ಲ
ಜೀವದೊಲವಿನ ಹಾಡು.
ಮೂರು ಗಳಿಗೆ ಧಾವಂತದಲ್ಲಿ ಬದುಕು ರೂಪಿಸಿಕೊಳ್ಳುವ ಮನುಷ್ಯನ ತುಡಿತಕ್ಕೆ ನಿತಾಂತ ಸಂಭ್ರಮವಿದೆ.ನಾವೇ ಹುಟ್ಟುಹಾಕಿದ ಜಾತಿ,ಸ್ವಜನ ಪಕ್ಷಪಾತ,ಗುಂಪುಗಾರಿಕೆ,ಸ್ವಾರ್ಥ,ದ್ವೇಷ,ಕೌರ್ಯಗಳ ಗೆಲ್ಲಲು ಎದೆಗಾರಿಕೆಯ ವಿಶ್ವಾಸ ಬೇಕಾಗಿದೆ.ಮುಳ್ಳುಗಳ ನಡುವೆ ಅರಳಿಕೊಳ್ಳುವ ಗುಲಾಬಿಯ ಪ್ರೀತಿಯೇ ಅದಕ್ಕೆ ಸಾಕಾಗಿದೆ ಎನ್ನುತ್ತಾರೆ ಕವಿ ಅಬ್ಬಾಸ ಮೇಲಿನಮನಿ.ನವ್ಯ ಕಾವ್ಯದ ಬರವಣಿಗೆಯನ್ನು ಇಂದಿಗೂ ಉಳಿಸಿಕೊಂಡು ಬಂದ ಕವಿ ಅಂಬಾದಾಸ ವಡೆ ಕಾವ್ಯವನ್ನು ಜನಮುಖಿಯಾಗಿಸಿದ್ದಾರೆ.
ಕಾಗಿ ನಿನ್ನ ಮ್ಯಾಲ ಹಾಡ ಕಟ್ಟೊದು
ಹಾಡ ಕಟ್ಟಿ ಹಾಡೂದಂದ್ರ
ಎಂಥಾ ಹಾಸ್ಯಾಸ್ಪದ ಹೌದಲ್ಲೋ
ನಿನ್ನ ಕರೆ ಬಣ್ಣಕ್ಕ ,ಕೆಟ್ಟ ಸ್ವರಕ್ಕ,
ನಿನ್ನ ಖಾಯಂ ಕತ್ತಲಗವ್ಯಾಗಿಟ್ಟ ನನ್ನ ಹಿರ್ಯಾರು
ನಿನ್ನ ಮ್ಯಾಲಿನ ನನ್ನ ಹಾಡಕ್ಕ ಖೊಳ್ಳಂತ ನಗೋದೆನು
ಆಶ್ಚರ್ಯವಿಲ್ಲ ಬಿಡು..
    ಹೀಗೆ ವಡೆಯವರು ಕಾವ್ಯದ ವಸ್ತು ಆಯ್ಕೆಯಲ್ಲಿ ಹೊಸತನ ಹುಡುಕುತ್ತಾರೆ. ಕವಿಗಳಾದ ಡಾ.ವಿಜಯಕುಮಾರ ಕಟಗಿಹಳ್ಳಿಮಠ,ಡಾ.ಬಿ.ಕೆ.ಹಿರೇಮಠ,ಪಿ.ವೈ.ಗಿರಿಸಾಗರ,ಮಲ್ಲಿಕಾರ್ಜುನ ಯಾಳವಾರ,ಧೃವಾಚಾರ್ ಕಾಖಂಡಕಿ,ಸಂಗು ಕೋಟಿ,ಉಮೇಶ ತಿಮ್ಮಾಪುರ,ಗಂಗಾಧರಯ್ಯ ಜಾಲಿಬೆಂಚಿ,ಎಸ್.ಎಸ್.ಹಳ್ಳೂರ,ಬೀರಪ್ಪ ಹಳಮನಿ,ರಾಜು ಯಾದವ, ನಾರಾಯಣ ಯಳ್ಳಿಗುತ್ತಿ,ಮಹಾಬಳೇಶ್ವರ ಗುಡಗುಂಟಿ,ವೀರೇಶ ಖೋತ,ಎಚ್ಕೆ ಆವಟಿ, ಡಾ.ವೀರೇಶ ಬಡಿಗೇರ, ಶಂಕರ ಲಮಾಣಿ,ಶ್ರೀನಿವಾಸ ಅಧ್ಯಾಪಕ ,ದೊಡ್ಡಣ್ಣ ಗದ್ದನಕೇರಿ,ನಾಗರಾಜ ಪೂಜಾರ,ಕೃಷ್ಣ ಕೋರಾ,ಸುಭಾಸ್ಚಂದ್ರ ಜಾಧವ,ಸಿದ್ದರಾಜ ಸೊನ್ನದ, ಶಂಕರ ಹೂಗಾರ,ಮೊದಲಾದವರು ತಾಲೂಕಿನ ಜನಪ್ರಿಯ ಕವಿಗಳು,ಬಾಗಲಕೋಟ ತಾಲೂಕಿನ ಮಹಿಳಾ ಕಾವ್ಯವು ಚೆಲುವಾಗಿ ಚೆಲ್ಲುವರಿದಿದೆ.ಶಾಂತಾಬಾಯಿ ಸಾಬಾದಿ,ರೇಖಾ ಕಾಖಂಡಕಿ,ವೀಣಾ ಶಾಂತೇಶ್ವರ,ಡಾ,ಶಕುಂತಲಾ ದುರ್ಗಿ,ಡಾ.ಮಲ್ಲಿಕಾ ಘಂಟಿ,ಡಾ.ಸರೋಜಿನಿ ಪಾವಟೆ,ಡಾ.ಶಶಿಕಲಾ ಮರಿಬಾಶೆಟ್ಟಿ,ಸುಮಂಗಲಾ ಬಾದಾಮಿ,ರುದ್ರಮ್ಮ ಕೋರಿ,ಎನ್,ರಾಜೇಶ್ವರಿ,ಮಹೇಶ್ವರಿ ಕೋಟಿ,ಸುನಂದಾ ಕನಮಡಿ,ಜಾಸ್ಮೀನ್ ಕಿಲ್ಲೆದಾರ,ಜಯಶ್ರೀ ದೇಶಪಾಂಡೆ,ಸುರೇಖಾ ದತ್ತಾತ್ರೇಯ,ಹೇಮಾ ದೇಸಾಯಿ,ಮಂಜುಳಾತಾಯಿ ಅಂಗಡಿ,ರಾಜೇಶ್ವರಿ ಕಂಠಿ,ಗೌರಿ ಕಂಠಿ, ಗುರಮ್ಮ ಸಂಕೀನ,ಸಂಗೀತಾ ಸಿಕ್ಕೇರಿ,ಮೀನಾಕ್ಷಿ ಮುಂಡಗನೂರ,ವೀರಮ್ಮ ಪಾಟೀಲ,ಮಹಾದೇವಿ ಹೊಸಮನಿ ಮೊದಲಾದವರು ಕಾವ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.ಒಟ್ಟಾರೆ ಘಟಪ್ರಭೆಯ ತಟದ ಬಾಗಿಲು ಕೋಟೆಗೆ ಸಮಕಾಲೀನ ಕಾವ್ಯ ತೋರಣ ಹಚ್ಚ ಹಸುರಿನಿಂದ ಕೂಡಿದೆ. #